ಚಂದ್ರವಳ್ಳಿ ನ್ಯೂಸ್, ಬೆಳಗಾವಿ:
ವಿಧಾನಸಭೆಯಲ್ಲಿ ಗೃಹಲಕ್ಷ್ಮಿಯ ಫೆಬ್ರವರಿ, ಮಾರ್ಚ್ ತಿಂಗಳ ಬಾಕಿ ಹಣದ ವಿಚಾರ ಭಾರಿ ಗದ್ದಲ, ಕೋಲಾಹಲ ಸೃಷ್ಟಿಸಿ ಅರ್ಧ ದಿನದಕಲಾಪವನ್ನೇ ನುಂಗಿ ಹಾಕಿದ ಘಟನೆ ಬುಧವಾರ ಅಧಿವೇಶನದಲ್ಲಿ ನಡೆಯಿತು.
ಮಹಿಳಾ ಮತ್ತು ಮಕ್ಕಳ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸದನಕ್ಕೆ ಬಂದು ವಿಷಾದ ಮತ್ತು ಕ್ಷಮೆಕೇಳುವಂತೆ ಬಿಜೆಪಿ ಮಾಡಿದ್ದಲ್ಲದೇ, ಎರಡು ತಿಂಗಳ ಗೃಹಲಕ್ಷ್ಮಿ ಬಾಕಿ ವ್ಯತ್ಯಯದ ಬಗ್ಗೆಯೂ ಸದನದಲ್ಲಿ ಸಚಿವೆ ಹೆಬ್ಬಾಳ್ಕರ್ ಒಪ್ಪಿಕೊಂಡರು.
ಬೆಳಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ, ವಿಪಕ್ಷ ನಾಯಕಆರ್.ಅಶೋಕ್, ಮೂರು ದಿನಗಳಿಂದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನಾಪತ್ತೆ ಆಗಿದ್ದಾರೆ. ಇಂದು ಮೊದಲು ಸಚಿವರನ್ನು ಕರೆಸಿ ಉತ್ತರ ಕೊಡಿಸಿ, ನಂತರ ಕಲಾಪ ನಡೆಸಿ. ಎರಡು ತಿಂಗಳ ಗೃಹಲಕ್ಷ್ಮಿ ಹಣ ಎಲ್ಲಿ ಹೋಯಿತು? ಪಕ್ಷದ ಕೆಲಸಗಳಿಗೆ ಹೋಯ್ತಾ? ಸಚಿವರು ಉತ್ತರ ಕೊಡದಿದ್ದರೆ ಧರಣಿ ಮಾಡುತ್ತೇವೆ ಎಂದರು.ಸ್ವೀಕರ್ ಸಮಾಧಾನಕ್ಕೆ ಮಣಿಯದ ವಿಪಕ್ಷಗಳು: ಈ ವೇಳೆ ಸ್ಪೀಕರ್ ಖಾದರ್, ಪ್ರಿಯಾಂಕ್ ಖರ್ಗೆ ಮತ್ತಿತರರು ಪರಿಸ್ಥಿತಿ ಸಂಭಾಳಿಸಲು ಯತ್ನಿಸಿದರೂ ಬಿಜೆಪಿ ಸದಸ್ಯರು ಮಣಿಯಲಿಲ್ಲ. ಸದನದ ಬಾವಿಗಿಳಿದು ಬಿಜೆಪಿ, ಜೆಡಿಎಸ್ ಸದಸ್ಯರು ಧರಣಿ ಶುರು ಮಾಡಿದರು. ಸ್ಪೀಕರ್ ಅವರು ಕಲಾಪವನ್ನು ಹತ್ತು ನಿಮಿಷ ಮುಂದೂಡಿದರು.
