ಎಂ.ಎಲ್ ಗಿರಿಧರ, ಮಲ್ಲಪ್ಪನಹಳ್ಳಿ.
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ದಕ್ಷಿಣ ಭಾರತದ ಪ್ರಸಿದ್ದ, ಮೂರು ರಾಜ್ಯಗಳ ಭಕ್ತ ಸಮೂಹ ಹೊಂದಿರುವ ಐಸಿಹಾಸಿಕ ಹಿನ್ನೆಲೆಯುಳ್ಳ ಕರ್ನಾಟಕ ಗಡಿ ಭಾಗಕ್ಕೆ ಹೊಂದಿಕೊಂಡಿರುವ ಆಂದ್ರ ಪ್ರದೇಶದ ಹೇಮಾವತಿಯ ಶ್ರೀಹೆಂಜೇರು ಸಿದ್ದೇಶ್ವರಸ್ವಾಮಿಯ ಮಹಾ ಶಿವರಾತ್ರಿ ಅಂಗವಾಗಿ ಫೆಬ್ರವರಿ-15 ರಿಂದ 22ರವರೆಗೆ ಅತ್ಯಂತ ವಿಶಿಷ್ಟತೆಯಿಂದ ನಡೆಯಲಿದೆ.
ಅಖಾಂಡ ಪೂಜೆಯೊಂದಿಗೆ ಆರಂಭವಾಗುವ ಶಿವರಾತ್ರಿ ಉತ್ಸವವು ಈಗಾಗಲೇ ಕಳೆದ ಫೆಬ್ರವರಿ-15 ರಿಂದ ಜಾತ್ರಾ ಮಹೋತ್ಸವ ಆರಂಭವಾಗಿದ್ದು ಫೆ.15 ರಂದು ಮಹಾ ಶಿವರಾತ್ರಿ, ಫೆ-16 ರಂದು ಭಾನುಪಲ್ಲಕ್ಕಿ ಉತ್ಸವ ನಡೆದಿದೆ.
ಫೆ-17ರಂದು ಮಂಗಳವಾರ ಅಗ್ನಿಗುಂಡ, ಫೆ-18 ರಂದು ಬುಧವಾರ ಶಿಡಿಮಾನು ಉತ್ಸವ, ಫೆ-19 ರಂದು ಗುರುವಾರ ಚಿಕ್ಕ ರಥೋಸ್ವ, ಫೆ-20 ರಂದು ಬ್ರಹ್ಮರಥೋತ್ಸವ, ಫೆ-21 ರಂದು ಶುಕ್ರವಾರ ವಸಂತೋತ್ಸವ, ಫೆ-22 ರಂದು ಭಾನುವಾರ ಶಯನೋತ್ಸವ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಶ್ರೀ ಕ್ಷೇತ್ರ ಹೇಮಾವತಿಯ ಶ್ರೀಹೆಂಜೇರು ಸಿದ್ದೇಶ್ವರಸ್ವಾಮಿ ದೇವಸ್ಥಾನ ಸಮಿತಿಯ ಛೇರ್ಮನ್ ಕೆ.ಈರೇಗೌಡ, ಕಾರ್ಯದರ್ಶಿ ನರಸಿಂಹರಾಜು ಇಒ ತಿಳಿಸಿದ್ದಾರೆ. ಐತಿಹಾಸಿಕ ಹೆಂಜೇರು ಸಿದ್ದೇಶ್ವರ ಸ್ವಾಮಿ ಜಾತ್ರೆ:
ಆಂಧ್ರಪ್ರದೇಶ ಮತ್ತು ಕರ್ನಾಟಕದ ಗಡಿಯ ಹೇಮಾವತಿ ಗ್ರಾಮದಲ್ಲಿರುವ ಐತಿಹಾಸಿಕ ಹೆಂಜೇರು ಸಿದ್ದೇಶ್ವರ ಸ್ವಾಮಿ ಜಾತ್ರೆಯು ಅದ್ಧೂರಿಯಾಗಿ ನಡೆಯುತ್ತದೆ. ಇದು ಆಂಧ್ರ, ಕರ್ನಾಟಕ ಹಾಗೂ ತಮಿಳುನಾಡಿನ ಲಕ್ಷಾಂತರ ಭಕ್ತರ ಆರಾಧ್ಯದೈವವಾಗಿದೆ. ಇಲ್ಲಿನ ರಥೋತ್ಸವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಭಕ್ತರನ್ನು ಆಕರ್ಷಿಸುತ್ತವೆ.

