ಚಂದ್ರವಳ್ಳಿ ನ್ಯೂಸ್, ಹೊಸಪೇಟೆ:
ತುಂಗಭದ್ರಾ ಅಣೆಕಟ್ಟೆಗೆ ನೂತನ ಕ್ರೆಸ್ಟ್ಗೇಟ್ಗಳನ್ನು ಅಳವಡಿಸುವ ಕೆಲಸ ಶನಿವಾರ ಸಂಜೆ ಕೊನೆಗೊಂಡಿದ್ದು, ಈ ಮೂಲಕ ಈ ಬಾರಿಯ ಮುಂಗಾರು ಅವಧಿಯಲ್ಲಿ ಉತ್ತಮ ಮಳೆಯಾದರೆ ಅಣೆಕಟ್ಟೆ ಭರ್ತಿಯಾಗುವುದಕ್ಕೆ ಅವಕಾಶ ಲಭಿಸಿದೆ.
ಕ್ರೆಸ್ಟ್ಗೇಟ್ ತಜ್ಞ ಕನ್ಹಯ್ಯ ನಾಯ್ಡು ಅವರು ಇದೇ 14ರಂದು ಅಣೆಕಟ್ಟೆಗೆ ಭೇಟಿ ನೀಡಿ, ಗೇಟ್ಗಳ ವಿನ್ಯಾಸ, ನಿರ್ಮಾಣ ಕಾಮಗಾರಿಗೆ ತೃಪ್ತಿ ವ್ಯಕ್ತಪಡಿಸಿದ್ದರು. ಈ ತಿಂಗಳೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಭರವಸೆ ನೀಡಿದ್ದರು. ಅದರಂತೆ ಶನಿವಾರ ಸಂಜೆ ಕೊನೆಯ ಕ್ರೆಸ್ಟ್ಗೇಟ್ಗೆ ಸ್ಲಿಮ್ಪ್ಲೇಟ್ ಅಳವಡಿಸುವ ಕೆಲಸ ಕೊನೆಗೊಂಡಿತು.
‘ಪ್ರಮುಖ ಕೆಲಸ ಇದೀಗ ಕೊನೆಗೊಂಡಿದೆ. ವೆಲ್ಡಿಂಗ್, ಪೇಂಟಿಂಗ್ನಂತಹ ಕೆಲವು ಕೆಲಸಗಳು ಉಳಿದಿದ್ದು, ಮೇ 2ನೇ ವಾರ ಚೈನ್ಲಿಂಕ್ಗಳು ಸಹ ಬರಲಿವೆ. ಒಟ್ಟಾರೆ ಮೇ ಅಂತ್ಯದೊಳಗೆ ಅಣೆಕಟ್ಟೆ ಪೂರ್ಣ ಪ್ರಮಾಣದಲ್ಲಿ ನೀರು ಭರ್ತಿ ಮಾಡುವುದಕ್ಕೆ ಸಜ್ಜಾಗಲಿದೆ’ ಎಂದು ತುಂಗಭದ್ರಾ ಮಂಡಳಿಯ ಅಧಿಕಾರಿಯೊಬ್ಬರು ತಿಳಿಸಿದರು.
ಹಿನ್ನೆಲೆ: 2024ರ ಆಗಸ್ಟ್ 10ರಂದು ತುಂಗಭದ್ರಾ ಅಣೆಕಟ್ಟೆಯಲ್ಲಿ ಗರಿಷ್ಠ ಪ್ರಮಾಣದ ಅಂದರೆ 1,633 ಅಡಿ ಮಟ್ಟದಲ್ಲಿ (105.75 ಟಿಎಂಸಿ ಅಡಿ) ನೀರು ಸಂಗ್ರಹವಾಗಿತ್ತು. ಅದೇ ದಿನ ರಾತ್ರಿ 19ನೇ ಕ್ರೆಸ್ಟ್ಗೇಟ್ನೀರಲ್ಲಿ ಕೊಚ್ಚಿಕೊಂಡು ಹೋಗಿತ್ತು. ಕನ್ಹಯ್ಯ ನಾಯ್ಡು ಅವರನ್ನು ಕರೆಸಿಕೊಂಡು ಅವರ ಮಾರ್ಗದರ್ಶನದಲ್ಲಿ ಒಂದೇ ವಾರದಲ್ಲಿ ಸ್ಟಾಪ್ಲಾಗ್ ಗೇಟ್ ಅಳವಡಿಸಿ ನೀರು ಪೋಲಾಗುವುದನ್ನು ತಡೆಹಿಡಿಯಲಾಗಿತ್ತು. ಮತ್ತೆ ಮಳೆ ಸುರಿದ ಕಾರಣ ಜಲಾಶಯ ಭರ್ತಿಯಾಗಿ ಎರಡನೇ ಬೆಳೆಗೂ ಆ ವರ್ಷ ನೀರು ಸಿಕ್ಕಿತ್ತು.
