ಚಂದ್ರವಳ್ಳಿ ನ್ಯೂಸ್, ಬೆಳ್ತಂಗಡಿ (ದಕ್ಷಿಣ ಕನ್ನಡ):
ರಾಜ್ಯ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಪಾಳಯದಲ್ಲಿ ನಡೆದಿದೆ ಎನ್ನಲಾದ ’ಅಡ್ಡ ಮತದಾನ’ ರಾಜಕೀಯ ವಲಯದಲ್ಲಿ ತೀವ್ರ ಬಿರುಗಾಳಿ ಎಬ್ಬಿಸಿದೆ.
ಆರೋಪ ಎದುರಿಸುತ್ತಿರುವ ಶಾಸಕರು "ನಾನಲ್ಲ, ನಾನಲ್ಲ" ಎಂದು ಸಮರ್ಥಿಸಿಕೊಳ್ಳುತ್ತಿರುವ ಬೆನ್ನಲ್ಲೇ, ಹಾಸನ ಜಿಲ್ಲೆಯ ಬೇಲೂರು ಕ್ಷೇತ್ರದ ಬಿಜೆಪಿ ಶಾಸಕ ಹುಲ್ಲಹಳ್ಳಿ ಕೆ. ಸುರೇಶ್ ಅವರು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮಂಜುನಾಥ ಸ್ವಾಮಿಯ ಸಾಕ್ಷಿಯಾಗಿ ಆಣೆ ಪ್ರಮಾಣ ಮಾಡಿದ್ದಾರೆ.
೧೦೦ಕ್ಕೂ ಹೆಚ್ಚು ಕಾರುಗಳಲ್ಲಿ ಬಂದ ಬೆಂಬಲಿಗರು:
ಶಾಸಕ ಹುಲ್ಲಹಳ್ಳಿ ಸುರೇಶ್ ಅವರು ತಮ್ಮ ೨೫೦ಕ್ಕೂ ಹೆಚ್ಚು ಬೆಂಬಲಿಗರೊಂದಿಗೆ, ಸುಮಾರು ೧೦೦ಕ್ಕೂ ಹೆಚ್ಚು ವಾಹನಗಳ ಬೃಹತ್ ಕಾನ್ವಾಯ್ ಮೂಲಕ ಧರ್ಮಸ್ಥಳಕ್ಕೆ ಆಗಮಿಸಿದರು. ಬೆಂಬಲಿಗರು ಕೇಸರಿ ಶಾಲು ಹಾಗೂ ಬಿಜೆಪಿ ಪಕ್ಷದ ಬಾವುಟಗಳನ್ನು ಹಿಡಿದು ಶಾಸಕರಿಗೆ ಸಾಥ್ ನೀಡಿದರು. ಪವಿತ್ರ ನೇತ್ರಾವತಿ ನದಿಯಲ್ಲಿ ತೀರ್ಥ ಪ್ರೋಕ್ಷಣೆ ಮಾಡಿಕೊಂಡ ಬಳಿಕ ಅವರು ದೇವಸ್ಥಾನಕ್ಕೆ ತೆರಳಿದರು.
ಅಣ್ಣಪ್ಪ ಬೆಟ್ಟದಲ್ಲಿ ವಿಶೇಷ ಪ್ರಾರ್ಥನೆ, ತೆಂಗಿನಕಾಯಿ ಸೇವೆ:
ಮಂಜುನಾಥ ಸ್ವಾಮಿಯ ದರ್ಶನಕ್ಕೂ ಮುನ್ನ ಅಣ್ಣಪ್ಪ ಸ್ವಾಮಿ ಬೆಟ್ಟಕ್ಕೆ ಭೇಟಿ ನೀಡಿದ ಶಾಸಕರು, ವಿಶೇಷ ಪ್ರಾರ್ಥನೆ ಸಲ್ಲಿಸಿ ತೆಂಗಿನಕಾಯಿ ಒಡೆದರು. "ನಾನು ಪಕ್ಷಕ್ಕೆ ಯಾವುದೇ ದ್ರೋಹ ಮಾಡಿಲ್ಲ. ನನ್ನ ಮೇಲೆ ಅಪಪ್ರಚಾರ ಮಾಡಿದವರಿಗೆ ಆ ಭಗವಂತನೇ ಒಳ್ಳೆಯ ಬುದ್ಧಿ ನೀಡಲಿ" ಎಂದು ಅಣ್ಣಪ್ಪ ಸ್ವಾಮಿಯ ಮುಂದೆ ಮೊರೆ ಇಟ್ಟರು.
