ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಮಕ್ಕಳು ಬೇರೆಯವರ ಬಗ್ಗೆ ಪೂರ್ವಾಗ್ರಹ ಪೀಡಿತ ಮನೋಭಾವನೆಗಳನ್ನು ಬೆಳೆಸಿಕೊಳ್ಳದೇ ಸಕಾರಾತ್ಮಕ ದೃಷ್ಟಿಕೋನವನ್ನು ಹೊಂದಿರಬೇಕು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸ್ವಯಂಸೇವಕಿ ಡಾ.ಭೂಮಿಕ ಅಭಿಪ್ರಾಯಪಟ್ಟರು.
ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದಲ್ಲಿ ಮಕ್ಕಳಿಗಾಗಿ ಆಯೋಜಿಸಿದ್ದ ವಾರದ "ವಿವೇಕ ವಿಹಾರ ವಿದ್ಯಾರ್ಥಿ ಶಿಬಿರ" ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ನೀತಿಕಥೆ ಹೇಳುತ್ತಾ ಮಾತನಾಡಿದರು.
ಶಿಬಿರದ ನಿಮಿತ್ತ ಯತೀಶ್ ಎಂ ಸಿದ್ದಾಪುರ ನೇತೃತ್ವದಲ್ಲಿ ಮಕ್ಕಳಿಂದ ಧ್ಯಾನ, ಓಂಕಾರ, ದಿವ್ಯತ್ರಯರ ಪ್ರಣಾಮಮಂತ್ರ , ಶ್ರೀರಾಮಕೃಷ್ಣರ ನಾಮಸ್ಮರಣೆ, ಸ್ವಾಮಿ ವಿವೇಕಾನಂದರ ಶಕ್ತಿಮಂತ್ರ, ಸ್ವದೇಶ ಮಂತ್ರ, ಚೈತನ್ಯದಾಯಕ ನುಡಿಗಳ ಪಠಣ,ಭಜನೆ ನಡೆದರೆ ಸಂತೋಷ್ ಅವರು ವಿವಿಧ ಆಟಗಳನ್ನು ಆಡಿಸಿದರು.
ಅಮ್ಮಾ ಶಾರದಾಮಾತೆ ಹೇಳುವಿಕೆ, ಜೈಕಾರ, ಪ್ರಸಾದ ವಿನಿಯೋಗ ನಡೆಯಿತು. ತರಗತಿಯಲ್ಲಿ ಮಾತಾಜೀ ತ್ಯಾಗಮಯೀ, ಹರ್ಷಿತಾ, ಚರಣ್ಯ, ಸಹನಾ, ವಿವಿಕ್ತ, ಯಶಸ್, ವೈಷ್ಣವಿ, ಚಿರಣ್ಯ,ಭಾವನಾ, ವರ್ಷ ಪಾಲ್ಗೊಂಡಿದ್ದರು.



