ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದಲ್ಲಿ 75 ವರ್ಷ ಮೇಲ್ಪಟ್ಟ ವಯೋವೃದ್ಧ ಬಿಪಿಎಲ್ಪಡಿತರದಾರರಿಗೆ ಬೆರಳಚ್ಚಿನ (ಬಯೋಮೆಟ್ರಿಕ್) ಸಮಸ್ಯೆಯಿಂದ ಮುಕ್ತಿ ನೀಡಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮಹತ್ವದ ಚಿಂತನೆ ನಡೆಸಿದೆ. ವಯಸ್ಸಾದವರು, ಅನಾರೋಗ್ಯದಿಂದ ಹಾಸಿಗೆ ಹಿಡಿದವರು ಹಾಗೂ ಕೈಬೆರಳುಗಳು ಸವೆದವರಿಗೆ ಅನುಕೂಲವಾಗುವಂತೆ ಕಣ್ಣಿನ ಚಹರೆ (ಐರಿಸ್) ಆಧಾರದಲ್ಲಿ ಪಡಿತರ ವಿತರಿಸಲು ನಿರ್ಧರಿಸಲಾಗಿದೆ.
ಅದೂ ಸಾಧ್ಯವಾಗದ ಅಶಕ್ತರಿಗೆ ಬೆರಳಚ್ಚಿನಿಂದ ವಿನಾಯಿತಿ ನೀಡಲು ಉದ್ದೇಶಿಸಲಾಗಿದ್ದು, ಪ್ರತಿ ನ್ಯಾಯಬೆಲೆ ಅಂಗಡಿಯಲ್ಲಿ ಶೇ. 2ರಷ್ಟು ಫಲಾನುಭವಿಗಳಿಗೆ ಈ ವಿನಾಯಿತಿ ನೀಡಲು ಪ್ರತ್ಯೇಕ ಪಟ್ಟಿ ತಯಾರಿಸಲಾಗುತ್ತಿದೆ.
ಇದರೊಂದಿಗೆ, 75 ವರ್ಷ ದಾಟಿದವರಿಗಾಗಿ ಜಾರಿಗೆ ತಂದಿರುವ ‘ಅನ್ನ ಸುವಿಧಾ’ ಯೋಜನೆಯನ್ನೂ ಮತ್ತಷ್ಟು ಸರಳೀಕರಣಗೊಳಿಸಲು ಇಲಾಖೆ ಮುಂದಾಗಿದೆ.
ಬೆರಳಚ್ಚು ಪಡೆಯಲು ವೃದ್ಧರ ಪರದಾಟ:
‘ಅನ್ನಭಾಗ್ಯ’ ಯೋಜನೆಯಡಿ ಬಿಪಿಎಲ್ಪಡಿತರದಾರರು ಉಚಿತವಾಗಿ ರೇಷನ್ ಪಡೆಯಲು ಪ್ರತಿ ತಿಂಗಳು ನ್ಯಾಯಬೆಲೆ ಅಂಗಡಿಗಳಲ್ಲಿ ಬೆರಳಚ್ಚು ನೀಡುವುದನ್ನು ಕಡ್ಡಾಯಗೊಳಿಸಲಾಗಿದೆ.
ಆದರೆ ಶ್ರಮದಾಯಕ ಕಟ್ಟಡ ನಿರ್ಮಾಣ, ಬೇಸಾಯ ಸೇರಿದಂತೆ ಇತರೆ ಕೆಲಸಗಳನ್ನು ಮಾಡುವುದರಿಂದ ಲಕ್ಷಾಂತರ ಮಂದಿಯ ಕೈಬೆರಳುಗಳು ಸವೆದಿರುತ್ತವೆ. ಅದರಲ್ಲೂ 60-70 ವರ್ಷ ದಾಟಿದವರ ಬೆರಳುಗಳ ರೇಖೆಗಳು ಅಸ್ಪಷ್ಟಗೊಂಡಿರುತ್ತವೆ. ಪರಿಣಾಮವಾಗಿ, ನ್ಯಾಯಬೆಲೆ ಅಂಗಡಿಗಳಲ್ಲಿ ಬೆರಳಚ್ಚು ಮ್ಯಾಚ್ಆಗದೆ ವೃದ್ಧರು ಪಡಿತರ ಪಡೆಯಲು ಹರಸಾಹಸ ಪಡುವಂತಾಗಿದೆ.
