ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತಾಲ್ಲೂಕಿನಲ್ಲಿ 2026-27ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಮಳೆಯ ಕೊರತೆಯಿಂದ ಬಿತ್ತನೆ ಕಾರ್ಯವು ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಸಾಧಿಸಿರುವುದಿಲ್ಲ.
ಮಳೆ ಪರಿಸ್ಥಿತಿ-2026ರ ಜೂನ್ 1ರಿಂದ ಆಗಸ್ಟ್ 4 ರವರೆಗೆ ಜಿಲ್ಲೆಯ ವಾಡಿಕೆ ನೈಋತ್ಯ ಮುಂಗಾರು ಮಳೆಯ ಪ್ರಮಾಣ 306.6 ಮಿ.ಮೀ. ಆಗಿದ್ದು, ಪ್ರಸ್ತುತ 272.1 ಮಿ.ಮೀ. ಮಳೆಯಷ್ಟೇ ದಾಖಲಾಗಿದೆ. ಇದರಿಂದ ಜಿಲ್ಲೆಯಲ್ಲಿ ಶೇ.11ರಷ್ಟು ಮಳೆ ಕೊರತೆ ಉಂಟಾಗಿದೆ.
ಬೆಳೆ ವಿಸ್ತೀರ್ಣ-ತಾಲ್ಲೂಕಿನಲ್ಲಿ ಮುಂಗಾರು ಹಂಗಾಮಿನ ಒಟ್ಟು ಬಿತ್ತನೆ ಗುರಿ 25833 ಹೆಕ್ಟೇರ್ ಆಗಿದ್ದು, ಇದುವರೆಗೆ 1429 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದ್ದು. ಇದು ಗುರಿಯ ಶೇ. 5.53ರಷ್ಟು ಮಾತ್ರವಾಗಿದೆ.
ಕಳೆದ ವರ್ಷದ ಇದೇ ಅವಧಿಯಲ್ಲಿ 17671 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಗುರಿಯ ಶೇ.68.41 ರಷ್ಟು ಪ್ರಗತಿ ಸಾಧಿಸಲಾಗಿತ್ತು.
ಬಿತ್ತನೆ ಬೀಜ ಲಭ್ಯತೆ-ಪ್ರಸ್ತುತ ತಾಲ್ಲೂಕಿನ ರೈತ ಸಂಪರ್ಕ ಕೇಂದ್ರಗಳಲ್ಲಿ 914.93 ಕ್ವಿಂಟಲ್ ಬಿತ್ತನೆ ಬೀಜ ಲಭ್ಯವಿದ್ದು, ಮುಂಗಾರು ಹಂಗಾಮಿಗೆ ರೈತರ ಬೇಡಿಕೆಗೆ ಅನುಗುಣವಾಗಿ ಅಗತ್ಯ ಪ್ರಮಾಣದ ಬಿತ್ತನೆ ಬೀಜವನ್ನು ಈಗಾಗಲೇ ಸರಬರಾಜು ಮಾಡಲಾಗಿದೆ. ರೈತರಿಗೆ ಬೇಡಿಕೆಯಂತೆ ನಿರಂತರವಾಗಿ ಬಿತ್ತನೆ ಬೀಜವನ್ನು ವಿತರಿಸಲಾಗುತ್ತಿದೆ.
ರಸಗೊಬ್ಬರ ಲಭ್ಯತೆ- ತಾಲ್ಲೂಕಿನಲ್ಲಿ ವಿವಿಧ ವಿಧದ 2016 ಮೆಟ್ರಿಕ್ ಟನ್ ರಸಗೊಬ್ಬರಗಳು ಲಭ್ಯವಿದ್ದು, ರೈತರ ಅಗತ್ಯಕ್ಕೆ ತಕ್ಕಂತೆ ಸಮರ್ಪಕ ಪ್ರಮಾಣದಲ್ಲಿ ದಾಸ್ತಾನು ಇರಿಸಲಾಗಿದೆ.
ಜಾನುವಾರುಗಳಿಗೆ ಮೇವು ಲಭ್ಯತೆ- ತಾಲ್ಲೂಕಿನಲ್ಲಿ ಪ್ರಸ್ತುತ ಸುಮಾರು 87 ಸಾವಿರ ಟನ್ ಮೇವು ಲಭ್ಯವಿದ್ದು, ಇದು ಸುಮಾರು 39 ವಾರಗಳವರೆಗೆ ತಾಲ್ಲೂಕಿನ ಜಾನುವಾರುಗಳ ಮೇವಿನ ಅಗತ್ಯವನ್ನು ಪೂರೈಸುವಷ್ಟು ಸಾಕಾಗಿರುತ್ತದೆ.



