ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದಲ್ಲಿ ಬಾಣಂತಿಯರು ಮತ್ತು ಶಿಶುಗಳ ಸಾವಿನ ವರದಿಗಳ ಆಧಾರದ ಮೇಲೆ ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಅವರು ಈ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ತನಿಖೆಗೆ ಆದೇಶಿಸಿದ್ದರು ಎಂದು ಕಾಂಗ್ರೆಸ್ ತಿಳಿಸಿದೆ. ತನಿಖೆಯು ಮೆಡಿಕಲ್ ಕಂಪನಿಗಳು ಪೂರೈಸಿದ ಔಷಧಿಗಳ ಕಾರಣಕ್ಕೆ ಈ ಸಾವುಗಳು ಸಂಭವಿಸಿರುವುದನ್ನು ಬಹಿರಂಗಪಡಿಸಿದೆ.
ಈ ಕುರಿತು ಸಚಿವರು ಗುಣಮಟ್ಟವಿಲ್ಲದ ಔಷಧಿ ತಯಾರಿಕಾ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರಕ್ಕೆ ಎರಡೆರಡು ಪತ್ರ ಬರೆದರೂ ಕೇಂದ್ರ ಸರ್ಕಾರ ಔಷಧಿಗಳನ್ನು ಪೂರೈಸಿದ ಕಂಪನಿಗಳ ವಿರುದ್ಧ ಯಾವುದೇ ಕಠಿಣ ಕ್ರಮ ಕೈಗೊಳ್ಳಲು, ಕಪ್ಪು ಪಟ್ಟಿಗೆ ಸೇರಿಸಲು ಮುಂದಾಗುತ್ತಿಲ್ಲ.
ಇಂತಹ ಔಷಧ ಕಂಪನಿಗಳಿಂದ ಚುನಾವಣಾ ಬಾಂಡ್ ಹೆಸರಿನಲ್ಲಿ ಬಿಜೆಪಿ ನೂರಾರು ಕೋಟಿ ಸಂಗ್ರಹಿಸಿರುವುದು ಈ ಮೌನಕ್ಕೆ ಕಾರಣವೇ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.