ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ಧರ್ಮಸ್ಥಳದಲ್ಲಿ ನಡೆದಿವೆ ಎನ್ನಲಾದ ಅಸಹಜ ಸಾವಿನ ಪ್ರಕರಣಗಳ ಕುರಿತು ಜನರ ಅಪೇಕ್ಷೆಯಂತೆ ಈಗಾಗಲೇ ಎಸ್ಐಟಿ ತನಿಖೆ ಆರಂಭಿಸಿದೆ. ಎಸ್ಐಟಿ ತನಿಖೆ ವರದಿ ಬರುವವರೆಗೂ ನಾವು ಏನೂ ಮಾಹಿತಿ ನೀಡುವುದಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
ದಾವಣಗೆರೆಯಲ್ಲಿ ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈಗಾಗಲೇ ಸಿಒಡಿ ತನಿಖೆಯನ್ನು ಬಿಕ್ಲು ಶಿವು ಕೊಲೆ ವಿಚಾರಣೆ ನಡೆಯುತ್ತಿದೆ. ಬೈರತಿ ಬಸವರಾಜ್ ಅಲ್ಲ ಯಾರೇ ಇದ್ದರೂ ತನಿಖೆ ನಂತರ ಗೊತ್ತಾಗಲಿದೆ. ತಪ್ಪಿತಸ್ಥರಿಗೆ ಕಾನೂನಿನ ಪ್ರಕಾರ ಶಿಕ್ಷೆಯಾಗಲಿದೆ. ಎಂದು ಸಚಿವರು ಹೇಳಿದರು.
ಸೂಪರ್ ಸಿಎಂ ರೀತಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ ಅವರು ವರ್ತಿಸುತ್ತಿದ್ದಾರೆ ಎಂಬ ಆರೋಪದ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಗೃಹ ಸಚಿವರು, ಅವರ ಆರೋಪದಲ್ಲಿ ಯಾವುದೇ ಸತ್ಯಾಂಶವಿಲ್ಲ, ಇದೇನು ಹೊಸದಲ್ಲ. ಯಾವತ್ತೂ ಕೂಡಾ ನಮ್ಮ ಅಖಿಲ ಭಾರತ ಕಾಂಗ್ರೆಸ್ ಪಕ್ಷದಲ್ಲಿ ಪ್ರಧಾನ ಕಾರ್ಯದರ್ಶಿಗಳನ್ನು ಒಂದೊಂದು ರಾಜ್ಯಕ್ಕೆ ನೇಮಕ ಮಾಡುತ್ತಾರೆ. ಹಾಗೆಯೇ, ನಮ್ಮ ರಾಜ್ಯಕ್ಕೆ ಅವರನ್ನು(ಸುರ್ಜೇವಾಲಾ) ನೇಮಕ ಮಾಡಿದ್ದಾರೆ.
ಚುನಾವಣೆಗೆ ಮೊದಲು ಇದ್ರು, ಈಗಲೂ ಇದ್ದಾರೆ. ಪಕ್ಷದ ಪ್ರಣಾಳಿಕೆಯಲ್ಲಿ ನಾವು ಜನರಿಗೆ ಕೊಟ್ಟಿರುವ ಭರವಸೆಯನ್ನು ಅನುಷ್ಠಾನ ಮಾಡಿದ್ದಾರೆಯೇ, ಇಲ್ಲವೆ ಎಂದು ಆಗಾಗ್ಗೆ ಬಂದು ನೋಡುತ್ತಾ ಇರುತ್ತಾರೆ. ಅದು ನಮ್ಮ ಪಕ್ಷದ ಜವಾಬ್ದಾರಿ ಕೂಡ. ಹಾಗಾಗಿ ಅವರು ಬರ್ತಾರೆ, ಹೋಗ್ತಾರೆ. ಯಾವ ಅಧಿಕಾರಿಗಳೊಂದಿಗೆ ಮಾತನಾಡಿಲ್ಲ ಹಾಗೂ ಸೂಚನೆಯನ್ನೂ ಕೊಟ್ಟಿಲ್ಲ. ಆಡಳಿತದಲ್ಲಿ ಅವರದ್ದು ಯಾವುದೇ ರೀತಿಯ ಹಸ್ತಕ್ಷೇಪ ಇಲ್ಲ.
ಬಿಜೆಪಿಯವರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆಯೇ ಹೊರತು, ಅದರಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಹೇಳಿದ್ದಾರೆ. ಸುರ್ಜೇವಾಲಾ ಅವರು ಶಾಸಕರ ಜೊತೆಗೆ ಒನ್ ಟು ಒನ್ ಮೀಟಿಂಗ್ ಮಾಡುತ್ತಿದ್ದಾರೆ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅದು ನಮ್ಮ ಪಕ್ಷದ ಆಂತರಿಕ ವಿಚಾರ. ಅದಕ್ಕೂ ಮತ್ತು ಭಾರತೀಯ ಜನತಾ ಪಾರ್ಟಿಗೂ ಏನು ಸಂಬಂಧ ಇದೆ? ಎಂದು ಪ್ರಶ್ನಿಸಿದರು.

