ಬಿಪಿಎಲ್ ಕಾರ್ಡ್ ಗಳ ಪರಿಷ್ಕರಣೆ ತಾತ್ಕಾಲಿಕ ಸ್ಥಗಿತ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದಲ್ಲಿ ಬಿಪಿಎಲ್​​ ಕಾರ್ಡ್​ಗಳ ರದ್ದು ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯಾದ್ಯಂತ ವ್ಯಾಪಕ ಟೀಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಸದ್ಯಕ್ಕೆ ಬಿಪಿಎಲ್ ಕಾರ್ಡ್ ಗಳ ಪರಿಷ್ಕರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ವಿಧಾನಸೌಧದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಸಚಿವ ಕೆ. ಹೆಚ್ ಮುನಿಯಪ್ಪ
, ಸರ್ಕಾರಿ ನೌಕರರು ಮತ್ತು ಆದಾಯ ತೆರಿಗೆ ಪಾವತಿದಾರರನ್ನು ಹೊರತುಪಡಿಸಿದರೆ, ಯಾವುದೇ ಕಾರ್ಡ್‌ಗಳನ್ನು ರದ್ದು ಮಾಡುವುದಿಲ್ಲ, ಎಲ್ಲ ಬಿಪಿಎಲ್ ಕಾರ್ಡ್ ಗಳು ಯಥಾಸ್ಥಿತಿಯಲ್ಲಿ ಮುಂದುವರೆಯಲಿವೆ. ಮುಂದಿನ ದಿನಗಳಲ್ಲಿ ಪರಿಷ್ಕರಣೆಗೆ ಒಳಪಡಿಸಿ ಸೂಕ್ತ ತೀರ್ಮಾನ ಕೈಗೊಳ್ಳುವವರೆಗೂ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ಮೇರೆಗೆ ಬಡವರಿಗೆ ಅನ್ಯಾಯವಾಗದಂತೆ ಈಗಾಗಲೇ ಪರಿಷ್ಕರಣೆಗೆ ಒಳಪಟ್ಟು, ಅಮಾನತುಗೊಂಡಿರುವ ಕಾರ್ಡ್‌ಗಳನ್ನು ಒಂದು ವಾರದೊಳಗಾಗಿ ನೀಡಿ ಅಕ್ಕಿ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದರು.

ಪಾನ್​ ಕಾರ್ಡ್​​​​ಗಳಿಂದ ಹಲವು ಅಂಶ ಬಯಲು: ಪಾನ್‌ಕಾರ್ಡ್‌ಆಧಾರಿತ ಪರಿಶೀಲನೆಯ ವೇಳೆ ಕೆಲವರು ಆದಾಯ ತೆರಿಗೆ ಪಾವತಿಗೆ ವಿಳಂಬವಾಗಿ ದಂಡ ವಿಧಿಸಿಕೊಂಡಿದ್ದಾರೆ. ಅಲ್ಲಿಗೆ ಅವರು ಆದಾಯ ತೆರಿಗೆ ಪಾವತಿದಾರರು ಎಂಬುದು ಖಚಿತವಾಗಿದೆ. ಇನ್ನು ಕೆಲವರು ಸರ್ಕಾರಿ ನೌಕರರಿದ್ದಾರೆ. ಕೇಂದ್ರ ಸರ್ಕಾರದ ಮಾನದಂಡಗಳ ಅನುಸಾರವೇ 2 ತಿಂಗಳಿನಿಂದ ರಾಜ್ಯ ಸರ್ಕಾರ ಬಿಪಿಎಲ್‌ಕಾರ್ಡ್‌ಗಳ ಪರಿಶೀಲನೆ ಆರಂಭಿಸಿತ್ತು. ಈವರೆಗೂ 3.81 ಲಕ್ಷ ಕಾರ್ಡ್‌ಗಳನ್ನು ಪರಿಷ್ಕರಿಸಲಾಗಿತ್ತು. ಒಟ್ಟು ಪರಿಷ್ಕರಣೆಯಾದ ಕಾರ್ಡ್‌ಗಳಲ್ಲಿ 98,483 ಕಾರ್ಡ್‌ದಾರರು ಆದಾಯ ತೆರಿಗೆ ಪಾವತಿ ಮಾಡುತ್ತಿದ್ದು, 4,036 ಕಾರ್ಡ್‌ದಾರರು ಸರ್ಕಾರಿ ನೌಕರರಾಗಿದ್ದಾರೆ ಎಂದು ಹೇಳಿದ್ದಾರೆ.