ಈ ಮಧ್ಯೆ ಸ್ಪೀಕರ್ ಕೊಠಡಿಯಲ್ಲಿ ಸಚಿವೆ ಹೆಬ್ಬಾಳ್ಕರ್, ಡಿಸಿಎಂ ಡಿ.ಕೆ.ಶಿವಕುಮಾರ್, ಸಿಎಂ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಅವರು ಚರ್ಚೆ ನಡೆಸಿದರು. ಮಹಿಳಾ/ಕಲ್ಯಾಣ ಇಲಾಖೆ ನಿರ್ದೇಶಕ ಮಹೇಶ್ ಬಾಬು ಅವರನ್ನೂ ಕರೆಸಿ ಡಿಕೆಶಿ ಮಾಹಿತಿಪಡೆದರು. ಬಳಿಕ ಮತ್ತೆ ಕಲಾಪ ಆರಂಭವಾಯಿತು.ವಿಷಾದ ವ್ಯಕ್ತಪಡಿಸಿದ ಸಚಿವೆ: ಕಲಾಪಕ್ಕೆ ಮೂರು ದಿನಗಳ ಬಳಿಕ ಸದನಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಂದರು.
ಸಚಿವರು ಉತ್ತರ ಕೊಡುತ್ತಾರೆ ಧರಣಿ ಕೈಬಿಡಿ ಎಂಬ ಸ್ಪೀಕರ್ ಮನವಿಗೆ ವಿಪಕ್ಷಗಳು ಸ್ಪಂದಿ,ಸಿ ತಮ್ಮ ಸ್ಥಾನಗಳಿಗೆ ಮರಳಿದರು. ಈ ವೇಳೆಯೂ ಎರಡೂ ಕಡೆ ವಾಕ್ಸಮರ ನಡೆಯಿತು. ಕೊನೆಗೆ ಸ್ಪೀಕರ್ ಸೂಚನೆ ಮೇರೆಗೆ ಎದ್ದು ನಿಂತ ಲಕ್ಷ್ಮೀ ಹೆಬ್ಬಾಳ್ಕರ್, ಎರಡು ತಿಂಗಳ ಕಂತಿನ ವಿಚಾರದಲ್ಲಿ ವ್ಯತ್ಯಯ ಆಗಿದ್ದು ಹೌದು, ಇದನ್ನು ಪರಿಶೀಲಿಸಿ ಸರಿಪಡಿಸುತ್ತೇವೆ ಎಂದು ಸದನದಲ್ಲಿ ಒಪ್ಪಿಕೊಂಡರು. ಯಾರಿಗಾದರೂ ತಾವು ಮಾತನಾಡಿದ್ದು ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ ಅಂತ ಹೆಬ್ಬಾಳ್ಕರ್ ಹೇಳಿದರು.
ಎರಡು ತಿಂಗಳ ಕಂತು ಯಾವಾಗ ಕೊಡುತ್ತೀರಾ ಎಂದು ತಿಳಿಸಲು ಪಟ್ಟು: ಸಚಿವರ ಉತ್ತರಕ್ಕೆ ಒಪ್ಪದ ಬಿಜೆಪಿ ಸದಸ್ಯರು, ವಿಷಾದ ಬೇಡ, ಕ್ಷಮೆ ಕೇಳಲಿ ಎಂದು ಆಗ್ರಹಿಸಿದರು. ಎರಡು ತಿಂಗಳ ಕಂತು ಯಾವಾಗ ಫಲಾನುಭವಿಗಳಿಗೆ ಕೊಡುತ್ತೀರಾ ಅಂತ ತಿಳಿಸಬೇಕೆಂದು ಪಟ್ಟು ಹಿಡಿದರು. ಶಾಸಕ ಸುನೀಲ್ ಕುಮಾರ್ ಮಧ್ಯಪ್ರವೇಶ ಮಾಡಿ, ಸಚಿವರು ಉದ್ದೇಶಪೂರ್ವಕವಾಗಿ ತಪ್ಪು ಉತ್ತರ ಕೊಟ್ಟಿಲ್ಲ ಎಂದಿದ್ದಾರೆ. ಎರಡು ತಿಂಗಳ ಬಾಕಿ ಇದ್ದರೆ ಕೊಡುತ್ತೇವೆ ಎಂದಿದ್ದಾರೆ. ಸರ್ಕಾರ ದಿವಾಳಿ ಆಗಿದೆ, ಅದಕ್ಕೆ ಹಣ ಕೊಡುತ್ತಿಲ್ಲ ಎಂದು ಒಪ್ಪಿಕೊಳ್ಳಿ ಎಂದು ತಿರುಗೇಟು ನೀಡಿದರು.
