ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದಲ್ಲಿ ಮುಂಗಾರು ಮಳೆ ಕೈಕೊಟ್ಟು ಭೀಕರ ಬರಗಾಲ ಸೃಷ್ಟಿಯಾಗಿರುವುದಕ್ಕೆ ಮುಖ್ಯಮಂತ್ರಿಗಳ 'ಕಾಲ್ಗುಣ'ವೇ ಕಾರಣ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ತೀವ್ರವಾಗಿ ಟೀಕಿಸಿದ್ದಾರೆ. ಹೊಸ ಸರ್ಕಾರ ಅಧಿಕಾರಕ್ಕೆ ಬಂದು ಒಂದು ತಿಂಗಳಾಗಿದ್ದರೂ ಆಡಳಿತದಲ್ಲಿ ಯಾವುದೇ ಬದಲಾವಣೆಯಾಗಿಲ್ಲ, ಹಳೇ ಬಾಟಲಿಗೆ ಹೊಸ ಮದ್ಯ ತುಂಬಿದಂತೆ ಭ್ರಷ್ಟಾಚಾರ ಮುಂದುವರಿದಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಬೆಳೆ ಬೆಳೆಯಬೇಡಿ ಅನ್ನೋಕೆ ನಿಮಗೇನು ಧೈರ್ಯ?":
ರೈತರಿಗೆ ಬೆಳೆ ಬೆಳೆಯಬೇಡಿ ಎಂದು ಸಲಹೆ ನೀಡುತ್ತಿರುವ ಸರ್ಕಾರದ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ ಆರ್. ಅಶೋಕ್, "ನಿಮಗೆ ಧೈರ್ಯವಿದ್ದರೆ ಇದೇ ಮಾತನ್ನು ತಮಿಳುನಾಡಿಗೆ ಹೋಗಿ ಹೇಳಿ. ಯಾವ ಕಾಲದಲ್ಲಿ ಯಾವ ಬೆಳೆ ಬೆಳೆಯಬೇಕು ಎಂಬುದು ರೈತರಿಗೆ ಚೆನ್ನಾಗಿ ಗೊತ್ತಿದೆ. ಬೆಳೆ ಬೆಳೆಯಬೇಡಿ ಎನ್ನುವ ಸರ್ಕಾರ, ರೈತರಿಗೆ ನೀಡುವ ಪರಿಹಾರದ ಬಗ್ಗೆ ಯಾಕೆ ಮಾತನಾಡುತ್ತಿಲ್ಲ? ಇದುವರೆಗೆ ಒಬ್ಬನೇ ಒಬ್ಬ ಮಂತ್ರಿ ಬರ ವೀಕ್ಷಣೆಗೆ ಹೋಗಿದ್ದಾರಾ?" ಎಂದು ಪ್ರಶ್ನಿಸಿದರು.
ತಮಿಳುನಾಡಿಗೆ ಕದ್ದುಮುಚ್ಚಿ ನೀರು ಬಿಡುಗಡೆ ಆರೋಪ!:
ಮೇಕೆದಾಟು ಯೋಜನೆಗೆ ಒಂದು ಇಟ್ಟಿಗೆಯನ್ನೂ ಇಡಲು ಬಿಡುವುದಿಲ್ಲ ಎಂದು ತಮಿಳುನಾಡು ಮುಖ್ಯಮಂತ್ರಿ ವಿಜಯ್ ಹೇಳುತ್ತಿದ್ದರೂ, ನಮ್ಮ ಸರ್ಕಾರ ಅದಕ್ಕೆ ಪ್ರತಿಯಾಗಿ ಯಾವುದೇ ನಿರ್ಣಯ ಕೈಗೊಂಡಿಲ್ಲ. ಬದಲಿಗೆ ತಮಿಳುನಾಡಿಗೆ ಕದ್ದುಮುಚ್ಚಿ ನೀರು ಬಿಡಲಾಗುತ್ತಿದೆ. ಜಲಾಶಯಗಳಲ್ಲಿ ನೀರಿನ ಕೊರತೆಯಿದ್ದರೂ, ಕಾಂಗ್ರೆಸ್ ಸರ್ಕಾರಕ್ಕೆ ಲಂಚದ ಕೊರತೆಯಿಲ್ಲ ಎಂದು ಅವರು ಗಂಭೀರ ಆರೋಪ ಮಾಡಿದರು.
ಸರ್ಕಾರದ ವೈಫಲ್ಯಗಳ ಪಟ್ಟಿ ಬಿಡುಗಡೆ:
ಸಚಿವರ ಬೇಜವಾಬ್ದಾರಿ: ತುಂಗಭದ್ರಾ ಜಲಾಶಯದ ಕ್ರಸ್ಟ್ಗೇಟ್ ಉದ್ಘಾಟನೆಗೆ ಮೂರು ರಾಜ್ಯಗಳ ಮುಖ್ಯಮಂತ್ರಿಗಳು ಬಂದಿದ್ದರೂ, ನಮ್ಮ ನೀರಾವರಿ ಸಚಿವ ರಾಮಲಿಂಗಾರೆಡ್ಡಿ ಮಾತ್ರ ಕಾರ್ಯಕ್ರಮಕ್ಕೆ ಹೋಗದೆ ಬೆಂಗಳೂರಲ್ಲೇ ಉಳಿದುಕೊಂಡಿದ್ದಾರೆ.
ಅಪೂರ್ಣ ಸಂಪುಟ: ಹತ್ತು ದಿನಗಳಲ್ಲಿ ಪೂರ್ಣ ಸಂಪುಟ ರಚಿಸುವುದಾಗಿ ಹೇಳಿದ್ದರು, ಆದರೆ ಒಂದು ತಿಂಗಳಾದರೂ ಸಂಪುಟ ಪೂರ್ಣಗೊಂಡಿಲ್ಲ.
ಬಜೆಟ್ನಲ್ಲಿ ನಿರ್ಲಕ್ಷ್ಯ: ಮೇಕೆದಾಟು ಯೋಜನೆಗೆ ಸರ್ಕಾರ ಬಜೆಟ್ನಲ್ಲಿ ಯಾವುದೇ ಹಣ ಇಟ್ಟಿಲ್ಲ. ಕನಿಷ್ಠ ಡ್ಯಾಮ್ ಅಕ್ಕಪಕ್ಕದ ರೈತರ ಸಭೆ ಕರೆದು ಮಾಹಿತಿ ನೀಡುವ ಸೌಜನ್ಯವೂ ಸರ್ಕಾರಕ್ಕಿಲ್ಲ.
"ಈ ಸರ್ಕಾರಕ್ಕೆ ಯಾವುದೇ ದಿಕ್ಕುದೆಸೆಯಿಲ್ಲ. ಇದು ಬರೀ ಫೋಟೋ ಶೂಟ್ಗೆ ಸೀಮಿತವಾಗಿರುವ ಸರ್ಕಾರ" ಎಂದು ಆರ್. ಅಶೋಕ್ ಲೇವಡಿ ಮಾಡಿದ್ದಾರೆ.