ಇವರುಗಳ ಬಿಪಿಎಲ್‌ಕಾರ್ಡ್‌ಗಳನ್ನು ರದ್ದು ಮಾಡುವ ತೀರ್ಮಾನ ತೆಗೆದುಕೊಂಡಿದ್ದೇವೆ. ಉಳಿದಂತೆ ಯಾವುದೇ ಕಾರ್ಡ್‌ಗಳು ರದ್ದುಗೊಳ್ಳದೇ 2 ತಿಂಗಳ ಮೊದಲಿದ್ದಂತೆ ಯಥಾಸ್ಥಿತಿಯಲ್ಲಿ ಮುಂದುವರೆಯಲಿವೆ ಎಂದು ಸಚಿವರು ತಿಳಿಸಿದರು.
ತಾತ್ಕಾಲಿಕವಾಗಿ ಅಮಾನತುಗೊಂಡಿರುವ ಕಾರ್ಡ್‌ಗಳನ್ನು ಒಂದು ವಾರದೊಳಗಾಗಿ ಲಾಗಿನ್‌ಗೆ ಒಳಪಡಿಸಿ ಮುಂದಿನ ವಾರದಿಂದ ಅಕ್ಕಿ ವಿತರಣೆ ಮಾಡಲಾಗುತ್ತದೆ ಎಂದು ಸಚಿವರು ಮಾಹಿತಿ ನೀಡಿದರು.

ಅತಿ ಹೆಚ್ಚು ತೆರಿಗೆದಾರರು;
ಮಹಾರಾಷ್ಟ್ರ ಹೊರತುಪಡಿಸಿದರೆ ಕರ್ನಾಟಕ ಹೆಚ್ಚು ಆದಾಯ ತೆರಿಗೆ ಪಾವತಿ ಮಾಡುವ ಎರಡನೇ ರಾಜ್ಯವಾಗಿದೆ. ಆದರೂ ಬಿಪಿಎಲ್‌ಕಾರ್ಡ್‌ಗಳ ಪ್ರಮಾಣ ಶೇ. 66 ರಷ್ಟಿದೆ. ಬೇರೆ ಯಾವ ರಾಜ್ಯಗಳಲ್ಲೂ ಬಿಪಿಎಲ್‌ಕಾರ್ಡ್‌ಪ್ರಮಾಣ ಶೇ.50 ದಾಟಿಲ್ಲ. ಆದರೆ
, ಇದು ನಮಲ್ಲಿ ಹೆಚ್ಚಿರುವ ಕಾರಣ ಪರಿಷ್ಕರಣೆ ಮಾಡಲು ಎರಡು ತಿಂಗಳ ಹಿಂದೆ ನಿರ್ಧರಿಸಲಾಗಿತ್ತು. ಅಧಿಕಾರಿಗಳು ಕಷ್ಟಪಟ್ಟು ಕೆಲಸ ಮಾಡಿದ್ದಾರೆ. ಪ್ಯಾನ್‌ಕಾರ್ಡ್‌ಆಧರಿಸಿ ಪರಿಷ್ಕರಣೆ ನಡೆದಿದೆ. ಶೇ.1 ಅಥವಾ 2 ರಷ್ಟು ಗೊಂದಲಗಳಾಗಿವೆ. ಅರ್ಹರ ಕಾರ್ಡ್‌ಗಳು ಸಮಸ್ಯೆಗೊಳಗಾಗಿರಬಹುದು. ಏನೇ ಲೋಪಗಳಾಗಿದ್ದರೂ ಅದನ್ನು ಸರಿಪಡಿಸಲಾಗುವುದು ಮತ್ತು ಇದರ ಸಂಪೂರ್ಣ ಹೊಣೆಯನ್ನು ನಾನೇ ಹೊತ್ತುಕೊಳ್ಳುತ್ತೇನೆ ಎಂದು ಸಚಿವರು ಹೇಳಿದರು.

