ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ಲೋಕಸೇವಾ ಆಯೋಗದ ಮೂಲಕ ನಡೆದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಹಾಯಕ ಕಾರ್ಯಕಾರಿ ಎಂಜಿನಿಯರ್ ಗ್ರೇಡ್-1 ಹುದ್ದೆಗಳ ನೇಮಕಾತಿಯಲ್ಲಿ ಭಾರೀ ಅಕ್ರಮ ನಡೆದಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ.
ಅಕ್ರಮ ಸಾಬೀತಾಗಿದ್ದರೂ ಹಾಗೂ ತನಿಖಾ ವರದಿಗಳು ಬಂದಿದ್ದರೂ ಪ್ರಿಯಾಂಕ್ ಖರ್ಗೆ ಅವರು ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದಾಗ ತರಾತುರಿಯಲ್ಲಿ 24 ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ಹೊರಡಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿ, ಸೂಕ್ತ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ.
ಪಕ್ಷದ ಕಚೇರಿಯಲ್ಲಿ ನಡೆದ ತುರ್ತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಹರಿಹಾಯ್ದರು. ಸುದ್ದಿಗೋಷ್ಠಿಯಲ್ಲಿ ಕುಮಾರಸ್ವಾಮಿ ಬಿಡುಗಡೆ ಮಾಡಿದ ಪ್ರಮುಖ ಮಾಹಿತಿಯುಳ್ಳ ದಾಖಲೆಗಳು.
ಅಕ್ರಮದ ಹಿನ್ನೆಲೆ: 2022ರಲ್ಲಿ ಆರ್ಡಿಪಿಆರ್ ಎಇಇ ಗ್ರೇಡ್-1 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಾಗಿತ್ತು. 2023ರಲ್ಲಿ ಲಿಖಿತ ಹಾಗೂ ಪರ್ಸನಾಲಿಟಿ ಪರೀಕ್ಷೆ ನಡೆದು, 2023ರ ಸೆಪ್ಟೆಂಬರ್ನಲ್ಲಿ ಹಂಗಾಮಿ ಆಯ್ಕೆ ಪಟ್ಟಿ ಬಿಡುಗಡೆಯಾಗಿತ್ತು. ಈ ಪಟ್ಟಿಯಲ್ಲಿ ಪರೀಕ್ಷೆಯಲ್ಲೇ ಉತ್ತೀರ್ಣರಾಗದ ಅಭ್ಯರ್ಥಿಗಳ ಹೆಸರು ಬಂದಿದೆ ಎಂದು ಆನಂದ್ ಸಿದ್ದರೆಡ್ಡಿ ಎಂಬುವವರು ದೂರು ಸಲ್ಲಿಸಿದ್ದರು.
ಎಫ್ಎಸ್ಎಲ್ ವರದಿಯಲ್ಲಿ ಅಕ್ರಮ ದೃಢ: ಒಎಂಆರ್ ಶೀಟ್ಗಳನ್ನು ವೈಜ್ಞಾನಿಕ ಪರಿಶೀಲನೆಗಾಗಿ ಎಫ್ಎಸ್ಎಲ್ಗೆ ಕಳುಹಿಸಲಾಗಿದ್ದು, ಒಎಂಆರ್ ಶೀಟ್ಗಳನ್ನು ತಿದ್ದಿರುವುದು ಎಫ್ಎಸ್ಎಲ್ ವರದಿಯಲ್ಲಿ ಸ್ಪಷ್ಟವಾಗಿ ಸಾಬೀತಾಗಿದೆ. ಉಪಸಮಿತಿಯ ತನಿಖೆ ಮತ್ತು ಆಯೋಗದ ಅಧ್ಯಕ್ಷರ ಆಕ್ಷೇಪದ ನಡುವೆಯೂ, ಅಧ್ಯಕ್ಷರ ಸಹಿಯಿಲ್ಲದೆ ಅಂತಿಮ ಪಟ್ಟಿಯನ್ನು ಕಳುಹಿಸಿ ನೇಮಕಾತಿ ಆದೇಶ ನೀಡಲಾಗಿದೆ.
