ಬಡಪ್ಪನ ಕಟ್ಟೆ ಕಥೆ ಭಾಗ 1
ಕುಮಾರ್ ಬಡಪ್ಪ
ಚಂದ್ರವಳ್ಳಿ ನ್ಯೂಸ್ ಚಿತ್ರದುರ್ಗ
ಸೂರವ್ವೆ ಆಗಿನಿಂದಲೂ ಊಟಕ್ಕೆ ಕರೆಯುತ್ತಿದ್ದಳು,
ಬಿಸಿ ಮುದ್ದೆ ಆಗೈತೆ ಅದೇಟ್ಹೊತ್ತಿನಿಂದ ಕರಿತಲೇ ಇವ್ನಿ,
ಉಣ್ಣಾಕ್ ಬಾ,ಉಣ್ಣಕ್ ಬಾ ಅಂತ,
ಬಂದು ಉಂಡೋಗ್ಬಾರ್ದೇನು,
ಚಾಕ್ರಿ ಮಾಡಿ ಮಾಡಿ ಸಾಕಾಗೈತೆ ನನ್ಗೆ ,
ಗೂಬೆಗಳೆದ್ದು ಹಾರಾಡೋ ವತ್ತಾದ್ರು ಮ್ಯಾಲೆಳೊದಿಲ್ಲ, ಬೆಳಿಗ್ನಿಂದ ಕೂಲಿ ಹೋಗಿ ನನ್ಗೂ ದಣಿವಾಗಿ,
ದಿಂಬು ಸಿಕ್ರೆ ಸಾಕಂತೈತೆ ಜೀವ ಎದ್ದ್ ಬಾ.
ಮುದ್ದೆ ಮಾಡ್ಕಂಡು,ಬಳಲಿಕೆಯ
ನಿದ್ದೆಗಾಗಿ ಗೊನಕ್ಕೊಂಡಿದ್ಲು ಸೂರವ್ವೆ.
ಬಡಕಯ್ಯನಿಗೆ ಇದ್ಯಾವ್ದೂ ಕೇಳಿಸಿಯೇ ಇಲ್ವೇನೋ ಅನ್ನೋ ಹಾಗೆ,
ಹೊರ ತಡಿಕೆಗೆ ಮೈಯಾಸಿ ಆಗಸದ ಚುಕ್ಕಿಗಳನ್ನ ಎಣಿಸುತ್ತಿರುವ ಹಾಗೆ ತದೇಕದಲ್ಲಿ ದಿಟ್ಟಿಸಿದ್ದ,
ಕಣ್ಣೋಟ ಒಂದ್ಕಡೆ ನೆಟ್ಟಿದ್ರೇ
ಮನಸ್ಸು ಎತ್ತೆತ್ಲೋ ಪ್ರಯಾಣಿಸಿತ್ತು.
ಎರಡು ವರ್ಷಗಳಿಂದ ಎರಗಿದ್ದ ಬರಗಾಲದಿಂದಾಗಿ,ಹಟ್ಟಿಗೆ ಹಟ್ಟಿಯೇ ತತ್ತರಿಸಿ ಹೋಗಿತ್ತು.
ಜನ-ಜಾನುವಾರುಗಳ ಅನ್ನ-ನೀರಿನ ಬವಣೆ ಹೇಳತೀರದ ಮಟ್ಟ ತಲುಪಿ ಪರಿಸ್ಥಿತಿ ಬಿಗಡಾಯಿಸಿತ್ತು.
ಮೇವು ನೀರು ಒದಗಿಸಲಾರದೆ ಕೊಟ್ಟಷ್ಟು ಕಾಸಿಗೆ ದನ ಕರುಗಳನ್ನು ಕಸಾಯಿಖಾನೆಗೆ ಸಾಗಿಸುತ್ತಿದ್ದುದು ದಿನನಿತ್ಯದ ಬವಣೆಯಾದರೆ,
ದಲ್ಲಾಳಿ ಸಲ್ಮಾನ್ ಸಾಬಿಗಂತೂ ಕೈ ತುಂಬಾ ದುಡಿಮೆ.
ಮಲೆನಾಡಿಗೆ ಗುಳೇವು ಹೋದವ್ರು ತಿರುಗಿಯೂ ನೋಡಿರಲಿಲ್ಲ.
ಇದ್ದಬದ್ದವ್ರೂ ಕೂಡ ಮಕ್ಳು ಮರಿಗಿಷ್ಟು
ಗಂಜಿಯಾದ್ರೂ ಸಿಗ್ಲಿ ಅಂತ, ದೂರದ ಬದುಕಿಗೆ ಹೊರಡುತ್ತಿದ್ದುದು ದಿನೇ ದಿನೇ ಚಾಲ್ತಿಯ ಸುದ್ದಿ.
