ಚಂದ್ರವಳ್ಳಿ ನ್ಯೂಸ್, ನವದೆಹಲಿ:
ಕಾಂಗ್ರೆಸ್ ಪ್ರಧಾನ ಕಚೇರಿ ಹಾಗೂ ಗೋವಾದಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ‘ವಂದೇ ಮಾತರಂ’ ಗೀತೆ ಪಠಣಕ್ಕೆ ಸಂಬಂಧಿಸಿದಂತೆ ಎದ್ದಿರುವ ವಿವಾದಕ್ಕೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ಧ ದೂರು ದಾಖಲಿಸಿರುವುದನ್ನು ಪ್ರಶ್ನಿಸಿರುವ ಅವರು, "ಹಳೆಯ ಆವೃತ್ತಿಯ ರಾಷ್ಟ್ರಗೀತೆ/ ಗೀತೆ ಹಾಡುವುದು ಅಪರಾಧವೇ ಆದಲ್ಲಿ, ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರು ಹಾಗೂ ಅಟಲ್ ಬಿಹಾರಿ ವಾಜಪೇಯಿ ಅವರ ವಿರುದ್ಧವೂ ಮೊದಲು ಪ್ರಕರಣ ದಾಖಲಿಸಲಿ," ಎಂದು ತಿರುಗೇಟು ನೀಡಿದ್ದಾರೆ.
ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಸೋನಿಯಾ ಗಾಂಧಿ ಅವರು ವಂದೇ ಮಾತರಂ ಗೀತೆಯನ್ನು ಅರ್ಧಕ್ಕೆ ನಿಲ್ಲಿಸುವಂತೆ ಸೂಚಿಸಿದ್ದಾರೆ ಎಂದು ಆರೋಪಿಸಿ ಬಿಜೆಪಿ ನಾಯಕರು ವಾಗ್ದಾಳಿ ನಡೆಸಿದ್ದು, ಈ ಸಂಬಂಧ ದೆಹಲಿ ಪೊಲೀಸರಿಗೆ ದೂರು ಕೂಡ ಸಲ್ಲಿಕೆಯಾಗಿದೆ. ಆದರೆ ಈ ಆರೋಪವನ್ನು ಕಾಂಗ್ರೆಸ್ ತೀವ್ರವಾಗಿ ನಿರಾಕರಿಸಿದೆ.
ಖರ್ಗೆ ಹಾಗೂ ಕಾಂಗ್ರೆಸ್ ನಾಯಕರ ಸ್ಪಷ್ಟನೆ: ಖುರ್ಚಿ ತರಲು ಸನ್ನೆ ಮಾಡಿದ್ದು, ಗೀತೆ ನಿಲ್ಲಿಸಲಲ್ಲ. "ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಆರೋಗ್ಯ ಸರಿಯಿಲ್ಲದ ಕಾರಣ ಅವರಿಗೆ ಹೆಚ್ಚು ಹೊತ್ತು ನಿಲ್ಲಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಸೋನಿಯಾ ಗಾಂಧಿ ಅವರು ಖುರ್ಚಿ ತಂದುಕೊಡುವಂತೆ ಸನ್ನೆ ಮಾಡಿದ್ದರೇ ಹೊರತು, ಗೀತೆ ನಿಲ್ಲಿಸಲು ಅಲ್ಲ. ಬಿಜೆಪಿ ಸುಳ್ಳು ಸುದ್ದಿ ಹಬ್ಬಿಸುತ್ತಿದೆ," ಎಂದು ಕಾಂಗ್ರೆಸ್ ನಾಯಕ ಉದಿತ್ ರಾಜ್ ಸ್ಪಷ್ಟಪಡಿಸಿದ್ದಾರೆ.
ಐತಿಹಾಸಿಕ ಹಿನ್ನೆಲೆ ನೆನಪಿಸಿದ ಖರ್ಗೆ: "ನಾವು ಮಹಾತ್ಮ ಗಾಂಧಿ, ನೆಹರು ಹಾಗೂ ವಾಜಪೇಯಿ ಅವರ ಕಾಲದಿಂದಲೂ ಹಾಡಿಕೊಂಡು ಬಂದಿರುವ ಅದೇ ವಂದೇ ಮಾತರಂ ಅನ್ನು ಹಾಡುತ್ತಿದ್ದೇವೆ. ಸ್ವತಃ ನರೇಂದ್ರ ಮೋದಿ ಅವರೇ ಮುಖ್ಯಮಂತ್ರಿಯಾಗಿದ್ದಾಗ 12 ವರ್ಷಗಳ ಕಾಲ ಇದೇ ಆವೃತ್ತಿಯನ್ನು ಹಾಡಿದ್ದಾರೆ. ಇದು ಅಪರಾಧವಾದರೆ ಇದನ್ನು ಹಾಡಿದ ಎಲ್ಲ ನಾಯಕರ ಮೇಲೆಯೂ ಪ್ರಕರಣ ದಾಖಲಿಸಬೇಕಾಗುತ್ತದೆ," ಎಂದು ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರವು ಇತ್ತೀಚೆಗೆ ಸರ್ಕಾರಿ ಕಾರ್ಯಕ್ರಮಗಳು ಹಾಗೂ ಶಾಲೆಗಳಲ್ಲಿ ‘ವಂದೇ ಮಾತರಂ’ ಪೂರ್ಣ ಗೀತೆಯನ್ನು ಕಡ್ಡಾಯಗೊಳಿಸಿ, ಗೀತೆಗೆ ಅಡ್ಡಿಪಡಿಸುವುದನ್ನು ಅಪರಾಧ ಎಂದು ಕಾಯ್ದೆ ತಂದ ಹಿನ್ನೆಲೆಯಲ್ಲಿ ಈ ಗೊಂದಲ ಹಾಗೂ ರಾಜಕೀಯ ವಾಕ್ಸಮರ ತೀವ್ರಗೊಂಡಿದೆ.