ವಿಶೇಷತೆ: ಪ್ರಸಿದ್ಧ ರಥೋತ್ಸವ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಸಾಂಪ್ರದಾಯಿಕ ಪೂಜಾ ವಿಧಿವಿಧಾನಗಳು ಇಲ್ಲಿನ ಹೈಲೈಟ್.
ಪೌರಾಣಿಕ ಮಹತ್ವ:
ಈ ಪ್ರದೇಶವು ಐತಿಹಾಸಿಕ ‘ಹೆಂಜೇರು‘ (ಹೇಮಾವತಿ) ಸಾಮ್ರಾಜ್ಯದ ಭಾಗವಾಗಿದೆ. ಇಲ್ಲಿ ಶಿವನು ಸಿದ್ದೇಶ್ವರನಾಗಿ ನೆಲೆಸಿದ್ದಾನೆ ಎಂದು ನಂಬಲಾಗಿದೆ. ಈ ಜಾತ್ರೆಯು ಆಂಧ್ರ-ಕರ್ನಾಟಕ ಗಡಿಭಾಗದ ಭಕ್ತರ ಪಾಲಿಗೆ ಒಂದು ದೊಡ್ಡ ಹಬ್ಬವಾಗಿದೆ.
ದಕ್ಷಿಣ ಭಾರತದ ಪ್ರಸಿದ್ದ, ಮೂರು ರಾಜ್ಯಗಳ ಭಕ್ತ ಸಮೂಹವನ್ನು ಹೊಂದಿರುವ ಐಸಿಹಾಸಿಕ ಹಿನ್ನೆಲೆಯುಳ್ಳ ಕರ್ನಾಟಕ ಗಡಿ ಭಾಗಕ್ಕೆ ಹೊಂದಿಕೊಂಡಿರುವ ಆಂದ್ರಪ್ರದೇಶದ ಹೇಮಾವತಿಯ ಶ್ರೀಹೆಂಜೇರು ಸಿದ್ದೇಶ್ವರಸ್ವಾಮಿಯ ಮಹಾಶಿವರಾತ್ರಿಯು ಅತ್ಯಂತ ವಿಶಿಷ್ಟತೆಯಿಂದ ನಡೆಯಲಿದೆ.
ಅಖಾಂಡ ಪೂಜೆಯಿಂದ ಆರಂಭವಾಗುವ ಶಿವರಾತ್ರಿ ಉತ್ಸವವು ಕರ್ನಾಟಕ, ಆಂದ್ರ ಪ್ರದೇಶ, ತಮಿಳುನಾಡಿನ ಭಕ್ತ ಸಮೂಹಕ್ಕೆ ಹಬ್ಬದ ವಾತಾವರಣವನ್ನು ಒದಗಿಸಲಿದೆ. ಅದರಲ್ಲೂ ಕರ್ನಾಟಕದ ಭಕ್ತ ಸಮೂಹವೇ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಉತ್ಸವ ಯಶಸ್ವಿಗೊಳಿಸುತ್ತಿದ್ದಾರೆ.
