ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ಜಿಲ್ಲೆ ಕರ್ನಾಟಕದ ಬಯಲುಸೀಮೆಯ ಪ್ರಮುಖ ಜಿಲ್ಲೆಗಳಲ್ಲಿ ಒಂದಾಗಿದ್ದು ಮಳೆಯ ಅನಿಶ್ಚಿತತೆ, ಪದೇಪದೇ ಎದುರಾಗುವ ಬರಗಾಲ, ಅಂತರ್ಜಲದ ಕುಸಿತ ಇವೆಲ್ಲವೂ ಜಿಲ್ಲೆಯ ರೈತರ ಬದುಕಿನ ಮೇಲೆ ಪರಿಣಾಮ ಬೀರುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಚಿತ್ರದುರ್ಗದ ಜನರ ಪಾಲಿಗೆ ಕೇವಲ ಒಂದು ನೀರಾವರಿ ಯೋಜನೆಯಲ್ಲ ಅದು ಹಲವು ವರ್ಷಗಳಿಂದ ನಿರೀಕ್ಷಿಸುತ್ತಿರುವ ಕೃಷಿಯ ಸ್ಥಿರತೆ ಮತ್ತು ಗ್ರಾಮೀಣ ಆರ್ಥಿಕತೆಯ ಪುನರುಜ್ಜೀವನದ ಕನಸಾಗಿದೆ.
ಚಿತ್ರದುರ್ಗ ಜಿಲ್ಲೆಯ ಬಹುಭಾಗ ಬಯಲು ಸೀಮೆಯಿಂದ ಕೂಡಿದ್ದು ಇಲ್ಲಿನ ಕೃಷಿಯು ಬಹುತೇಕ ಮಳೆ ಮತ್ತು ಅಂತರ್ಜಲದ ಮೇಲೆ ಅವಲಂಬಿತವಾಗಿದೆ. ಮಳೆ ಪ್ರಮಾಣ ಕಡಿಮೆಯಾದಾಗ ಬಿತ್ತನೆ ವಿಫಲವಾಗುತ್ತದೆ ಮಳೆ ಸಮಯಕ್ಕೆ ಬಾರದಿದ್ದರೆ ಬೆಳೆಗಳಿಗೆ ನೀರಿನ ಕೊರತೆ ಉಂಟಾಗುತ್ತದೆ. ನಿರಂತರವಾಗಿ ಕೊಳವೆಬಾವಿಗಳ ಮೇಲೆ ಅವಲಂಬಿತವಾಗುವುದರಿಂದ ಅಂತರ್ಜಲದ ಮೇಲೆಯೂ ಒತ್ತಡ ಹೆಚ್ಚುತ್ತದೆ. ಈ ಹಿನ್ನೆಲೆಯಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಚಿತ್ರದುರ್ಗ ಜಿಲ್ಲೆಯ ನೀರಿನ ಸಮಸ್ಯೆಗೆ ಬಹುದೊಡ್ಡ ಪರಿಹಾರ ಸಿಗುವುದರ ಜೊತೆಗೆ ಕೃಷಿ ವ್ಯವಸ್ಥೆಯಲ್ಲೇ ದೊಡ್ಡ ಬದಲಾವಣೆ ಕಾಣಬಹುದಾಗಿದೆ.
ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿಯಲ್ಲಿ ಗಮನ ಸೆಳೆಯುತ್ತಿರುವ ಮತ್ತೊಂದು ಪ್ರಮುಖ ಆಕರ್ಷಣೆ ಎಂದರೆ ಚಿತ್ರದುರ್ಗ ನಗರದ ಸಮೀಪ ಇರುವ ಗೋನೂರು ಎಂಬ ಹಳ್ಳಿಯಲ್ಲಿ ಕರ್ನಾಟಕದ ಅತ್ಯಂತ ಎತ್ತರದ ನೀರಾವರಿ ಅಕ್ವೆಡಕ್ಟ್ನಿರ್ಮಾಣವಾಗಿರುವುದು. ಎತ್ತರ ಸುಮಾರು 120 ಅಡಿಗಳು ಹಾಗೂ ಉದ್ದ ಸುಮಾರು 1.94 ಕಿಲೋಮೀಟರ್ಗಳು.