ಬಿಪಿಎಲ್‌ನಿಂದ ಎಪಿಎಲ್‌ಗೆ:
ಕೇಂದ್ರ ಸರ್ಕಾರ ಬಿಪಿಎಲ್‌ಕಾರ್ಡ್‌ಗಳ ಪರಿಷ್ಕರಣೆ ಮಾಡಿದ್ದು
, 5.08 ಕೋಟಿ ಕಾರ್ಡ್‌ಗಳನ್ನು ರದ್ದು ಮಾಡಿದೆ. ರಾಜ್ಯದಲ್ಲಿ 8,647 ಕಾರ್ಡ್‌ಗಳನ್ನು ಅಮಾನತುಗೊಳಿಸಿದೆ. 59,379 ಕಾರ್ಡ್‌ಗಳನ್ನು ಬಿಪಿಎಲ್‌ನಿಂದ ಎಪಿಎಲ್‌ಆಗಿ ಪರಿವರ್ತಿಸಿದೆ. ಇದರಲ್ಲೂ 16,806 ಕಾರ್ಡ್‌ಗಳನ್ನು ಬಿಪಿಎಲ್‌ಆಗಿಯೇ ಮತ್ತೆ ಮುಂದುವರೆಸಲಾಗಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಅಂತ್ಯೋದಯ ಅನ್ನಯೋಜನೆಯಡಿ 10,68,028 ಕಾರ್ಡ್‌ಗಳಿವೆ. ಬಿಪಿಎಲ್‌ಕಾರ್ಡ್‌ಗಳು 1,02,44,435 ಇವೆರಡೂ ಸೇರಿ 1,13,12,463 ಕಾರ್ಡ್‌ಗಳಿವೆ. ರಾಜ್ಯಸರ್ಕಾರ 11,84,425 ಕಾರ್ಡ್‌ಗಳನ್ನು ನೀಡಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ನೀಡಿರುವುದು ಹಾಗೂ ಅಂತ್ಯೋದಯ ಅನ್ನ ಯೋಜನೆಯಡಿ 1,24,97,088 ಕಾರ್ಡ್‌ಗಳನ್ನು ನೀಡಲಾಗಿದೆ. ಆದ್ಯತೆ ಇರುವ ಕುಟುಂಬಗಳಿಗೆ (ಎಪಿಎಲ್‌) 25,62,343 ಕಾರ್ಡ್‌ಗಳಿವೆ. ರಾಜ್ಯದಲ್ಲಿ ಒಟ್ಟಾರೆ 1,50,59,431 ಕಾರ್ಡ್‌ಗಳಿದ್ದು, ಇದರಲ್ಲಿ 1,02,509 ಕಾರ್ಡ್‌ಗಳನ್ನು ಮಾತ್ರ ಪರಿಷ್ಕರಣೆ ಮಾಡಲಾಗಿದೆ. ಉಳಿದಂತೆ ಎಲ್ಲಾ ಕಾರ್ಡ್‌ಗಳು ಯಥಾಸ್ಥಿತಿಯಲ್ಲಿ ಮುಂದುವರೆಯಲಿವೆ ಎಂದು ಸಚಿವ ವಿ.ಮುನಿಯಪ್ಪ ತಿಳಿಸಿದರು.

 ಮತ್ತಷ್ಟು ಮಂದಿ ಅರ್ಜಿ ಸಲ್ಲಿಸಿದ್ದಾರೆ: ಕಳೆದ ಎರಡು ವರ್ಷಗಳಿಂದ 2.95 ಲಕ್ಷ ಅರ್ಜಿಗಳು ಬಾಕಿ ಉಳಿದಿದ್ದವು. ಅವುಗಳನ್ನು ಪರಿಷ್ಕರಿಸಿ 2,69,536 ಮಂದಿಗೆ ಕಾರ್ಡ್‌ನೀಡಿದ್ದು, ಅವರು ಅಕ್ಕಿ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ಶೇ.66ರಷ್ಟು ಬಿಪಿಎಲ್‌ಕಾರ್ಡ್‌ಗಳಿದ್ದರೂ ಮತ್ತಷ್ಟು ಮಂದಿ ಅರ್ಜಿ ಸಲ್ಲಿಸಿದ್ದಾರೆ. ಸದ್ಯಕ್ಕೆ ಸ್ಥಗಿತಗೊಂಡಿರುವ ಪರಿಷ್ಕರಣೆ ಕಾರ್ಯವನ್ನು ಮತ್ತೆ ತೆಗೆದುಕೊಂಡು ಎಲ್ಲವನ್ನೂ ಸರಿಪಡಿಸಿದ ಬಳಿಕ ಹೊಸ ಕಾರ್ಡ್‌ಗಳ ಪರಿಶೀಲನೆಯನ್ನು ಕೈಗೆತ್ತಿಕೊಳ್ಳುವುದಾಗಿ ಮುನಿಯಪ್ಪ ಅವರು ತಿಳಿಸಿದರು. ಅನ್ನಭಾಗ್ಯ ಯೋಜನೆಯಡಿ ಆಗಸ್ಟ್‌ತಿಂಗಳವರೆಗೆ ಹಣವನ್ನು ಫಲಾನುಭವಿಗಳ ಖಾತೆಗೆ ಪಾವತಿಸಲಾಗಿದೆ. ಸೆಪ್ಟೆಂಬರ್‌, ಅಕ್ಟೋಬರ್‌ತಿಂಗಳ ನಗದನ್ನು ಒಂದು ವಾರದೊಳಗಾಗಿ ಬಿಡುಗಡೆ ಮಾಡುವುದಾಗಿ ಹೇಳಿದರು.

 

- Advertisement -  - Advertisement - 
Share This Article
error: Content is protected !!
";