ಡೀಸೆಲ್ ಬೆಲೆ 2 ರೂ. ಹೆಚ್ಚಿಸಿ ಗಾಯದ ಮೇಲೆ ಬರೆ ಎಳೆದ ದುಷ್ಟ ಕಾಂಗ್ರೆಸ್ ಸರ್ಕಾರ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದಲ್ಲಿ ಬೆಲೆ ಏರಿಕೆಯಿಂದ ಜನಸಾಮಾನ್ಯರು ತತ್ತರಿಸಿರುವಾಗಲೇ
, ಡೀಸೆಲ್ ಬೆಲೆ 2 ರೂ. ಹೆಚ್ಚಿಸಿ ಗಾಯದ ಮೇಲೆ ಬರೆ ಎಳೆದಿದೆ ದುಷ್ಟ ಕಾಂಗ್ರೆಸ್ ಸರ್ಕಾರ ಎಂದು ಜೆಡಿಎಸ್ ವಾಗ್ದಾಳಿ ಮಾಡಿದೆ.

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರೇ, “ಶಕ್ತಿ” ಯೋಜನೆಯಿಂದ ನಷ್ಟದಲ್ಲಿರುವ ಸಾರಿಗೆ ಸಂಸ್ಥೆಗಳಿಗೆ, ಡೀಸೆಲ್‌ಬೆಲೆ ಹೆಚ್ಚಳ ಮತ್ತಷ್ಟು ಶಕ್ತಿಹೀನವಾಗಿಸಿದೆ. ಪ್ರತಿ ನಿತ್ಯ ಬಿಎಂಟಿಸಿಗೆ 1.50 ಕೋಟಿ ರೂ. ಹೊರೆಯಾಗುತ್ತಿದೆ. 

ಪರಿಣಾಮ ಮತ್ತೆ ಬಸ್‌ಪ್ರಯಾಣ ದರ ಏರಿಸಿ ಜನರ ಜೇಬಿಗೆ ಕತ್ತರಿ ಹಾಕುವ ಸಮಯ ಸನ್ನಿಹಿತವಾಗುವಂತೆ ಕಾಣುತ್ತಿದೆ ಎಂದು ಜೆಡಿಎಸ್ ತಿಳಿಸಿದೆ. 

10 ತಿಂಗಳ ಹಿಂದಷ್ಟೆ ಪೆಟ್ರೋಲ್ ಲೀ. 3 ರೂ, ಡೀಸೆಲ್ ಲೀ. 3.5 ರೂಪಾಯಿ ಏರಿಕೆಯಾಗಿತ್ತು. ಜನವರಿಯಲ್ಲಿ ಬಸ್‌ಪ್ರಯಾಣ ದರವನ್ನು ಶೇ.15ರಷ್ಟು ಹೆಚ್ಚಿಸಲಾಗಿತ್ತು.

ಪೆಟ್ರೋಲ್‌- ಡೀಸೆಲ್‌ಬೆಲೆ ಹೆಚ್ಚಳ ಇಡೀ ಆರ್ಥಿಕ ವ್ಯವಸ್ಥೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು, ಅಗತ್ಯ ವಸ್ತುಗಳು ಸೇರಿದಂತೆ ಎಲ್ಲ ಬೆಲೆಗಳು ಗಗನಮುಖಿಯಾಗಿದೆ.

ಗ್ಯಾರಂಟಿ ಯೋಜನೆಗಾಗಿ ಬೊಕ್ಕಸ ತುಂಬಿಸಿಕೊಳ್ಳಲು ಸಿದ್ದರಾಮಯ್ಯ ಸರ್ಕಾರ ಬೆಲೆ ಏರಿಕೆಗಳ ಮೂಲಕ ಜನರ ಹಗಲು ದರೋಡೆ ಮಾಡುತ್ತಿದೆ ಎಂದು ಜೆಡಿಎಸ್ ಟೀಕಾಪ್ರಹಾರ ಮಾಡಿದೆ.

 

Share This Article
error: Content is protected !!
";