ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ನಿರಂತರ ಭಗವನ್ನಾಮ ಸ್ಮರಣೆ ಮತ್ತು ಭಗವಂತನಲ್ಲಿ ಶರಣಾಗತಿಯ ಮೂಲಕ ಮೃತ್ಯುವನ್ನು ಜಯಿಸಬಹುದು ಎಂದು ಚಳ್ಳಕೆರೆಯ ತ್ಯಾಗರಾಜನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಸದಸ್ಯೆ ಹಾಗೂ ಶಿಕ್ಷಕಿ ತಿಪ್ಪಮ್ಮ ಉಮಾಶಂಕರ್ ಅಭಿಪ್ರಾಯಪಟ್ಟರು.
ನಗರದ ತ್ಯಾಗರಾಜನಗರದ ಸದ್ಭಕ್ತರಾದ ನಂಜಮ್ಮ ಕೆಂಚಪ್ಪ ಶಿಕ್ಷಕರ ಸವಿತಾ ನಿವಾಸದಲ್ಲಿ ಆಯೋಜಿಸಿದ್ದ ವಾರದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಅವರು "ಮೃತ್ಯುವನ್ನು ಜಯಿಸುವುದು ಹೇಗೆ ?" ಎಂಬ ವಿಷಯವಾಗಿ ವಿಶೇಷ ಉಪನ್ಯಾಸ ನೀಡುತ್ತಾ ಮಾತನಾಡಿದರು.
ಭಕ್ತ ಮಾರ್ಕಂಡೇಯ ಭಗವಂತನಲ್ಲಿ ಶರಣಾಗತಿಯ ಮೂಲಕ ಮೃತ್ಯುಂಜಯನಾದ. ಸದಾ ಭಗವನ್ನಾಮ ಸಂಕೀರ್ತನೆ ಮತ್ತು ಸ್ಮರಣೆ, ಸತ್ಕರ್ಮಗಳಿಂದ ಮನುಷ್ಯ ಮೃತ್ಯವನ್ನು ಜಯಿಸಿ ಉತ್ತಮವಾದ ಸದ್ಗತಿ ಪಡೆಯಬಹುದು.
ಶ್ರೀರಾಮಕೃಷ್ಣರು ತಮ್ಮ ಭಜನೆಯ ಗಾಯನದ ಮೂಲಕ ತನ್ನ ಮಗ ಅಕ್ಷಯನ ಸಾವಿನ ನೋವಿನಲ್ಲಿದ್ದ ಮಣಿಮಲ್ಲಿಕನಿಗೆ ಸಾಂತ್ವನ ಹೇಳಿ ಪರಿಹರಿಸುತ್ತಾರೆ ಎಂದು ಭಜನೆಯಿಂದ ಸಾವನ್ನೂ ಗೆಲ್ಲಬಹುದೆಂದು ಅವರು ತಿಳಿಸಿದರು.
ಸತ್ಸಂಗದ ಪ್ರಯುಕ್ತ ಸತ್ಸಂಗ ಕೇಂದ್ರದ ಸದ್ಭಕ್ತರಿಂದ ಸಾಮೂಹಿಕ ಶ್ರೀರಾಮರಕ್ಷಾ ಸ್ತೋತ್ರ ಪಠಣ, ಶ್ರೀರಾಮಕೃಷ್ಣರ ನಾಮಸ್ಮರಣೆ, ಸುನೀತಾ ಗೋಪಾಲಕೃಷ್ಣ,ಮಾಕಂಸ್ ಲಕ್ಷ್ಮೀ ಬಾಲಾಜೀ, ನೇತ್ರಾ ಮಂಜುನಾಥ, ಪ್ರಮೀಳಾ ಜಗದೀಶ್, ಪ್ರೇಮಾ ಅವರಿಂದ ವಿಶೇಷ ಭಜನೆ, ಯತೀಶ್ ಎಂ ಸಿದ್ದಾಪುರ ಅವರಿಂದ "ಶ್ರೀಶಾರದಾದೇವಿ ಜೀವನಗಂಗಾ" ಗ್ರಂಥ ಪಾರಾಯಣ, ಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ನಡೆಯಿತು.
ವಿಶೇಷ ಸತ್ಸಂಗದಲ್ಲಿ ಶ್ರೀಮತಿ ಎಚ್ ಲಕ್ಷ್ಮೀದೇವಮ್ಮ, ನಂಜಮ್ಮ, ಸೋಮಗುದ್ದು ಸಿದ್ಧಮ್ಮ, ಸುವರ್ಣಮ್ಮ, ಎಂ ಲಕ್ಷ್ಮೀದೇವಮ್ಮ, ಸರಸ್ವತಿ, ವಿಜಯಲಕ್ಷ್ಮೀ, ಗೀತಾ ಸುಂದರೇಶ್ ದೀಕ್ಷಿತ್, ಅನುಸೂಯ, ರಾಘವೇಂದ್ರ ಪಾಲ್ಗೊಂಡಿದ್ದರು.



