ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಹಿಂದೂ ಧರ್ಮದಲ್ಲಿ ಸಂಪತ್ತು, ಸಮೃದ್ಧಿ, ಸೌಂದರ್ಯ ಮತ್ತು ಅದೃಷ್ಟ ದೇವತೆಯಾಗಿರುವ ಮಹಾಲಕ್ಷ್ಮಿ ಭಕ್ತಿಬಾವದಿಂದ ಪೂಜಿಸುತ್ತಾರೆ.
ಅದರೆ ಐಶ್ವರ್ಯ ದೇವತೆ ಲಕ್ಷ್ಮೀ ಬಗ್ಗೆ ಕೀಳು ಮಟ್ಟದ ಮತ್ತು ಅಶ್ಲೀಲ ಹೇಳಿಕೆ ನೀಡಿರುವ ಆರ್ಯವರ್ಧನ್ ಗುರೂಜಿ ಎಂಬುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಶ್ರೀ ರಾಮಸೇನೆ ಕರ್ನಾಟಕ ರಾಜ್ಯದ ಧರ್ಮ ಪ್ರಚಾರಕ ಶ್ರೀನಿವಾಸ ಗುರೂಜಿ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಅವರು ಮಾತನಾಡಿ ಇತ್ತೀಚೆಗೆ ಸಾಮಾಜಿಕ ಜಾಲತಾಣ ಮಾಧ್ಯಮಗಳಲ್ಲಿ ಕನ್ನಡ ಅಪಡೇಟ್ಸ್ ಸೇರಿದಂತೆ ವಿವಿಧ ಪೇಜ್ಗಳಲ್ಲಿ ಆರ್ಯವರ್ಧನ್ ಗುರೂಜಿ ಅವರ ವಿಡಿಯೋವೊಂದು ತೀವ್ರ ವಿವಾದ ಸೃಷ್ಟಿಸಿದೆ.
ಈ ವಿಡಿಯೋದಲ್ಲಿ ಗುರೂಜಿ ಅವರು ಹಿಂದೂಗಳ ಆರಾಧ್ಯ ದೇವತೆಯಾದ ಲಕ್ಷ್ಮೀ ದೇವಿಯ ಸ್ವಸ್ಥಾನದ ಬಗ್ಗೆ ಅಸಭ್ಯ, ಆಕ್ಷೇಪಾರ್ಹ ಮತ್ತು ಅಶ್ಲೀಲವಾಗಿ ಮಾತನಾಡಿದ್ದಾರೆ. ನಮ್ಮ ಪವಿತ್ರ ಧರ್ಮ ಶಾಸ್ತ್ರಗಳಲ್ಲಾಗಲಿ, ವೇಧ ಉಪನಿಷತ್ತುಗಳಲ್ಲಾಗಲಿ ಅಥವಾ ಯಾವುದೇ ಪುರಾಣ ಗಳಲ್ಲಾಗಲಿ ಇಂತಹ ಅಶ್ಲೀಲ ಮತ್ತು ಕೀಳುಮಟ್ಟದ ಉಲ್ಲೇಖಗಳು ಎಲ್ಲಿಯೂ ಇಲ್ಲ. ಕೇವಲ ಪ್ರಚಾರಕ್ಕಾಗಿ ಮತ್ತು ಸಾರ್ವ ಜನಿಕರನ್ನು ದಾರಿ ತಪ್ಪಿಸಲು ಇಂತಹ ಹೇಳಿಕೆ ನೀಡಲಾಗುತ್ತಿದೆ. ಇವರ ಈ ಹೇಳಿಕೆಯು ಕೋಟ್ಯಂತರ ಹಿಂದೂ ಧರ್ಮೀಯರ ಹಾಗೂ
ದೈವಭಕ್ತರ ಧಾರ್ಮಿಕ ಭಾವನೆಗಳಿಗೆ ತೀವ್ರ ಧಕ್ಕೆಯುಂಟು ಮಾಡಿದೆ. ಮತ್ತು ಸಮಾಜದಲ್ಲಿ ಸೌಹಾರ್ದತೆಯನ್ನು ಕದಡುವ ಕೃತ್ಯವಾಗಿದೆ. ಆದ್ದರಿಂದ ಭಾರತೀಯ ನ್ಯಾಯ ಸಂಹಿತೆ ಅಡಿಯಲ್ಲಿ ಇದು ಶಿಕ್ಷಾರ್ಹ ಅಪರಾಧವಾಗಿದ್ದು, ಪೊಲೀಸರು ತಕ್ಷಣವೇ ಎಫ್ಐಆರ್ ದಾಖಲಿಸಿ ಆರ್ಯವರ್ಧನ್ ಗುರೂಜಿ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಮತ್ತು ಇಂತಹ ಅಸಭ್ಯ ಕಾರ್ಯಕ್ರಮಗಳ ಪ್ರಸಾರಕ್ಕೆ ತಡೆ ಒಡ್ಡಬೇಕು ಎಂದು ಒತ್ತಾಯಿಸಿ, ಉಪವಿಭಾಗದ ಡಿವೈಎಸ್ಪಿ ಹಾಗೂ ಆರಕ್ಷಕ ನಿರೀಕ್ಷಕರಿಗೆ ದೂರನ್ನು ಸಲ್ಲಿಸಲಾಗಿದೆ ಎಂದು ಹೇಳಿದ್ದಾರೆ.