ಇದಲ್ಲದೆ, ಹಲವು ಪ್ರದೇಶಗಳಲ್ಲಿ ನೆಟ್ವರ್ಕ್ ಸಮಸ್ಯೆ ಇರುವುದರಿಂದಲೂ ವಿತರಕರು ಹಾಗೂ ಫಲಾನುಭವಿಗಳು ಸಂಕಷ್ಟಕ್ಕೀಡಾಗುತ್ತಿದ್ದಾರೆ. ಇತ್ತೀಚೆಗೆ ಎರಡು ತಿಂಗಳ ಪಡಿತರಿಯನ್ನು ಒಟ್ಟಿಗೆ ವಿತರಿಸುತ್ತಿರುವುದರಿಂದ ಎರಡೆರಡು ಬಾರಿ ಬೆರಳಚ್ಚು ಪಡೆಯಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದ್ದು, ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸಿದೆ. ಈ ಎಲ್ಲ ತೊಂದರೆಗಳನ್ನು ಮನಗಂಡು ಸರ್ಕಾರ ಈಗ ಕಣ್ಣಿನ ಚಹರೆ (ಐರಿಸ್) ತಂತ್ರಜ್ಞಾನದ ಮೊರೆ ಹೋಗಿದೆ.
‘ಅನ್ನ ಸುವಿಧಾ’ ಯೋಜನೆ ಸರಳೀಕರಣ:
ಅನ್ನಭಾಗ್ಯ ಯೋಜನೆಯಡಿ ಸಿಗುವ ಅಕ್ಕಿಯನ್ನು ಸ್ವತಃ ನ್ಯಾಯಬೆಲೆ ಅಂಗಡಿಗಳಿಗೆ ತೆರಳಿ ಪಡೆಯಲು ಅಶಕ್ತರಾದ ಹಿರಿಯ ನಾಗರಿಕರ ಮನೆ ಬಾಗಿಲಿಗೆ ಪಡಿತರ ತಲುಪಿಸಲು ರಾಜ್ಯ ಸರ್ಕಾರ ‘ಅನ್ನ ಸುವಿಧಾ’ ಯೋಜನೆ ಜಾರಿಗೊಳಿಸಿದೆ. ಇದರಡಿ ಒಬ್ಬಂಟಿಯಾಗಿರುವ 75 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಸಮೀಪದ ನ್ಯಾಯಬೆಲೆ ಅಂಗಡಿಯವರೇ ಪಡಿತರವನ್ನು ಮನೆಗೆ ತಲುಪಿಸುತ್ತಾರೆ. ಈ ಸೇವೆ ಒದಗಿಸುವ ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಸರ್ಕಾರ ಪ್ರತಿ ಕುಟುಂಬಕ್ಕೆ 50 ರೂ. ಪ್ರೋತ್ಸಾಹ ಧನ ನೀಡುತ್ತದೆ.
ಆದರೆ, ಈ ಯೋಜನೆಯ ಲಾಭ ಪಡೆಯಲು ಫಲಾನುಭವಿಗಳು ‘ಹೋಮ್ಡೆಲಿವರಿ ಆ್ಯಪ್’ ಡೌನ್ಲೋಡ್ಮಾಡಿಕೊಂಡು ನೋಂದಣಿ ಮಾಡಿಕೊಳ್ಳಬೇಕೆಂಬ ಕಠಿಣ ನಿಯಮವಿದ್ದುದು ಹಲವು ಹಿರಿಯ ನಾಗರಿಕರಿಗೆ ತೊಂದರೆಯುಂಟುಮಾಡಿತ್ತು. ಇದನ್ನು ಮನಗಂಡು, ತಾಂತ್ರಿಕ ಅಡಚಣೆಗಳನ್ನು ನಿವಾರಿಸಿ ಯೋಜನೆಯನ್ನು ಹೆಚ್ಚು ಸರಳ ಹಾಗೂ ಜನಸ್ನೇಹಿಯಾಗಿಸಲು ಇಲಾಖೆ ಕ್ರಮ ಕೈಗೊಳ್ಳುತ್ತಿದ್ದು, ನೇರವಾಗಿ ನ್ಯಾಯಬೆಲೆ ಅಂಗಡಿಗಳಲ್ಲೇ ಮಾಹಿತಿ ಪಡೆದು ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.




