ಚಂದ್ರವಳ್ಳಿ ನ್ಯೂಸ್, ನವದೆಹಲಿ:
ಕೇಂದ್ರ ಸರ್ಕಾರವು ಭಯೋತ್ಪಾದನೆ ಮತ್ತು ನಕ್ಸಲ್ ವಾದವನ್ನು ಸಂಪೂರ್ಣ ಶೂನ್ಯ ಸಹಿಷ್ಣುತೆ ನೀತಿಗೆ ತರಬೇಕಾಗಿದ್ದು ಈ ವಿಚಾರದಲ್ಲಿ ತಮ್ಮ ಸರ್ಕಾರ ಅಚಲ ಬದ್ಧತೆ ಹೊಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪುನರುಚ್ಚರಿಸಿದ್ದಾರೆ.
ರೈಸಿಂಗ್ ನಾರ್ತ್ ಈಸ್ಟ್ ಇನ್ವೆಸ್ಟರ್ಸ್ ಸಮ್ಮಿತ್ ಉದ್ಘಾಟನಾ ಅಧಿವೇಶನದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಈಶಾನ್ಯ ಭಾರತ ರಾಜ್ಯಗಳ ಸಂಪೂರ್ಣ ಸಾಮರ್ಥ್ಯವನ್ನು ತೋರಿಸಲು ಶಾಂತಿ ಮತ್ತು ಭದ್ರತೆ ಅತ್ಯಗತ್ಯ ಎಂದು ಒತ್ತಿ ಹೇಳಿದರು.
ಒಂದು ಕಾಲದಲ್ಲಿ ಹಿಂಸಾಚಾರದಿಂದ ಬಳಲುತ್ತಿದ್ದ ಈಶಾನ್ಯ ಪ್ರದೇಶವು ಈಗ ಪರಿವರ್ತನೆ ಮತ್ತು ತ್ವರಿತ ಅಭಿವೃದ್ಧಿಯ ಹಾದಿಯಲ್ಲಿದೆ ಎಂದು ಮೋದಿ ಅವರು ತಿಳಿಸಿದರು.
ಈಶಾನ್ಯ ಭಾಗದ 10,000 ಕ್ಕೂ ಹೆಚ್ಚು ಯುವಕರು ಕಳೆದ ಒಂದು ದಶಕದಿಂದ ಹಿಂಸಾಚಾರ ತ್ಯಜಿಸಿ ಮುಖ್ಯವಾಹಿನಿಗೆ ಬಂದಿದ್ದಾರೆ ಎಂದು ಅವರು ಹೇಳಿದರು. ಇದು ಬದಲಾವಣೆ ಮತ್ತು ಸ್ಥಿರತೆಯ ಪ್ರಬಲ ಸಂಕೇತವಾಗಿದೆ ಎಂದು ಮೋದಿ ಅವರು ಶ್ಲಾಘಿಸಿದರು.
ಈಶಾನ್ಯ ಭಾಗವನ್ನು ಕೇವಲ ಗಡಿಭಾಗ ಎಂದು ಕರೆಯುತ್ತಿದ್ದ ಕಾಲವಿತ್ತು. ಈಗ ಅದು ಬೆಳವಣಿಗೆಯ ಮುಂಚೂಣಿಯಲ್ಲಿದೆ. ಈಶಾನ್ಯ ಭಾರತ ದೇಶದ ಬೆಳವಣಿಗೆಯ ಹೊಸ ಕೇಂದ್ರ ಬಿಂದು ಎಂದು ಪ್ರಧಾನಿಗಳು ತಿಳಿಸಿದರು.
EAST ಎಂದರೆ ಸಬಲೀಕರಣ, ಕಾರ್ಯ, ಬಲವರ್ಧನೆ ಮತ್ತು ಪರಿವರ್ತನೆ, ಇದು ಪ್ರದೇಶದ ಸಮಗ್ರ ಅಭಿವೃದ್ಧಿಗಾಗಿ ಕೇಂದ್ರೀಕೃತ ಕಾರ್ಯಸೂಚಿಯನ್ನು ಪ್ರತಿಬಿಂಬಿಸುತ್ತದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಇಂದಿನ ಶೃಂಗಸಭೆಯಲ್ಲಿ ಉನ್ನತ ಮಟ್ಟದ ಉದ್ಯಮ ನಾಯಕರಾದ ಮುಖೇಶ್ ಅಂಬಾನಿ, ಗೌತಮ್ ಅದಾನಿ, ಅನಿಲ್ ಅಗರ್ವಾಲ್ ಇತರರು ಸಮಾರಂಭದಲ್ಲಿ ಭಾಗವಹಿಸಿದ್ದರು.