ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ವಿಕಾಸಶೀಲ ಹಾಗೂ ಸೌಹಾರ್ದಶೀಲ ಕರ್ನಾಟಕ ನಿರ್ಮಾಣಕ್ಕಾಗಿ ಯುವಜನರಲ್ಲಿ ನಾಯಕತ್ವ ಗುಣ ಮತ್ತು ಆರೋಗ್ಯಕರ ಜೀವನಶೈಲಿ ಉತ್ತೇಜಿಸಲು ‘ಭಾರತ್ ಜೋಡೋ' ಯುವ ಸಂಘಗಳ ಸ್ಥಾಪನೆಗಾಗಿ ಸದಸ್ಯತ್ವ ನೋಂದಣಿ ಅಭಿಯಾನ ಆರಂಭವಾಗಿದೆ.
ಜಿಲ್ಲೆಯ 189 ಗ್ರಾಮ ಪಂಚಾಯಿತಿಗಳಲ್ಲಿ ತಲಾ ಒಂದರಂತೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಒಟ್ಟು 46 ಸಂಘಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದೆ.
16 ರಿಂದ 35 ವರ್ಷದೊಳಗಿನ ಯುವಜನರು BJYS ಫೋರ್ಟಲ್ ಅಥವಾ ಮೊಬೈಲ್ ಆಪ್ ಮೂಲಕ ಆಧಾರ್ ಆಧಾರಿತವಾಗಿ ನೋಂದಾಯಿಸಿಕೊಳ್ಳಬಹುದು. ನೋಂದಣಿಗೆ ರೂ.10 ಶುಲ್ಕ ನಿಗದಿಪಡಿಸಲಾಗಿದ್ದು, ಪ್ರತಿಯೊಬ್ಬ ವ್ಯಕ್ತಿಯು ಒಂದು BJYS ಸಂಘಕ್ಕೆ ಮಾತ್ರ ಸೇರಲು ಅವಕಾಶವಿರುತ್ತದೆ.
ಪ್ರತಿಯೊಂದು ಯುವ ಸಂಘದ ರಚನೆಗೆ ಕನಿಷ್ಠ 100 ಜನರ ಸದಸ್ಯತ್ವ ಕಡ್ಡಾಯವಾಗಿದ್ದು, 15 ಸದಸ್ಯರ ಕಾರ್ಯಕಾರಿ ಸಮಿತಿಯನ್ನು ಹೊಂದಿರಬೇಕಾಗಿದ್ದು, ಎಲ್ಲಾ ಸಮುದಾಯದ ಯುವ ಪ್ರತಿನಿಧಿಗಳು ಈ ಕಾರ್ಯಕಾರಿ ಸಮಿತಿಯಲ್ಲಿ ಇರಲಿದ್ದಾರೆ. ಈ ಮೂಲಕ ವಿವಿಧ ಜಾತಿ, ಧರ್ಮ, ವರ್ಗ, ಭಾಷೆ, ಜನಾಂಗ ಮತ್ತು ಸಮುದಾಯಗಳು ಒಗ್ಗಟ್ಟಾಗಿ ಸೌಹಾರ್ದಶೀಲ ಮತ್ತು ವಿಕಾಸಶೀಲ ಕರ್ನಾಟಕವನ್ನು ನಿರ್ಮಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಈ ಯೋಜನೆಯ ಅನುಷ್ಠಾನಕ್ಕಾಗಿ ಸರ್ಕಾರದಿಂದ ಬಂಡವಾಳ ಅನುದಾನ ಲಭಿಸಲಿದೆ.
ಈ ಯುವ ಸಂಘಗಳು ಕ್ರೀಡೆ, ಫಿಟ್ನೆಸ್, ಕೆರೆ ಹಾಗೂ ಕಲ್ಯಾಣಿ ಸ್ವಚ್ಛತೆ, ಅರಣ್ಯ ಮತ್ತು ಪರಿಸರ ಸಂರಕ್ಷಣೆ, ಆರೋಗ್ಯ, ಸಂಸ್ಕೃತಿ, ಸಾಮಾಜಿಕ ಸಾಮರಸ್ಯ ಮತ್ತು ಯುವ ಸಬಲೀಕರಣಕ್ಕೆ ಸಂಬಂಧಿಸಿದ ಹಲವು ಜಾಗೃತಿ ಅಭಿಯಾನಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲಿವೆ.
ಸಂಘಗಳ ಸದಸ್ಯತ್ವಕ್ಕೆ bjys.karnataka.gov.in ವೆಬ್ಸೈಟ್ ಮೂಲಕ ಆನ್ಲೈನ್ನಲ್ಲಿ ನೋಂದಣಿ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ, ಚಿತ್ರದುರ್ಗ ಹಾಗೂ ಆಯಾ ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ, ಪುರಸಭೆ ಹಾಗೂ ನಗರಸಭೆ ಕಚೇರಿಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.