ಶಿವಲಿಂಗಕ್ಕೆ ಪೂಜೆ ಸಲ್ಲುತ್ತದೆಯಾದರೂ ಈ ದೇವಸ್ಥಾನದಲ್ಲಿ ವ್ಯಕ್ತಿ ರೂಪದ ಶಿವನ ದೇವರ ವಿಗ್ರಹ ಪೂಜಿಸುವುದು ವಿಶೇಷ. ಈ ದೇವಸ್ಥಾನದಲ್ಲಿ ದೊಡ್ಡೇಶ್ವರ, ಸೋಮೇಶ್ವರ, ಮತ್ತೀಶ್ವರ, ಚಿತ್ತೇಶ್ವರ, ಹಾಗೂ ವಿರುಪಾಕ್ಷೇಶ್ವರ ಎಂಬ ಪಂಚಲಿಂಗೇಶ್ವರ ದೇವಾಲಯಗಳ ಜೊತೆಯಲ್ಲಿ ಬಸವಣ್ಣ, ದೊಡ್ಡ ಶಿವಲಿಂಗ, ಚೇಳಪ್ಪ, ಮತ್ತಿತರರ ದೇವರುಗಳು ನೆಲೆಸಿವೆ.
7ನೇ ಶತಮಾನದಲ್ಲಿ ನೊಳಂಬ ರಾಜರ ಆಳ್ವಿಕೆ ಕಾಲದಲ್ಲಿ ಶ್ರೀಹೆಂಜೇರು ಸಂಸ್ಥಾನವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ರಾಜ್ಯ ಬಾರ ಮಾಡುತ್ತಿದ್ದರು. ಅಂದಿನ ಶ್ರೀಹೆಂಜೇರು ರಾಜಧಾನಿಯೇ ಇಂದು ಹೇಮಾವತಿಯಾಗಿ ಪರಿವರ್ತತವಾಗಿದೆ. ಅಲ್ಲದೆ ಐತಿಹಾಸಿಕ ನೊಳಂಬವಾಡಿ ಮೂವತ್ತೆರೆಡು ಸಾವಿರ ಎಂದು ಪ್ರಚಲಿತದಲ್ಲಿದೆ.
ಶ್ರೀಹೆಂಜೇರು ಸಿದ್ದೇಶ್ವರಸ್ವಾಮಿ ದೇವಸ್ಥಾನದ ಒಟ್ಟು ವಿರ್ಸ್ತೀಣ 14 ಎಕರೆ ಇದ್ದು ಆಂದ್ರಪ್ರದೇಶದ ಮುಜರಾಯಿ ಇಲಾಖೆಯ ಆಡಳಿತಕ್ಕೆ ಒಳಪಟ್ಟಿದೆ. ಪ್ರಾಚ್ಯವಸ್ತು ಇಲಾಖೆಯು ಕಳೆದ 20 ವರ್ಷಗಳಿಂದ ಈ ಪ್ರದೇಶದಲ್ಲಿ ಭೂ ಉತ್ಖನನ ಕಾರ್ಯವನ್ನು ಮಾಡಿಕೊಂಡು ಬರುತ್ತಿದ್ದು ನೂರಾರು ಶಿವಲಿಂಗಗಳು, ನಂದಿ ವಿಗ್ರಹಗಳು, ಏಕಶಿಲಾಮೂರ್ತಿಗಳು ಮತ್ತಿತರ ಸ್ಮಾರಕಗಳನ್ನು ಹೇಮಾವತಿ ಮ್ಯೂಸಿಯಂನಲ್ಲಿ ಇಡಲಾಗಿದೆ. ನಿತ್ಯ ನೂರಾರು ಪ್ರವಾಸಿಗರು ಇಲ್ಲಿಗೆ ಬಂದು ಇದರ ಇತಿಹಾಸವನ್ನು ನೋಡಿ ತಿಳಿಯುತ್ತಿದ್ದಾರೆ.