ಮಧ್ಯ ಕರ್ನಾಟಕದ ಬರಪೀಡಿತ ಪ್ರದೇಶಗಳಿಗೆ ನೀರಿನ ಶಾಶ್ವತ ಪರಿಹಾರ ಕಲ್ಪಿಸುವ ಉದ್ದೇಶದಿಂದ ಭದ್ರಾ ಮೇಲ್ದಂಡೆ ಯೋಜನೆಯು ತುಂಗಾ ನದಿಯಿಂದ 17.40 ಟಿಎಂಸಿ ನೀರನ್ನು ಭದ್ರಾ ಜಲಾಶಯಕ್ಕೆ ಎತ್ತಿ ಅಲ್ಲಿಂದ 29.90 ಟಿಎಂಸಿ ನೀರನ್ನು ಅಜ್ಜಂಪುರದ ಸುರಂಗದ ಮೂಲಕ ವಿವಿಧ ಶಾಖಾ ಕಾಲುವೆಗಳ ಮೂಲಕ ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಮತ್ತು ತುಮಕೂರು ಜಿಲ್ಲೆಗಳ ಬರಪೀಡಿತ ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಒದಗಿಸುವ ಗುರಿಯನ್ನು ಹೊಂದಿದೆ. ಕರ್ನಾಟಕ ಸರ್ಕಾರದ ಆರ್ಥಿಕ ಸಮೀಕ್ಷೆಯ ಪ್ರಕಾರ, ಯೋಜನೆಯಡಿ ಒಟ್ಟು 2,25,515 ಹೆಕ್ಟೇರ್ ಪ್ರದೇಶಕ್ಕೆ ಸೂಕ್ಷ್ಮ ನೀರಾವರಿ ಸೌಲಭ್ಯ ಒದಗಿಸುವ ಮತ್ತು 367 ಕೆರೆಗಳನ್ನು ಅವುಗಳ ಸಾಮರ್ಥ್ಯದ ಶೇ.50 ರಷ್ಟು ತುಂಬಿಸುವ ಉದ್ದೇಶವನ್ನು ಹೊಂದಿದೆ. ಚಿತ್ರದುರ್ಗ ಜಿಲ್ಲೆಗೆ ಸಂಬಂಧಿಸಿದ ತಾಲೂಕುಗಳಿಗೆ ಶಾಖಾ ಕಾಲುವೆಗಳ ಮೂಲಕ ಸುಮಾರು 90 ಕೆರೆಗಳನ್ನು ಅವುಗಳ ಸಾಮರ್ಥ್ಯದ ಸುಮಾರು 50% ಮಟ್ಟಕ್ಕೆ ತುಂಬಿಸುವ ಯೋಜನೆಯಾಗಿದ್ದು. ಈ ಪಟ್ಟಿಯಲ್ಲಿ ಕಡೂರು 22, ಹೊಸದುರ್ಗ 32, ಹೊಳಲ್ಕೆರೆ 30, ಹಿರಿಯೂರು 3 ಮತ್ತು ಚಿತ್ರದುರ್ಗ 3 ಕೆರೆಗಳು ಸೇರಿವೆ.
ಭದ್ರಾ ಮೇಲ್ದಂಡೆ ಯೋಜನೆ ಕೇವಲ ಒಂದು ನೀರಾವರಿ ಯೋಜನೆಯಲ್ಲ ಮಧ್ಯ ಕರ್ನಾಟಕದ ಜಲಭದ್ರತೆಯ ಪ್ರಮುಖ ಯೋಜನೆಯಾಗಿದೆ. 2008–09ರಲ್ಲಿ ಸುಮಾರು 5,900 ಕೋಟಿಯ ಯೋಜನೆಯಾಗಿ ಆರಂಭವಾದ ಇದರ ವೆಚ್ಚ ಎರಡು ದಶಕಗಳೊಳಗೆ 21,000 ಕೋಟಿಗೂ ಅಧಿಕ ಮಟ್ಟಕ್ಕೆ ಏರಿದೆ. 2023 ರಲ್ಲಿ ಕೇಂದ್ರ ಸರ್ಕಾರದಿಂದ 5,300 ಕೋಟಿಯ ನೆರವು ಘೋಷಿಸಲಾಯಿತು.
2026 ರ ಸಪ್ಟೆಂಬರ್ 6 ರಂದು ಪ್ರಾಯೋಗಿಕವಾಗಿ ನೀರುಹರಿಸುತ್ತಿರುವುದು ಚಿತ್ರದುರ್ಗ ಜನತೆಯ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ. ಈ ಒಂದು ಯೋಜನೆಗೆ ಕಾರಣಿಭೂತರಾದ ಸಮಸ್ತರಿಗೂ ಚಿತ್ರದುರ್ಗ ಜನತೆ ಎಂದಿಗೂ ಚಿರಋಣಿಗಳಾಗಿರುತ್ತಾರೆ ಧನ್ಯವಾದಗಳು.
ಲೇಖನ: ಡಾ. ಎಂ ವಸಂತ್ ಆಚಾರ್, ಅಧ್ಯಕ್ಷರು, ಭಾರತೀಯ ಜನತಾ ಪಾರ್ಟಿ, ಚಿತ್ರದುರ್ಗ ನಗರ ಯುವ ಮೋರ್ಚಾ.




