ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಭಾಗವಾಗಿ, ಮಾಹಿತಿ ಕೊರತೆ ಹಾಗೂ ತಾಂತ್ರಿಕ ದೋಷವಿರುವ ಸುಮಾರು 43.80 ಲಕ್ಷ ಮತದಾರರಿಗೆ ಭಾರತೀಯ ಚುನಾವಣಾ ಆಯೋಗದಿಂದ (ECI) ಶೀಘ್ರದಲ್ಲೇ ಅಧಿಕೃತ ನೋಟಿಸ್ ಜಾರಿಯಾಗಲಿದೆ.ಇದು ಕೇವಲ ಮಾಹಿತಿ ದೃಢೀಕರಣಕ್ಕಾಗಿ ನೀಡಲಾಗುತ್ತಿರುವ ನೋಟಿಸ್ ಆಗಿದ್ದು, ಯಾವುದೇ ಕಾರಣಕ್ಕೂ ತಕ್ಷಣಕ್ಕೆ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕುವುದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಪರಿಶೀಲನಾ ಪ್ರಕ್ರಿಯೆ ಹಾಗೂ ತಕರಾರು ವಿಲೇವಾರಿ ಕಾರ್ಯಗಳು ನಿಗದಿತ ಅವಧಿಯಲ್ಲಿ ನಡೆಯಲಿವೆ.
ಯಾರಿಗೆ ಬರಲಿದೆ ನೋಟಿಸ್? ರಾಜ್ಯದ ಒಟ್ಟು 5.54 ಕೋಟಿ ಮತದಾರರಲ್ಲಿ ಸುಮಾರು ಶೇ. 9.81 ರಷ್ಟು ಜನರಿಗೆ ಈ ಕೆಳಗಿನ ಎರಡು ಪ್ರಮುಖ ಕಾರಣಗಳಿಗಾಗಿ ನೋಟಿಸ್ ತಲುಪಲಿದೆ:ಮ್ಯಾಪಿಂಗ್ ಆಗದ ಮತದಾರರು (23.45 ಲಕ್ಷ): 2002ರ ಚುನಾವಣಾ ಪಟ್ಟಿಯೊಂದಿಗೆ ತಮ್ಮ ಅಥವಾ ತಮ್ಮ ಪೋಷಕರ ವಿವರಗಳು ತಾಳೆಯಾಗದವರು.ಮಾಹಿತಿ ದೋಷವಿರುವವರು (20.35 ಲಕ್ಷ): ಹೆಸರು, ವಯಸ್ಸು, ತಂದೆಯ ಹೆಸರು ಅಥವಾ ಕಾಗುಣಿತ ದೋಷ ಸೇರಿದಂತೆ ತಾಂತ್ರಿಕ ವ್ಯತ್ಯಾಸಗಳಿರುವ ಮತದಾರರು.
ಬೆಂಗಳೂರಿನಲ್ಲೇ ಗರಿಷ್ಠ ನೋಟಿಸ್ಒಟ್ಟು ನೋಟಿಸ್ಗಳ ಪೈಕಿ ಅರ್ಧಕ್ಕಿಂತ ಹೆಚ್ಚು ಅಂದರೆ 24 ಲಕ್ಷಕ್ಕೂ ಅಧಿಕ ನೋಟಿಸ್ಗಳು ಬೆಂಗಳೂರು ನಗರ ಒಂದರಲ್ಲೇ (ಬಿಬಿಎಂಪಿ ಉತ್ತರ, ದಕ್ಷಿಣ, ಮಧ್ಯ ವಲಯ ಹಾಗೂ ಬೆಂಗಳೂರು ನಗರ ಜಿಲ್ಲೆ) ಜಾರಿಯಾಗಲಿವೆ.ನೋಟಿಸ್ ದೊರೆತ ನಂತರ ಮಾಡಬೇಕಾದ ಹಂತಗಳು:ಬಿಎಲ್ಒ ಭೇಟಿ: ಬೂತ್ ಮಟ್ಟದ ಅಧಿಕಾರಿಗಳು (BLO) ಖುದ್ದಾಗಿ ಮನೆಗೆ ಬಂದು ನೋಟಿಸ್ ನೀಡಲಿದ್ದಾರೆ.
ಆನ್ಲೈನ್ ಸಲ್ಲಿಕೆ: ನೋಟಿಸ್ನಲ್ಲಿರುವ QR ಕೋಡ್ ಸ್ಕ್ಯಾನ್ ಮಾಡಿ ಅಗತ್ಯ ದಾಖಲೆಗಳನ್ನು ಆನ್ಲೈನ್ನಲ್ಲೇ ಅಪ್ಲೋಡ್ ಮಾಡಬಹುದು.ಹಾಜರಾತಿ ಮತ್ತು ದಾಖಲೆ: ನೋಟಿಸ್ನಲ್ಲಿ ತಿಳಿಸಲಾದ ದಿನಾಂಕದಂದು ನಿಗದಿತ ಕೇಂದ್ರಕ್ಕೆ ಹಾಜರಾಗಿ ಗುರುತು ಹಾಗೂ ವಿಳಾಸದ ದೃಢೀಕರಣಕ್ಕಾಗಿ ಆಧಾರ್ ಹೊರತುಪಡಿಸಿ ಇತರ ಎರಡು ಸರ್ಕಾರಿ ದಾಖಲೆಗಳನ್ನು ಒದಗಿಸಬೇಕಾಗುತ್ತದೆ.ಒಮ್ಮೆ ಗೈರುಹಾಜರಾದರೆ ಮತ್ತೊಂದು ಅವಕಾಶ ನೀಡಲಾಗುತ್ತದೆ. ಆದರೆ ಎರಡನೇ ಬಾರಿಯೂ ಸೂಕ್ತ ದಾಖಲೆಗಳೊಂದಿಗೆ ಹಾಜರಾಗದಿದ್ದರೆ ಅಂತಹವರ ಹೆಸರುಗಳನ್ನು ಅಂತಿಮ ಮತದಾರರ ಪಟ್ಟಿಯಿಂದ ಕೈಬಿಡಲಾಗುವುದು.