ಅಗ್ನಿಗುಂಡ-
ಹೇಮಾವತಿಯ ಶ್ರೀಹೆಂಜಾರು ಸಿದ್ದೇಶ್ವರಸ್ವಾಮಿ ಸಂಸ್ಥಾನದಲ್ಲಿ ನಡೆಯಲಿರುವ ಅಗ್ನಿಗೊಂಡ ಕಾರ್ಯಕ್ರಮವು ರೈತಾಪಿ ವರ್ಗಕ್ಕೆ ಮೀಸಲಿರುವಂತೆ ಕಾಣುತ್ತಿದೆ. ರೈತರು ತಮ್ಮ ಜಮೀನಿನಲ್ಲಿ ಬೆಳೆದ ಆಹಾರ ಧಾನ್ಯಗಳು, ತೆಂಗಿನ ಕಾಯಿ, ಶೇಂಗಾ ಕಾಯಿ, ಹರಳು, ಬೇಳೆ, ತೊಗರಿ, ಹೆಸರು, ಹುರುಳಿಕಾಳು, ರಾಗಿ, ಭತ್ತ, ಜೋಳ, ನವಣೆ ಮತ್ತಿತರ ಎಲ್ಲ ರೀತಿಯ ಆಹಾರಧಾನ್ಯಗಳನ್ನು ರೈತರು ತಮಗಿಷ್ಟ ಬಂದೊಷ್ಟು ಪ್ರಮಾಣದಲ್ಲಿ ಅಗ್ನಿಗೊಂಡಕ್ಕೆ ತಂದು ಹಾಕಿ ಹರಕೆ ತೀರಿಸಿಕೊಳ್ಳುತ್ತಾರೆ.
ಇದಕ್ಕೆ ಪ್ರಮುಖ ಕಾರಣವೆಂದರೆ ರೈತರು ಬೆಳೆದ ಫಸಲಿಗೆ ಯಾವುದೇ ರೀತಿಯ ಹುಳುಗಳ ಕಾಟ ಬೀಳಬಾರದು, ಹುಲುಸಾಗಿ ಫಸಲು ಬರಲಿ ಎಂದು ಮೊದಲೇ ಹರಕೆ ಹೊತ್ತ ರೈತಾಪಿ ವರ್ಗ ಅಗ್ನಿಗೊಂಡದೊಂದು ತಮ್ಮ ಜಮೀನಿನಲ್ಲಿ ಬೆಳೆದ ಎಲ್ಲ ಆಹಾರ ಧಾನ್ಯಗಳನ್ನು ಅಗ್ನಿಗುಂಡಕ್ಕೆ ಹಾಕಿ ಹರಕೆ ತೀರಿಸಿಕೊಳ್ಳುತ್ತಾರೆ. ಲಕ್ಷಾಂತರ ಜನ ಸೇರುವ ಈ ಉತ್ಸವದಲ್ಲಿ ಅಗ್ನಿಗೊಂಡ ಕಾರ್ಯಕ್ರಮವು ವಿಶೇಷತೆ ಪಡೆದಿದೆ. ಅಂದು ರೈತಾಪಿ ವರ್ಗ ಭಕ್ತಿಯಿಂದ ಉಪವಾಸವಿದ್ದು ತಮ್ಮ ಆಹಾರ ಧಾನ್ಯಗಳನ್ನು ದೇವರಿಗೆ ಸಮರ್ಪಿಸಿದ ನಂತರವೇ ಮನೆಯಲ್ಲಿ ಹಬ್ಬ ಮಾಡಿಕೊಂಡು ದೇವರಿಗೆ ಎಡೆ ಅರ್ಪಿಸಿ ಮನೆ ಮಂದಿಯಲ್ಲ ಕುಳಿತು ಊಟ ಮಾಡುವುದು. ಈ ಹಬ್ಬದೊಂದು ತಬ್ಬಿಟ್ಟಿನ ಉಂಡೆ ಮಾಡಿ ಭಕ್ತರು ಮನೆ ಮಂದಿಗೆಲ್ಲ, ಸ್ನೇಹಿತರಿಗೆಲ್ಲ, ಬಂಧುಗಳಿಗೆಲ್ಲ ಹಂಚಿ ಸಂಭ್ರಮಿಸುತ್ತಾರೆ. ಕುಲ್ಲುಪರೆ(ಮೈಮೇಲಿನ ಸಣ್ಣ ಸಣ್ಣ ಚರ್ಮದ ಗಂಟು)-