ಸಿಬಿಐ ತನಿಖೆಗೆ ಅರ್ಹ ಪ್ರಕರಣ: ಈ ಪ್ರಕರಣವನ್ನು ಸಿಬಿಐಗೆ ವಹಿಸುವ ಕುರಿತು ಹೈಕೋರ್ಟ್ನಲ್ಲಿ ಚರ್ಚೆ ನಡೆದಿದ್ದು, ಇದು ಸಿಬಿಐ ತನಿಖೆಗೆ ಅತ್ಯಂತ ಸೂಕ್ತ ಪ್ರಕರಣ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ ಎಂದು ಕುಮಾರಸ್ವಾಮಿ ತಿಳಿಸಿದರು.
ತದ್ವಿರುದ್ಧ ಹೇಳಿಕೆಗಳು: ಕೆಪಿಎಸ್ಸಿ ಪರೀಕ್ಷಾ ನಿಯಂತ್ರಣಾಧಿಕಾರಿಯಾಗಿದ್ದ ಐಎಎಸ್ ಅಧಿಕಾರಿ ಜ್ಞಾನೇಂದ್ರ ನಾಪತ್ತೆಯಾದ ವಿಚಾರದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ದಿನಕ್ಕೊಂದು ತದ್ವಿರುದ್ಧ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆಗಸ್ಟ್ 23ರಂದು 'ಅಧಿಕಾರಿ ರಜೆಯಲ್ಲಿದ್ದಾರೆ' ಎಂದಿದ್ದ ಸಚಿವರು, ಆಗಸ್ಟ್ 25ರ ಹೊತ್ತಿಗೆ 'ಅಧಿಕಾರಿ ಎಲ್ಲಿದ್ದಾರೆ ಎಂದು ಗೊತ್ತಿಲ್ಲ' ಎಂದಿದ್ದಾರೆ. ಈ ಮೂಲಕ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಲಾಗುತ್ತಿದೆ ಎಂದು ದೂರಿದರು.
ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಪಟ್ಟು: "ತಮ್ಮ ಇಲಾಖೆಯಲ್ಲಿಯೇ ಇಷ್ಟೊಂದು ಬೃಹತ್ ಅಕ್ರಮ ನಡೆದಿದ್ದು, ತನಿಖೆ ಮುಗಿಯುವ ಮುನ್ನವೇ ನೇಮಕಾತಿ ಆದೇಶ ನೀಡಿರುವುದಕ್ಕೆ ಪ್ರಿಯಾಂಕ್ ಖರ್ಗೆ ಅವರೇ ನೇರ ಹೊಣೆಯಾಗಿದ್ದಾರೆ. ಅವರು ತಕ್ಷಣವೇ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು" ಎಂದು ಹೆಚ್.ಡಿ. ಕುಮಾರಸ್ವಾಮಿ ಒತ್ತಾಯಿಸಿದರು.
ಅಲ್ಲದೆ, "ಕೆಪಿಎಸ್ಸಿಯಲ್ಲಿ ಸೀಟುಗಳನ್ನು ಹಾಗೂ ಸದಸ್ಯರ ಹುದ್ದೆಗಳನ್ನು ದರ ನಿಗದಿ ಮಾಡಿ ಮಾರಾಟ ಮಾಡಲಾಗುತ್ತಿದೆ. ಭ್ರಷ್ಟ ವ್ಯವಸ್ಥೆಯ ವಿರುದ್ಧ ರಾಜ್ಯದ ಯುವಕರು ಮತ್ತು ನಿರುದ್ಯೋಗಿಗಳು ಬೀದಿಗೆ ಇಳಿದು ಹೋರಾಟ ನಡೆಸಬೇಕು" ಎಂದು ಕುಮಾರಸ್ವಾಮಿ ಕರೆ ನೀಡಿದರು.




