ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯ ವಿಧಾನಸಭೆಯ ಇತಿಹಾಸದಲ್ಲೇ ಇದೊಂದು ಕರಾಳ ಅಧ್ಯಾಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಟೀಕಾಪ್ರಹಾರ ಮಾಡಿದ್ದಾರೆ.
ಸ್ವತಃ ಕರ್ನಾಟಕ ವಿಧಾನಸಭೆಯ ಸನ್ಮಾನ್ಯ ಸಭಾಧ್ಯಕ್ಷ ಯು.ಟಿ ಖಾದರ್ ಈ ಕಾಂಗ್ರೆಸ್ ಸರ್ಕಾರದ ಬೇಜವಾಬ್ದಾರಿತನಕ್ಕೆ ಬೇಸತ್ತು ಸದನದಿಂದ ಹೊರನಡೆದಿರುವುದು ರಾಜ್ಯದಲ್ಲಿ ಆಡಳಿತ ಯಂತ್ರ ಎಷ್ಟು ನಿಷ್ಕ್ರಿಯಗೊಂಡಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ. ಶಾಸಕರು ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡಲಾಗದಷ್ಟು ಅಸಮರ್ಥವಾಗಿರುವ ಈ ಕರ್ನಾಟಕ ಕಾಂಗ್ರೆಸ್ ಸರ್ಕಾರ ಶಾಸನಸಭೆಗೆ ಕನಿಷ್ಠ ಗೌರವವನ್ನೂ ನೀಡದೆ ತನ್ನದೇ ರಾಜಕೀಯದಲ್ಲಿ ಮುಳುಗಿದೆ.
ಸನ್ಮಾನ್ಯ ಸಭಾಧ್ಯಕ್ಷರು ಈಗಾಗಲೇ ನಾಲ್ಕು ಬಾರಿ ಎಚ್ಚರಿಕೆ ನೀಡಿದರೂ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ಸಚಿವರು, ಸದನದಲ್ಲಿ ಸಭಾಧ್ಯಕ್ಷರ ಎಚ್ಚರಿಕೆಗೆ ಕವಡೆ ಕಾಸಿನ ಕಿಮ್ಮತ್ತನ್ನೂ ಕೂಡ ನೀಡುತ್ತಿಲ್ಲ. ಇದಕ್ಕೆ ಪೂರಕ ಎನ್ನುವಂತೆ ಸರ್ಕಾರದ ಅಧಿಕಾರಿಗಳು ಕೂಡ ಅಸಡ್ಡೆ ತೋರುತ್ತಿದ್ದಾರೆ. ಕಾಂಗ್ರೆಸ್ ಆಳ್ವಿಕೆಯಲ್ಲಿ ರಾಜ್ಯದಲ್ಲಿ ಸಂವಿಧಾನದ ಆಶಯಗಳು ಜೀವಂತವಾಗಿವೆಯೇ ಎಂದು ಶಾಸಕರು ಮಾತ್ರವಲ್ಲ, ಜನರು ಕೂಡ ಕೇಳುವಂತಾಗಿದೆ. ಈ ಭ್ರಷ್ಟ ಕಾಂಗ್ರೆಸ್ ಸರ್ಕಾರ ತನ್ನ ನಿಷ್ಕ್ರಿಯತೆಯಿಂದ ಕೇವಲ ಸಭಾಧ್ಯಕ್ಷರ ಪೀಠಕ್ಕೆ ಅವಮಾನ ಮಾಡುತ್ತಿಲ್ಲ, ಇದು ನಮ್ಮ ಪ್ರಜಾಪ್ರಭುತ್ವದ ದೇಗುಲಕ್ಕೆ ಮತ್ತು ರಾಜ್ಯದ 7 ಕೋಟಿ ಜನತೆಗೆ ಮಾಡಿದ ದ್ರೋಹ! ಎಂದು ಅವರು ಟೀಕಿಸಿದರು.
ಜನರ ಸಮಸ್ಯೆಗಳಿಗೆ ಉತ್ತರಿಸಲಾಗದ ಈ ಕಾಂಗ್ರೆಸ್ ಸರ್ಕಾರಕ್ಕೆ ಅಧಿಕಾರದಲ್ಲಿ ಮುಂದುವರಿಯುವ ನೈತಿಕ ಹಕ್ಕಿಲ್ಲ. ಸಚಿವರು ಸದನಕ್ಕೆ ಬರುವುದಿಲ್ಲ, ಬಂದರೂ ಉತ್ತರ ತರುವುದಿಲ್ಲ. ಈ ‘ಅಹಂಕಾರದ ಆಡಳಿತ‘ ನೋಡಿ ಶಾಸಕರಿರಲಿ, ಸಭಾಧ್ಯಕ್ಷರೇ ಬೇಸತ್ತಿದ್ದಾರೆ. ಈಗ ಮುಖ್ಯಮಂತ್ರಿಗಳು ಕೇವಲ ಸಂಧಾನ ಸಭೆ ನಡೆಸಿದರೆ ಸಾಲದು, ತಮ್ಮ ಸಚಿವರ ಅಶಿಸ್ತಿಗೆ ಜನತೆಯ ಕ್ಷಮೆಯಾಚಿಸಬೇಕು. ಪ್ರಜಾಪ್ರಭುತ್ವದಲ್ಲಿ ಶಾಸಕಾಂಗವೇ ಸರ್ವೋಚ್ಚ, ಆದರೆ ಇಲ್ಲಿ ಕಾರ್ಯಾಂಗವು ಶಾಸಕಾಂಗಕ್ಕೆ ನೀಡುತ್ತಿರುವ ಅಗೌರವಕ್ಕೆ ಈ ಕಾಂಗ್ರೆಸ್ ಸರ್ಕಾರವೇ ಹೊಣೆ. ಈ ರಾಜ್ಯ ಸರ್ಕಾರವು ಈಗಲಾದರೂ ತನ್ನ ಕುಂಭಕರ್ಣ ನಿದ್ರೆಯಿಂದ ಎಚ್ಚೆತ್ತು ಲಿಖಿತ ಉತ್ತರಗಳನ್ನು ನೀಡಲಿ, ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರ ಪೀಠದ ಘನತೆಯನ್ನು ಎತ್ತಿಹಿಡಿಯಲಿ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಜನಪ್ರತಿನಿಧಿಗಳ ಪ್ರಶ್ನೆಗೆ ಉತ್ತರ ನೀಡದೆ ಸದನಕ್ಕೆ ಅಗೌರವ ತಂದಿರುವಂತಹ ಈ ಕಾಂಗ್ರೆಸ್ ಸರ್ಕಾರದ ವಿರುದ್ಧ, ಇವರ ಕೆಟ್ಟ ಆಡಳಿತದ ವಿರುದ್ಧ ನಮ್ಮ ಹೋರಾಟ ನಿಲ್ಲದು! ಎಂದು ವಿಜಯೇಂದ್ರ ಎಚ್ಚರಿಸಿದರು.

