ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ರಾಜ್ಯ ಸರ್ಕಾರ ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳ ಹೆಸರಲ್ಲಿ ಬಡ ರೈತ-ಕಾರ್ಮಿಕರ, ಕೂಲಿಕಾರರ ಮಕ್ಕಳಿಂದ ಶಿಕ್ಷಣವು ದೂರ ಸರಿಯುವಂತೆ ಮಾಡುತ್ತಿದೆ ಎಂದು ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ ರಾಜ್ಯ ಸಂಘಟಕರಾದ ತುಳಸಿ ಆರೋಪಿಸಿದ್ದಾರೆ.
ದೊಡ್ಡಬಳ್ಳಾಪುರ ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮ್ಯಾಗ್ನೆಟ್ ಯೋಜನೆ ಕೈಬಿಡುವಂತೆ ಒತ್ತಾಯಿಸಿ ಪೋಷಕರು ಹಾಗೂ ಸಾರ್ವಜನಿಕರು ನೀಡಿದ ಮನವಿ ಪತ್ರ ಸಲ್ಲಿಸಿದ ಸಂದರ್ಭದಲ್ಲಿ ಅವರು ಮಾತನಾಡಿ ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳ ಜೊತೆಗೆ ಇದೀಗ ಪಿ.ಎಂ.ಶ್ರೀ ಶಾಲೆಗಳಿಗೆ ಕೂಡ ಸುತ್ತಲಿನ ಶಾಲೆಗಳನ್ನು ವಿಲೀನಗೊಳಿಸುವ ಪ್ರಕ್ರಿಯೆ ಆರಂಭಿಸಲಾಗಿದೆ. ಸರ್ಕಾರ ಪಿ.ಎಮ್. ಶ್ರೀ ಯೋಜನೆಯ ಹೆಸರಿನಲ್ಲಿ ರಾಜ್ಯದಾದ್ಯಂತ 317 ಶಾಲೆಗಳನ್ನು ವಿಲೀನ ಮಾಡಿಸಲು ಆದೇಶ ಹೊರಡಿಸಿದೆ. ಪಿಯು ಕಾಲೇಜುಗಳನ್ನು ಕೂಡ ವಿಲೀನಗೊಳಿಸುವ ಮೂಲಕಸರ್ಕಾರಿ ಶಾಲಾ ಕಾಲೇಜುಗಳನ್ನು ಮುಚ್ಚುವ ಪ್ರಯತ್ನ ಮಾಡುತ್ತಿದೆ ಎಂದರು.
ರಾಜ್ಯ ಸರ್ಕಾರ ಶಿಕ್ಷಣಕ್ಕೆ 8 ಗ್ಯಾರಂಟಿಗಳನ್ನು ನೀಡಿ ದೇಶದಲ್ಲೇ ಮಾದರಿ ಶಾಲಾ ವ್ಯವಸ್ಥೆ ನಿರ್ಮಿಸುತ್ತೇವೆ ಎಂದು ಹೇಳುತ್ತಿದೆ. ಆದರೆ ವಾಸ್ತವದಲ್ಲಿ ಈ ಗ್ಯಾರಂಟಿಗಳು ಮೋಸದಿಂದ ಕೂಡಿವೆ. ಸರ್ಕಾರಿ ಶಾಲೆಗಳನ್ನು ಮುಚ್ಚುವ ಅಂಶವನ್ನು ನಯವಾಗಿ ತಳ್ಳಿ ಹಾಕುತ್ತಾ ಗ್ಯಾರಂಟಿಗಳ ಮುಖವಾಡದಲ್ಲಿ ನಾಡಿನ ಜನತೆಗೆ ರಾಜ್ಯ ಕಾಂಗ್ರೇಸ್ ಸರ್ಕಾರವು ಮೋಸ ಮಾಡುತ್ತಿದೆ ಎಂದರು
ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯ ಸದಸ್ಯರು ಹಾಗೂ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯ ರಾಜ್ಯ ಸೆಕ್ರೇಟರಿಯೇಟ್ ಸದಸ್ಯೆ ಎಚ್ ಎಲ್ ನಿರ್ಮಲ ಮಾತನಾಡಿ, ಶಿಕ್ಷಣ ಹಕ್ಕು ಕಾಯ್ದೆ ಅಡಿ ಪ್ರತಿ ಮಗುವಿಗೆ ಒಂದು ಕಿ.ಮೀ ದೂರದಲ್ಲಿ ಪ್ರಾಥಮಿಕ ಶಾಲೆ ಹಾಗೂ 3ಕಿ.ಮೀ ದೂರದಲ್ಲಿ ಪ್ರೌಢಶಾಲೆ ಲಭ್ಯವಿರಬೇಕು. ಆದರೆ ಕೆಪಿಎಸ್ ಯೋಜನೆ ಈ ನಿಯಮವನ್ನು ಗಾಳಿಗೆ ತೂರಿ ಗ್ರಾಮ ಪಂಚಾಯಿತಿ ಅಡಿಯಲ್ಲಿ ಹಳ್ಳಿಗಳಲ್ಲಿರುವ ಶಾಲೆಗಳನ್ನು ಮುಚ್ಚಿ, ಪಂಚಾಯಿತಿಗೆ ಒಂದೇ ಶಾಲೆ ಎಂಬ ಹೊಸ ನಿಯಮವನ್ನು ಜಾರಿಗೊಳಿಸುವುದಾಗಿ ಆದೇಶ ಹೊರಡಿಸಿದೆ.