"ಬಿಜೆಪಿ ನನ್ನ ತಾಯಿ, ನಾನು ದ್ರೋಹ ಮಾಡಿಲ್ಲ":
ದರ್ಶನದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಸುರೇಶ್, ತಮ್ಮ ಮೇಲಿನ ಆರೋಪಗಳನ್ನು ಬಲವಾಗಿ ನಿರಾಕರಿಸಿದರು:
"ನಾನು ಬಿಜೆಪಿಯ ನಿಷ್ಠಾವಂತ ಮತ್ತು ಪ್ರಾಮಾಣಿಕ ಕಾರ್ಯಕರ್ತ. ವಿಧಾನ ಪರಿಷತ್ ಚುನಾವಣೆಯಲ್ಲಿ ನಾನು ಯಾವುದೇ ಅಡ್ಡ ಮತದಾನ ಮಾಡಿಲ್ಲ. ಪಕ್ಷದ ವರಿಷ್ಠರು ಸೂಚಿಸಿದ ಅಧಿಕೃತ ಅಭ್ಯರ್ಥಿಗೇ ನನ್ನ ಮತ ಚಲಾಯಿಸಿದ್ದೇನೆ ಎಂದು ಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ ಪ್ರಮಾಣ ಮಾಡುತ್ತೇನೆ. ಬಿಜೆಪಿ ಪಕ್ಷ ನನ್ನ ತಾಯಿಗೆ ಸಮಾನ. ನನ್ನ ರಾಜಕೀಯ ಬೆಳವಣಿಗೆಯನ್ನು ಸಹಿಸದ ಕೆಲವರು ನನ್ನ ವಿರುದ್ಧ ವೃಥಾ ಆರೋಪ ಮಾಡುತ್ತಿದ್ದಾರೆ. ಇದಕ್ಕೆ ಮಂಜುನಾಥ ಸ್ವಾಮಿ ಮತ್ತು ನನ್ನ ಕ್ಷೇತ್ರದ ಜನರೇ ಸಾಕ್ಷಿ."
ತಮ್ಮ ಮೇಲಿನ ಆರೋಪಕ್ಕೆ ಸಾಲುವಾಗಿ ಹಾಗೂ ತಮ್ಮನ್ನು ನಂಬಿದ ಜನರಿಗಾಗಿ ಶಾಸಕರು ದೇವಸ್ಥಾನದ ಹುಂಡಿಗೆ ಕಾಣಿಕೆಯನ್ನೂ ಸಮರ್ಪಿಸಿದರು.
ವಿಜಯೇಂದ್ರ ಹೇಳಿಕೆ ಮತ್ತು ಹೈಕಮಾಂಡ್ ಹಸ್ತಕ್ಷೇಪ:
ಪರಿಷತ್ ಚುನಾವಣೆ ಮುಗಿದ ಬೆನ್ನಲ್ಲೇ ಆಕ್ರೋಶ ಹೊರಹಾಕಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, "ಅಡ್ಡ ಮತದಾನ ಮಾಡಿದವರು ಯಾರು ಎಂಬುದು ಶ್ರೀ ಕ್ಷೇತ್ರದಲ್ಲೇ (ಧರ್ಮಸ್ಥಳ) ಗೊತ್ತಾಗಲಿ. ನನ್ನನ್ನೂ ಸೇರಿ ಎಲ್ಲರ ಮೇಲೆಯೂ ಅನುಮಾನ ಬರುವಂತಾಗಿದೆ. ಇದನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇವೆ" ಎಂದು ಹೇಳಿಕೆ ನೀಡಿದ್ದರು.
ವಿಜಯೇಂದ್ರ ಅವರ ಈ ’ಧರ್ಮಸ್ಥಳದ ಶಪಥ’ ಹೇಳಿಕೆ ರಾಜಕೀಯವಾಗಿ ಪರ-ವಿರೋಧದ ಚರ್ಚೆಗೆ ಗ್ರಾಸವಾಗಿತ್ತು. ಆದರೆ, ಪಕ್ಷದ ಹೈಕಮಾಂಡ್ "ರಾಜಕೀಯ ವಿಚಾರಗಳಿಗೆ ಆಣೆ-ಪ್ರಮಾಣದ ರಾಜಕಾರಣ ಬೇಡ" ಎಂದು ಖಡಕ್ ಸೂಚನೆ ನೀಡಿದ ಹಿನ್ನೆಲೆಯಲ್ಲಿ, ವಿಜಯೇಂದ್ರ ಅವರು ಈ ಚರ್ಚೆಯನ್ನು ಕೈಬಿಟ್ಟಿದ್ದರು. ಆದಾಗ್ಯೂ, ಬೇಲೂರು ಶಾಸಕರು ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡಿರುವುದು ಈಗ ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿದೆ.