ಇದಕ್ಕೆ ಧ್ವನಿಗೂಡಿಸಿದ ಆರಗ ಜ್ಞಾನೇಂದ್ರ, ಅಧಿಕಾರಿಗಳಿಗೆ ಹಣ ಪಾವತಿ ಮಾಡದೇ ಇರುವುದು ಗೊತ್ತಿಲ್ಲವೇ? ಅಧಿಕಾರಿಗಳು ಸಚಿವರ ಬಾಯಲ್ಲಿ ಸುಳ್ಳು ಹೇಳಿಸಿದ್ದಾರಾ? ಎಂದು ಅಸಮಾಧಾನ ವ್ಯಕ್ತಪಡಿಸಿದರು. ಆಗ ಬಿಜೆಪಿ ಸದಸ್ಯರ ಆರೋಪಕ್ಕೆ ತಿರುಗೇಟು ನೀಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಕೇಂದ್ರದಿಂದಲೂ ಅನುದಾನ ಬಂದಿಲ್ಲ, ಹಾಗಂತ ಕೇಂದ್ರ ಸರ್ಕಾರ ದಿವಾಳಿ ಅನ್ನೋಕ್ಕಾಗುತ್ತಾ? ನಮ್ಮ ಗ್ಯಾರಂಟಿಗಳನ್ನು ಬಿಜೆಪಿ ಬೇರೆ ರಾಜ್ಯಗಳಲ್ಲಿ ಕಾಪಿ ಮಾಡಿ ಅಧಿಕಾರಕ್ಕೆ ಬಂದಿದೆ ಅಂತ ಟಕ್ಕರ್ ಕೊಟ್ಟರು.
ಸಭಾತ್ಯಾಗ:
ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸದನದಲ್ಲಿ ಆಡಿದ ಮಾತಿಗೆ ಬಿಜೆಪಿ ಸದಸ್ಯರು ಆಕ್ಷೇಪಿಸಿದರು. ಗದ್ದಲ, ಕೋಲಾಹಲ ಸೃಷ್ಟಿಯಾಯಿತು. ಕೊನೆಗೆ ಮತ್ತೆ ಸಚಿವೆ ಹೆಬ್ಬಾಳ್ಕರ್ ಮಾತನಾಡಿ, ನಾನು ವಿಷಾದ ವ್ಯಕ್ತಪಡಿಸುತ್ತೇನೆ ಅಂತ ಹೇಳಿದ್ದೇನೆ. ಆ ಪದ ಇಷ್ಟ ಆಗದಿದ್ದರೆ ಕ್ಷಮೆ ಕೇಳುತ್ತೇನೆ ಎಂದರು.
ನಾನು ಒಬ್ಬ ಮಹಿಳೆ ಅಂತ ತಾವು ಈ ರೀತಿ ನಡೆದುಕೊಳ್ಳುವುದು ಸರಿಯಲ್ಲ ಅಂತ ಹೆಬ್ಬಾಳ್ಕರ್ ಕೌಂಟರ್ ಕೊಟ್ಟರು. ಇದಕ್ಕೂ ಬಿಜೆಪಿ ಸದಸ್ಯರು ಆಕ್ಷೇಪಿಸಿದರು. ನಂತರ ಮಾತಾಡಿದ ಅಶೋಕ್, ಸಚಿವರು ವಿಷಯಾಂತರ ಮಾಡುತ್ತಿದ್ದಾರೆ. ಎರಡು ತಿಂಗಳ ಕಂತು ಯಾವಾಗ ಕೊಡುತ್ತೇವೆ ಅಂತ ಸಚಿವರು ಹೇಳಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಚಿವೆಯ ಉತ್ತರಕ್ಕೆ ಸಮಾಧಾನಗೊಳ್ಳದ ವಿಪಕ್ಷಗಳ ನಾಯಕರು ಸದನದಿಂದ ಸಭಾತ್ಯಾಗ ಮಾಡಿದರು.

