ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಸತೀಶ್ ಜಾರಕಿಹೊಳೆಯವರು ಹುಟ್ಟುಹಾಕಿದ ‘ಮಾನವ ಬಂಧುತ್ವ ವೇದಿಕೆ’ಯು ಪ್ರಸ್ತುತ ದಿನಗಳಲ್ಲಿ 'ಆಧುನಿಕ ಅನುಭವ ಮಂಟಪ'ದ ಮಾದರಿಯಲ್ಲಿ ಕೆಲಸ ಮಾಡುತ್ತಿದೆ ಎಂದು ಆದಿ ಜಾಂಬವ ನಿಗಮದ ಅಧ್ಯಕ್ಷ ಜಿ.ಎಸ್ ಮಂಜುನಾಥ್ ಅಭಿಪ್ರಾಯಪಟ್ಟರು.
ನಗರದ ರೋಟರಿ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ತಾಲ್ಲೂಕು ಗ್ರಾಮ ಸಂಚಾಲಕರ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಮೂಢನಂಬಿಕೆಗಳ ವಿರುದ್ಧ ನಿರಂತರವಾಗಿ ಈ ವೇದಿಕೆ ಶ್ರಮಿಸುತ್ತಿದೆ. ಅಲ್ಲದೆ ಸಮಾಜದಲ್ಲಿ ವೈಜ್ಞಾನಿಕ ಚಿಂತನೆಗಳನ್ನು ಬಿತ್ತುವ ಮೂಲಕ ಜನಮನದಲ್ಲಿ ಗಟ್ಟಿಯಾಗಿ ಕೆಲಸ ಮಾಡುತ್ತಿದೆ ಎಂದು ಮಂಜುನಾಥ್ ಹೇಳಿದರು.
ಕೆಪಿಸಿಸಿ ಸದಸ್ಯ ಕಂದಿಕೆರೆ ಸುರೇಶ್ ಬಾಬು ಮಾತನಾಡಿ "ಮಾನವ ಬಂಧುತ್ವ ವೇದಿಕೆಯು ಕೇವಲ ಒಂದು ಸಂಘಟನೆಯಲ್ಲ, ಇದು ದಾರ್ಶನಿಕರ ಆದರ್ಶಗಳನ್ನು ಪಾಲಿಸುವ ಪವಿತ್ರ ವೇದಿಕೆಯಾಗಿದೆ. ಸಮಾಜದಲ್ಲಿ ಮನೆಮಾಡಿರುವ ಕಂದಾಚಾರ ಹಾಗೂ ಮೂಢನಂಬಿಕೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಮಹತ್ತರ ಕಾರ್ಯವನ್ನು ಈ ವೇದಿಕೆ ನಿರಂತರವಾಗಿ ನಿರ್ವಹಿಸುತ್ತಿದೆ" ಎಂದು ಹೇಳಿದರು.
ಕಸವನಹಳ್ಳಿ ರಮೇಶ್ ಮಾತನಾಡಿ "ಗೌತಮ ಬುದ್ಧ, ಜಗದ್ಗುರು ಬಸವಣ್ಣ ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ವೈಚಾರಿಕ ಸಂದೇಶಗಳನ್ನು ಸಾರುವ ಮೂಲಕ ಸಾರ್ವಜನಿಕರಲ್ಲಿ ಸೌಹಾರ್ದತೆ ಮತ್ತು ಜಾಗೃತಿ ಮೂಡಿಸುವ ಉದಾತ್ತ ಕೆಲಸವನ್ನು ಬಂಧುತ್ವ ವೇದಿಕೆ ಮಾಡುತ್ತಿದೆ" ಎಂದರು.
ಈ ಪ್ರಮುಖ ವಿಚಾರ ಸಂಕಿರಣದಲ್ಲಿ ಜಿಲ್ಲಾ ಹಾಗೂ ತಾಲ್ಲೂಕಿನ ಹಲವು ಮುಖಂಡರು ಭಾಗವಹಿಸಿದ್ದರು. ವೇದಿಕೆಯ ಜಿಲ್ಲಾ ಸಂಚಾಲಕ ಪಿ. ಬಸವರಾಜ, ವಕೀಲರು ಹಾಗೂ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಚಂದ್ರಣ್ಣ, ಮಾಜಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಡಾ.ಜೆ.ಆರ್ ಸುಜಾತ, ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಕೆ.ಸಿ. ಹೊರಕೇರಪ್ಪ, ಕೃಷ್ಣಮೂರ್ತಿ, ಕರ್ನಾಟಕ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಜಿ.ಎಲ್. ಮೂರ್ತಿ, ಕಲ್ಲಹಟ್ಟಿ ಹರೀಶ್, ತಾಲ್ಲೂಕು ಸಂಚಾಲಕ ಕೂನಿಕೆರೆ ಮಾರುತೇಶ್, ಬೈಲಮ್ಮ, ಅಂಬಿಕಾ, ಹನುಮಂತಪ್ಪ, ಮಾರುತಿ, ತಾಲ್ಲೂಕಿನ ಮೂಲೆ ಮೂಲೆಗಳಿಂದ ಬಂದಿದ್ದ ಗ್ರಾಮ ಸಂಚಾಲಕರು ಹಾಗೂ ಸಾರ್ವಜನಿಕರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.