ಮೈ ಮೇಲಿನ ಕುಲ್ಲುಪರೆಯನ್ನು ಒಡೆದು ಓಡಿಸಲು ರಾಮಬಾಣ ಎಂದರೆ ದೇವರಿಗೆ ಅರ್ಪಿಸುವ ಭಕ್ತಿ ಮಾತ್ರ. ಮೈ ಮೇಲಿನ ಕುಲ್ಲುಪರೆಯಿಂದ ಬಳಲುವ ಜನತೆ ಸ್ವಾಮಿ ಸನ್ನಿಧಿಗೆ ಬಂದು ದೂಪ ಹಾಕಿಸುತ್ತೇವೆಂದು ಹರಕೆ ಹೊತ್ತರೆ ಒಂದೆರಡು ತಿಂಗಳಲ್ಲಿ ಮೈ ಮೇಲಿನ ಕುಲ್ಲುಪರೆ ಕಣ್ಮರೆಯಾಗಿ ಮಾಮೂಲಿನಂತೆ ಚರ್ಮ ಕಂಗೊಳಿಸುತ್ತದೆ. ಈ ಸತ್ಯವನ್ನು ಅರಿತಿರುವ ಸಾವಿರಾರು ಕುಲ್ಲುಪರೆಯಿಂದ ಬಳಲು ಜನರು ಹೆಚ್ಚಿನ ಸಂಖ್ಯೆಯಲ್ಲಿ ಕ್ಷೇತ್ರಕ್ಕೆ ಬಂದು ಭಕ್ತಿ ಸಮರ್ಪಣೆ ಮಾಡುವುದು ಗತಕಾಲದಿಂದಲೂ ನಡೆದುಕೊಂಡು ಬಂದಿದೆ.
ಸಿದ್ಭುಕ್ತಿ-
ಶ್ರೀಹೆಂಜೇರು ಸಿದ್ದೇಶ್ವರಸ್ವಾಮಿಗೆ ಮತ್ತೊಂದು ರೀತಿಯಲ್ಲಿ ಭಕ್ತರು ಮಾಂಸನ್ನು ಸಮರ್ಪಿಸುತ್ತಾರೆ. ಮನೆಗಳಲ್ಲಿ ಕುರಿ, ಮೇಕೆಗಳನ್ನು ಕಡಿದು ಸಿದ್ಭುಕ್ತಿ ಮಾಡಿ ಮಾಂಸದೂಟವನ್ನು ದೇವರಿಗೆ ಅರ್ಪಿಸಿ ಜನರಿಗೆ ನೀಡುವುದು ನಡೆದುಕೊಂಡು ಬಂದಿದೆ. ಕೇವಲ ಮನೆಯವರಷ್ಟೇ ಅಲ್ಲದೆ ಹೊರಗಿನ ಬಂಧು, ಬಾಂಧವರನ್ನು ಕರೆದು ಈ ರೀತಿಯ ಗುಡ್ಡಗಾಡು ಪದ್ಧತಿಯಂತೆ ಆಚರಣೆ ಮಾಡಿಕೊಂಡು ಬರುತ್ತಿರುವುದು ಕಾಣ ಸಿಗುತ್ತದೆ. ಹೆಂಜೇರು ಸಿದ್ದೇಶ್ವರ ಸ್ವಾಮಿಯು ಶಿವನ ಸ್ವರೂಪಿ ದೇವರಾಗಿದ್ದರೂ ಮಾಂಸದೂಟ ಅರ್ಪಿಸುವುದು ವಿಶೇಷವಾಗಿದೆ.
ಬಸವಣ್ಣನಿಗೆ ಬಾಳೆ ಹಣ್ಣು ತಿನ್ನಿಸುವುದು, ಚೇಳಪ್ಪಸ್ವಾಮಿಗೆ ಪೂಜೆ ಸಲ್ಲಿಸುವುದು ಹತ್ತಾರು ರೀತಿಯ ಪೂಜಾ ಕಾರ್ಯಗಳು, ವಿಶಿಷ್ಟ ಉತ್ಸವಗಳು ವಾರಗಟ್ಟಲೆ ನಡೆಯುತ್ತವೆ.