ಹಟ್ಟಿಗೆ ತೊಂದ್ರೆಯಾದ್ರೇ ಆಶ್ರಯ ಕೊಟ್ಟು ಸಾಕುವ ತಾಕತ್ತಿದ್ದುದು
ಮುದ್ದಾಪುರದ ಕೃಷ್ಣೇಗೌಡನಿಗೆ ಮಾತ್ರ,
ಆದ್ರೇ ಪರಿಸ್ಥಿತಿಯನ್ನು ಬಳಸಿಕೊಂಡು ಸಹಾಯಮಾಡೋ ಸೋಗಿನಲ್ಲಿ,
ಮ್ಯಾಸರಹಟ್ಟಿಯ ಕಣ,ಮನೆ,ಹೊಲಗಳನ್ನ ಪಾರಿಕತ್ತು ಮಾಡಿಕೊಳ್ತ ಗಳಿಕೆಯ ತರಾತುರಿಯಲ್ಲಿ ಮುಂದಾಗಿದ್ದ.
ಬೇಲಿಯೇ ಎದ್ದು ಹೊಲ ಮೇಯ್ದ ಹಾಗೆ,
ಇನ್ನು ಉಳಿಯುವುದಾದ್ರೂ ಎಲ್ಲಿ?
ಮೋಸವೋ ವಂಚನೆಯೋ ಸಾಚಾತನವೋ ಯಾವುದಾದ್ರೇನಂತೆ,ಹೆಬ್ಬೆಟ್ಟನ್ನ ಮುಂದು ಮಾಡಿಕೊಂಡಿದ್ದ ಜನ, ಹೇಳಿದ ಕಡೆ ಒತ್ತಿ,
ಕೃಷ್ಣೇಗೌಡ ಕೊಡೋ ಹಣ ಪಡೆದು,ದ್ಯಾವ್ರೂ ಅಂತ ಕಾಲಿಗೆ ಬಿದ್ದು ಹೋಗುತ್ತಿದ್ದುದು ಪರಿಪಾಠ.
ಅಷ್ಟೇನು ನಾಗರಿಕತೆ ಮೈಗೂಡಿಸಿಕೊಂಡ ಊರೇನಲ್ಲ ಮುದ್ದಾಪುರದ ಮ್ಯಾಸರಟ್ಟಿ,
ನೂರರ ಸಂಖ್ಯೆಯ ಒಳಗಿರುವ ಒಂದು ಸಣ್ಣ ಕುಗ್ರಾಮ.
ಇಲ್ಲಿನ ಕೋರ್ಟು,ಕಛೇರಿ, ಸರ್ಕಾರವೆಂದ್ರೆ ಅದು ಕರುವಿನಕಟ್ಟೆ ಕೃಷ್ಣೇಗೌಡನೇ.
ಸಿರಿವಂತ ಮನೆತನ,
ತುಂಬಾ ಹಿಂದೆನೇ ಅಜ್ಜನ ಕಾಲಕ್ಕೆ
ದುರ್ಗದ ಕರುವಿನಕಟ್ಟೆಯಿಂದ ಮುದ್ದಾಪುರಕ್ಕೆ ಬಂದು ನೆಲೆಸಿದ್ದಂತ ಸ್ಥಿತಿವಂತ ಕುಟುಂಬ,
ನಡೆಗೂ ನುಡಿಗೂ ತುಂಬಾನೇ ವ್ಯತ್ಯಾಸ
ಬಾಯಿಂದಾನೇ ಮುಂಬಯಿ ತೋರಿಸೋ ನಿಸ್ಸೀಮ, ರಾಜಕೀಯ ನಂಟಿನ ಜೊತೆ
ಇಲ್ಲಿನ ಸುತ್ತಳ್ಳಿಗಳಿಗೆ ಕರುವಿನಕಟ್ಟೆ ಗೌಡ್ರು ಅಂತನೇ ಸುದ್ದಿಯಾಗಿಸಿಕೊಂಡಿದ್ದ. ಹಳ್ಳಿಯ ಮುಗ್ಧತೆ ಅನಕ್ಷರತೆಯನ್ನೇ ಬಂಡ್ವಾಳವಾಗಿಸಿಕೊಂಡಿದ್ದ ಕೃಷ್ಣೇಗೌಡ
ಸರಿಯೋ ತಪ್ಪೋ ಅವನು ಕೊಡೋ ತೀರ್ಪೇ ಅಂತಿಮವಾಗಿ ದೊರೆ ವಾಕ್ಯವಾಗುತ್ತಿತ್ತು,
ಕರುವಿನಕಟ್ಟೆ ಗೌಡನ ಎಂಜಲೆಂದ್ರೆ ಹಳ್ಳಿಯ ಮಟ್ಟಕ್ಕೆ ಪ್ರಸಾದವೇ!
ಲೇಖನ: ಕುಮಾರ್ ಬಡಪ್ಪ , ಚಿತ್ರದುರ್ಗ. ನಾಳೆಗೆ........