ಇದು ಬಡಜನರ ವಿರೋಧಿ ನೀತಿಯಾಗಿದೆ.ಶಿಕ್ಷಣ ಖಾಸಗೀಕರಣದ ಪೂರಕವಾಗಿರುವ ಈ ಯೋಜನೆಯನ್ನು ಈಕೊಡಲೇ ಸರ್ಕಾರ ಕೈಬಿಡಬೇಕು. ಮಹಿಳೆಯರ ಮತ್ತು ಮಕ್ಕಳ ಮೇಲಿನ ದೌರ್ಜನ್ಯಗಳು ದಿನ ದಿನಕ್ಕೂ ಹೆಚ್ಚುತ್ತಿದ್ದು, ಹೆಣ್ಣು ಮಕ್ಕಳನ್ನು ಶಿಕ್ಷಣಕ್ಕಾಗಿ ದೂರದ ಊರುಗಳಿಗೆ ಫೋಷಕರು ಭ ಯಪಟ್ಟು ಶಿಕ್ಷಣಕ್ಕೆ ಕಳುಹಿಸಲಾರರು. ಇದರಿಂದ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಬಹು ದೊಡ್ಡ ಹೊಡೆತ ಬೀಳಲಿದೆ. ಇದು ಕೇವಲ ಬಡ ಮಕ್ಕಳ ವಿರೋಧಿ ಮಾತ್ರವಲ್ಲ ಹೆಣ್ಣು ಮಕ್ಕಳ ಹಾಗೂ ಮಹಿಳಾವಿರೋಧಿ ನೀತಿಯಾಗಿದೆ" ಎಂದರು.
ಸಾರ್ವಜನಿಕ ಹೋರಾಟದ ಸಮಿತಿಯ ಸದಸ್ಯೆ ಟಿ.ಸಿ.ರಮಾ ಮಾತನಾಡಿ, ಕೆಪಿಎಸ್ ಯೂಜನೆಯನ್ನು ಈ ಕೂಡಲೆ ರದ್ದುಗೊಳಿಸಬೇಕು. ರಾಜ್ಯ ಸರ್ಕಾರವು ತನ್ನ ಹಠಮಾರಿ ಧೋರಣೆಯನ್ನು ಕೈಬಿಟ್ಟು ನಮ್ಮೂರ ಶಾಲೆಗಳನ್ನು ಇರುವಲ್ಲೇ ಉಳಿಸಬೇಕು, ಬೆಳೆಸಬೇಕು ಎಂದರು.
ಸರ್ಕಾರಿ ಶಾಲೆಗಳನ್ನು ಉಳಿಸಬೇಕೆಂದು ಒತ್ತಾಯಿಸಿ ಎಸ್.ಡಿ.ಎಂ.ಸಿ ಸದಸ್ಯರು , ಕನ್ನಡ ಪರ ಸಂಘಟನೆಗಳ ಮುಖಂಡರು ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎಸ್. ಶಂಕರಯ್ಯ ಅವರಿಗೆ ಮನವಿ ಸಲ್ಲಿಸಿದರು. ಮನವಿ ಸಲ್ಲಿಸುವ ಸಂದರ್ಭದಲ್ಲಿ ಕನ್ನಡಪರ ಸಂಘಟನೆಗಳ ಮುಖಂಡರುಗಳಾದ ಪರಮೇಶ್, ಚೌಡರಾಜ್, ಸಾರ್ವಜನಿಕ ಹೋರಾಟದ ಸಮಿತಿಯ ಸದಸ್ಯರುಗಳಾದ , ಐಶ್ವರ್ಯ, ಸಿಂದು, ಬಾಬ, ಕಿರಣ್, ಎಐಡಿಎಸ್ ಜಿಲ್ಲಾ ಕಾರ್ಯದರ್ಶಿ ವಿ.ಕಲ್ಯಾಣಕುಮಾರ್ ಮುಂತಾದವರು ಭಾಗವಹಿಸಿದ್ದರು.


