ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ: ರಾಷ್ಟ್ರದೆಲ್ಲೆಡೆ ನಡೆಯುತ್ತಿರುವ
ರಾಷ್ಟ್ರೀಯ ಲೋಕ ಅದಾಲತ್ ನಲ್ಲಿ ಶನಿವಾರ ಆರು ನ್ಯಾಯಾಲಯಗಳಲ್ಲಿ ಒಟ್ಟು 1,980
ಪ್ರಕರಣಗಳು ರಾಜಿ ಸಂಧಾನದ ಮೂಲಕ ಇತ್ಯರ್ಥ ಗೊಳಿಸಲಾಗಿದ್ದು . ವಿವಾಹ ವಿಚ್ಛೇದನದ ಅಂಚಿನಲ್ಲಿದ್ದ ಮೂರು ದಂಪತಿಗಳು ಬಗ್ಗೆ ಮಧ್ಯಸ್ಥಿಕೆ ವಹಿಸಿದ ನ್ಯಾಯಾಧೀಶರು ಸಮಾಲೋಚನೆ ನಡೆಸಿ ತಮ್ಮ ಭಿನ್ನಾಭಿಪ್ರಾಯಗಳನ್ನು ಮರೆತು ಮತ್ತೆ ಒಂದಾಗಿರುವ ಕ್ಷಣಗಳು ವಿಶೇಷ ಗಮನ ಸೆಳೆದವು
ಪ್ರಧಾನ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ವಿಚಾರಣೆಗೆ ಬಂದಿದ್ದ ಡೈವೋರ್ಸ್ ಪ್ರಕರಣದಲ್ಲಿ, 2023ರ ಮೇ 14ರಂದು ವಿವಾಹವಾಗಿದ್ದ ಭವ್ಯಶ್ರೀ ಡಿ. ಹಾಗೂ ವಿವೇಕ್ ದಂಪತಿಗೆ ಸಮಿತ್ ಎಂಬ ಎರಡು ವರ್ಷದ ಮಗುವಿದೆ. ದಂಪತಿಗಳು 2024ರ ಜುಲೈ 4ರಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದು, ಪತ್ನಿ ಭವ್ಯಶ್ರೀ ಅವರು ವಿವಾಹ ವಿಚ್ಛೇದನ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು.
ಪ್ರಕರಣದ ವಿಚಾರಣೆ ವೇಳೆ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಚ್.ಎ. ಶಿಲ್ಪಾ ಅವರು ದಂಪತಿಗೆ ಮಗುವಿನ ಭವಿಷ್ಯ, ಸಾಮಾಜಿಕ ಹಾಗೂ ಆರ್ಥಿಕ ಭದ್ರತೆಯ ಪಾಲನೆ ಪೋಷಣೆ ಬಗ್ಗೆ ಗಮನಹರಸಿ ಮಹತ್ವವನ್ನು ಮನದಟ್ಟು ಮಾಡಿ, ಪರಸ್ಪರ ಸಮಾಲೋಚನೆ ನಡೆಸಿದರು.
ನ್ಯಾಯಾಧೀಶರ ಮನವೊಲಿಕೆಗೆ ಸ್ಪಂದಿಸಿದ ದಂಪತಿ ಮತ್ತೆ ಒಂದಾಗಲು ಒಪ್ಪಿಗೆ ಸೂಚಿಸಿದರು. ಬಳಿಕ ಇಬ್ಬರಿಗೂ ಹೂಮಾಲೆ ಹಾಕಿಸುವ ಮೂಲಕ ಮರುಮಿಲನಕ್ಕೆ ಸಾಕ್ಷಿಯಾದರು.
ಇದೇ ವೇಳೆ, ಪ್ರಧಾನ ಕಿರಿಯ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶರಾದ ದಾಸರಿ ಕ್ರಾಂತಿ ಕಿರಣ್ ಹಾಗೂ ಪ್ರಥಮ ಹೆಚ್ಚುವರಿ ಕಿರಿಯ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶೆ ಪ್ರೀತಿಕೆ ಅವರ ಸಮ್ಮುಖದಲ್ಲಿಯೂ ಇನ್ನೆರಡು ದಂಪತಿಗಳು ರಾಜಿ ಸಂಧಾನದ ಮೂಲಕ ಒಂದಾದರು.
ಈ ಮೂಲಕ ದೊಡ್ಡಬಳ್ಳಾಪುರ ತಾಲೂಕಿನ ಆರು ನ್ಯಾಯಾಲಯಗಳಲ್ಲಿ ನಡೆದ ಲೋಕ ಅದಾಲತ್ನಲ್ಲಿ ಒಟ್ಟು 1,980 ಪ್ರಕರಣಗಳು ಇತ್ಯರ್ಥಗೊಂಡಿದ್ದು, ಮೂರು ವೈವಾಹಿಕ ವಿವಾದಗಳು ಸುಖಾಂತ್ಯ ಕಂಡವು. ಮರು ಒಂದಾದ ದಂಪತಿಗಳಿಗೆ ಹಾಗು ನ್ಯಾಯಧೀಶರುಗಳು ಹಾಗು ವಕೀಲರು ಶುಭ ಹಾರೈಸಿದರು
ಈ ಸಂದರ್ಭದಲ್ಲಿ ದೊಡ್ಡಬಳ್ಳಾಪುರ ವಕೀಲರ ಸಂಘದ ಅಧ್ಯಕ್ಷ ರೇಣುಕಾ ಮೂರ್ತಿ, ಪ್ರಧಾನ ಕಾರ್ಯದರ್ಶಿ ಬಿ.ಕೆ. ಕನಕರಾಜ್, ಉಪಾಧ್ಯಕ್ಷ ಜಗನ್ನಾಥ್ ಕೆ., ಮಾಜಿ ಅಧ್ಯಕ್ಷ ಬಿ.ಎಂ. ಬೈರೇಗೌಡ ವಕೀಲ ಸಂಘದ ಪದಾಧಿಕಾರಿಗಳು ಹಲವು ವಕೀಲರು ಹಾಜರಿದ್ದರು.



