ಚಂದ್ರವಳ್ಳಿ ನ್ಯೂಸ್, ಹೊಸದಿಲ್ಲಿ:
ಉತ್ತರಾಖಂಡದ ಹಲ್ದ್ವಾನಿಯಲ್ಲಿ ತಾವು ಸಭೆ ನಡೆಸಿದ್ದ ಸ್ಥಳವನ್ನು ಹಿಂದೂಪರ ಸಂಘಟನೆಗಳು 'ಶುದ್ಧೀಕರಣ' ಗೊಳಿಸಿದ ವಿವಾದಕ್ಕೆ ಸಂಬಂಧಿಸಿದಂತೆ, ಸ್ವಪಕ್ಷದ ಹಿರಿಯ ನಾಯಕರೇ ತಮ್ಮ ಬೆಂಬಲಕ್ಕೆ ನಿಲ್ಲದೆ ಮೌನಕ್ಕೆ ಶರಣಾಗಿದ್ದಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಬುಧವಾರ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (CWC) ಸಭೆಯಲ್ಲಿ ಈ ವಿಷಯವನ್ನು ಉಲ್ಲೇಖಿಸಿದ ಅವರು, ಪಕ್ಷದ ನಾಯಕರ ನಡವಳಿಕೆಯಿಂದ ತಮಗಾಗಿರುವ ನೋವನ್ನು ಬಹಿರಂಗವಾಗಿಯೇ ಹೊರಹಾಕಿದ್ದಾರೆ ಎಂದು ವರದಿಯಾಗಿದೆ.
ಘಟನೆಯ ವಿವರ ಹಾಗೂ ನಾಯಕರ ಮೌನ:
ಉತ್ತರಾಖಂಡದ ಹಲ್ದ್ವಾನಿಯಲ್ಲಿ ಖರ್ಗೆಯವರ ಸಾರ್ವಜನಿಕ ಸಭೆ ಮುಗಿದ ಬಳಿಕ ಕೆಲವು ಸಂಘಟನೆಗಳು ಆ ಜಾಗವನ್ನು ಶುದ್ಧೀಕರಣಗೊಳಿಸಿದ್ದವು. ಈ ಕೃತ್ಯವನ್ನು ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿ ಆಡಳಿತಾರೂಢ ಬಿಜೆಪಿ ವಿರುದ್ಧ ಖರ್ಗೆ ವಾಗ್ದಾಳಿ ನಡೆಸಿದ್ದರು. ಆದರೆ, ಈ ಸಂಕಷ್ಟದ ಸಮಯದಲ್ಲಿ ಕಾಂಗ್ರೆಸ್ನ ಹಲವು ಹಿರಿಯ ನಾಯಕರು ಬಹಿರಂಗವಾಗಿ ತಮ್ಮ ಬೆಂಬಲಕ್ಕೆ ಬಾರದಿರುವುದು ಅವರ ಅಸಮಾಧಾನಕ್ಕೆ ಪ್ರಮುಖ ಕಾರಣವಾಗಿದೆ.
ಕೆಸಿ ವೇಣುಗೋಪಾಲ್ ಪ್ರತಿಕ್ರಿಯೆ: ಸಭೆಯ ಬಳಿಕ ಮಾತನಾಡಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, "ಸ್ಥಳ ಶುದ್ಧೀಕರಣಗೊಳಿಸಿದ ಘಟನೆ ಅತ್ಯಂತ ದುರದೃಷ್ಟಕರ ಮತ್ತು ಖಂಡನೀಯ. CWC ಸಭೆಯಲ್ಲಿ ಈ ಕುರಿತು ಖಂಡನಾ ನಿರ್ಣಯ ಅಂಗೀಕರಿಸಲಾಗಿದೆ" ಎಂದು ಸ್ಪಷ್ಟಪಡಿಸಿದರು.
ಬಿಜೆಪಿ ಸ್ಪಷ್ಟನೆ: ರಾಜ್ಯಸಭೆಯಲ್ಲಿ ಖರ್ಗೆ ಅವರು ಈ ವಿಷಯ ಎತ್ತಿದಾಗ ಸಭಾಪತಿ ಹಾಗೂ ಕೇಂದ್ರ ಸಚಿವ ಜೆ.ಪಿ. ನಡ್ಡಾ ಅವರು ವಿಷಾದ ವ್ಯಕ್ತಪಡಿಸಿದ್ದರು. ಈ ಕೃತ್ಯಕ್ಕೂ ಬಿಜೆಪಿ ಕಾರ್ಯಕರ್ತರಿಗೂ ಯಾವುದೇ ಸಂಬಂಧವಿಲ್ಲ, ಬಲಪಂಥೀಯ ಸಂಘಟನೆಗಳ ಈ ನಡವಳಿಕೆಯ ಕುರಿತು ತನಿಖೆ ನಡೆಸಲಾಗುವುದು ಎಂದು ಬಿಜೆಪಿ ಅಂತರ ಕಾಯ್ದುಕೊಂಡಿತ್ತು.
ರಾಜ್ಯಸಭೆಯಲ್ಲಿ ಖರ್ಗೆ ಹೇಳಿದ್ದೇನು?:
"ನಾನು ದಲಿತ, ನನ್ನನ್ನು ರಕ್ಷಿಸಿ ಎಂದು ನಾನು ಯಾರ ಬಳಿಯೂ ಭಿಕ್ಷೆ ಬೇಡುವುದಿಲ್ಲ. ಹೋರಾಡುವ ಶಕ್ತಿ ನನಗಿದೆ. ಆದರೆ, ಈ ರೀತಿಯ ಅಸ್ಪೃಶ್ಯತೆಯ ನಡವಳಿಕೆ ನನಗೆ ತೀವ್ರ ಬೇಸರ ತಂದಿದೆ. ಇದು ನನಗೆ ಮಾಡಿದ ಅವಮಾನ. ಈ ಕೃತ್ಯ ಎಸಗಿದವರ ವಿರುದ್ಧ ತಕ್ಷಣವೇ ಪ್ರಕರಣ ದಾಖಲಿಸಿ ಬಂಧಿಸಬೇಕು" ಎಂದು ಮಲ್ಲಿಕಾರ್ಜುನ ಖರ್ಗೆ ಸದನದಲ್ಲಿ ಗುಡುಗಿದ್ದರು.



