ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಭಾರತೀಯ ಚುನಾವಣಾ ಆಯೋಗದ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಯೋಜನೆಯಡಿ ಮತದಾರರ ಪಟ್ಟಿಯ ನವೀಕರಣ ಕಾರ್ಯಕ್ಕೆ ತೂಬಗೆರೆಯಲ್ಲಿ ಮಂಗಳವಾರ ಚಾಲನೆ ದೊರೆಯಿತು. ಇದರ ಅಂಗವಾಗಿ ಮನೆ?ಮನೆಗೆ ತೆರಳಿ ಎನ್ಯೂಮರೇಶನ್ ಫಾರ್ಮ್ ವಿತರಿಸುವ ಕಾರ್ಯ ಆರಂಭಿಸಲಾಯಿತು.
ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ತೂಬಗೆರೆ ಗ್ರಾಮದ ವಾರ್ಡ್ ಸಂಖ್ಯೆ?೩೦ ರಲ್ಲಿ ಬೂತ್ ಮಟ್ಟದ ಅಧಿಕಾರಿ (ಬಿಎಲ್ಒ) ರಾಧಮ್ಮ ಅವರು ಬೆಳಗ್ಗಿನಿಂದಲೇ ಮನೆಗಳಿಗೆ ಭೇಟಿ ನೀಡಿ ಮತದಾರರಿಗೆ ಎನುಮರೇಶನ್ ಫಾರ್ಮ್ಗಳನ್ನು ವಿತರಿಸಿದರು.
ಮತದಾರರ ಪಟ್ಟಿಯನ್ನು ದೋಷರಹಿತ ಹಾಗೂ ನಿಖರಗೊಳಿಸುವ ಉದ್ದೇಶದಿಂದ ವಿಶೇಷ ಪರಿಷ್ಕರಣೆ ಕೈಗೊಳ್ಳಲಾಗಿದ್ದು, ಸಾರ್ವಜನಿಕರು ಪ್ರಕ್ರಿಯೆಗೆ ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.
ಈ ಹಂತದಲ್ಲಿ ಸಾರ್ವಜನಿಕರು ಯಾವುದೇ ಗುರುತಿನ ಚೀಟಿ ಅಥವಾ ಇತರೆ ದಾಖಲೆಗಳನ್ನು ಸಲ್ಲಿಸುವ ಅಗತ್ಯವಿಲ್ಲ. ಬಿಎಲ್ಒಗಳು ಕೇವಲ ಫಾರ್ಮ್ಗಳನ್ನು ವಿತರಿಸಲಿದ್ದು, ನಂತರ ಭರ್ತಿ ಮಾಡಿದ ಅರ್ಜಿಗಳನ್ನು ಸಂಗ್ರಹಿಸಲಿದ್ದಾರೆ ಎಂದು ತಿಳಿಸಿದರು.
ಕ್ರಾಸ್ ಪರಿಶೀಲನೆ ಹಾಗೂ ದಾಖಲಾತಿ ಅನುಕೂಲಕ್ಕಾಗಿ ಪ್ರತಿ ಮತದಾರರಿಗೂ ಎರಡು ಪ್ರತಿಗಳ ಎನುಮರೇಶನ್ ಫಾರ್ಮ್ ನೀಡಲಾಗುತ್ತಿದ್ದು, ಒಂದು ಪ್ರತಿಯನ್ನು ಭರ್ತಿ ಮಾಡಿ ಬಿಎಲ್ಒಗೆ ಸಲ್ಲಿಸಬೇಕು ಹಾಗೂ ಮತ್ತೊಂದು ಪ್ರತಿಯನ್ನು ತಮ್ಮ ಬಳಿಯೇ ಇಟ್ಟುಕೊಳ್ಳಬಹುದು ಎಂದು ಮಾಹಿತಿ ನೀಡಿದರು.