73 ವರ್ಷ ಹಳೆಯದಾದ ಅಣೆಕಟ್ಟೆಯ ಇತರ ಕ್ರೆಸ್ಟ್ಗೇಟ್ಗಳನ್ನು ಬದಲಿಸಬೇಕು, ಇಲ್ಲದಿದ್ದರೆ ಅಪಾಯ ನಿಶ್ಚಿತ ಎಂಬ ತಜ್ಞರ ವರದಿಯ ಹಿನ್ನೆಲೆಯಲ್ಲಿ ಎಲ್ಲಾ ಗೇಟ್ಗಳನ್ನು ಬದಲಿಸುವ ಯೋಜನೆ ರೂಪಿಸಲಾಯಿತು. ಆದರೆ 2025ರಲ್ಲಿ ಗೇಟ್ಅಳವಡಿಕೆ ಸಾಧ್ಯವಾಗದ ಕಾರಣ ಮಳೆಗಾಲದಲ್ಲಿ ಗರಿಷ್ಠ 80 ಟಿಎಂಸಿ ಅಡಿಯಷ್ಟು ಮಾತ್ರ ನೀರು ಸಂಗ್ರಹಿಸಿ ಉಳಿದ ನೀರನ್ನು ನದಿಗೆ ಹರಿಸಲಾಗಿತ್ತು. ಹೀಗಾಗಿ ಕಳೆದ ಬಾರಿ ರೈತರಿಗೆ ಒಂದು ಬೆಳೆಗೆ ಮಾತ್ರ ನೀರು ಸಿಕ್ಕಿತ್ತು. 2025ರ ಡಿಸೆಂಬರ್ 5ರಂದು ಹೊಸ ಗೇಟ್ ಅಳವಡಿಕೆಗೆ ಪೂಜೆ ನೆರವೇರಿಸಲಾಗಿತ್ತು ಹಾಗೂ ಡಿಸೆಂಬರ್ 24ರಿಂದ ಕಾಮಗಾರಿ ಆರಂಭವಾಗಿತ್ತು.
ಕೊನೆಯ ದಿನದ ಕಾಮಗಾರಿ ವೇಳೆ ಸ್ಥಳದಲ್ಲಿ ಕಾರ್ಯದರ್ಶಿ ರೆಡ್ಡಿ ಅವರಲ್ಲದೆ, ಅಧೀಕ್ಷಕ ಎಂಜಿನಿಯರ್ ಎಸ್.ನಾರಾಯಣ ನಾಯ್ಕ್, ಕಾರ್ಯನಿರ್ವಾಹಕ ಎಂಜಿನಿಯರ್ ಎನ್.ಚಂದ್ರಶೇಖರ್, ಎಸ್ಡಿಒಗಳಾದ ಕೆ. ಜ್ಞಾನೇಶ್ವರ ಮತ್ತು ಕೆ.ಕೆ.ಕೃಷ್ಣಕುಮಾರ್, ಸೆಕ್ಷನ್ ಎಂಜಿನಿಯರ್ಗಳಾಧ ಜಿ.ಕಿರಣ್ಮತ್ತು ಡಿ.ಕೆ.ಪಂಪಾಪತಿ ಇದ್ದರು.


