ಚಂದ್ರವಳ್ಳಿ ನ್ಯೂಸ್, ಹೊಳಲ್ಕೆರೆ :
ಮನೆಯೆ ಮೊದಲ ಪಾಠ ಶಾಲೆ ತಾಯಿ ಮೊದಲ ಗುರು. ಶಾಲೆಯು ವಿದ್ಯೆಯ ಮುಂದುವರಿಕೆ ಕೇಂದ್ರ. ಶಿಕ್ಷಕರು ಜೀವನದ ಪಾಠಗಳ ಮಾರ್ಗದರ್ಶಕ ಪೋಷಕರು. ತಾಯಿ ಶಿಶುವಿಗೆ ಜನ್ಮ ನೀಡಿದರೆ ಶಿಕ್ಷಕರು ಮಕ್ಕಳಿಗೆ ಜ್ಞಾನಾಭಿವೃದ್ಧಿಯ ಧಾರೆ ಎರೆಯುವ ಮೂಲಕ ಮಕ್ಕಳಿಗೆ ವಿದ್ಯೆಯ ಜನ್ಮದಾತರಾಗುವರು ಎಂದು ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಟಿ.ಪಿ.ಉಮೇಶ್ ಹೇಳಿದರು.
ಹೊಳಲ್ಕೆರೆ ತಾಲ್ಲೂಕಿನ ಅಮೃತಾಪುರ ಗ್ರಾಮದ ಸರ್ಕಾರಿ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ಒಂದನೇ ತರಗತಿಗೆ ದಾಖಲಾದ ವಿದ್ಯಾರ್ಥಿಗಳಿಗೆ ಅಕ್ಷರಾಭ್ಯಾಸದ ಪ್ರಾರಂಭೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮೂರು ವರ್ಷದ ಬುದ್ಧಿ ನೂರು ವರ್ಷದವರೆಗೆ. ಬಾಲ್ಯದ ಕಲಿಕೆ ಯೌವ್ವನಕ್ಕೆ ಆಧಾರ ಮುಪ್ಪಿಗೆ ಊರುಗೋಲು. ಪೋಷಕರು ಮಕ್ಕಳನ್ನು ಯೋಜಿತವಾಗಿ ಬೆಳೆಸಬೇಕು. ಮಕ್ಕಳು ಎಲ್ಲ ಗುಣಗಳ ಆಗರ. ಪರಿಸರದ ಪ್ರಭಾವದಿಂದ ಕೆಟ್ಟವರಾಗಬಹುದು ಅಥವಾ ಉತ್ತಮ ವ್ಯಕ್ತಿಗಳಾಗಬಹುದು.
ರಾಮ ಹಾಗು ರಾವಣ, ಕೃಷ್ಣ ಹಾಗು ಕಂಸ, ಬುದ್ಧ ಹಾಗು ಅಂಗುಲಿಮಾಲ ಪರಿಸರದ ಪ್ರಭಾವ ಹಾಗು ಗುರು ಹಿರಿಯರ ಪೋಷಣೆಯಿಂದಲೇ ಉತ್ತಮರು ಹಾಗು ದರ್ನಡತೆಯವರು ಆದರು. ಹಾಗಾಗಿ ಪೋಷಕರು ಮಕ್ಕಳ ಮುಂದೆ ನಯವಿನಯದಿಂದ ವರ್ತಿಸುವ ಜೊತೆಗೆ ಮೃದು ಮಾತುಗಳ ಮೂಲಕ ಇತಿಹಾಸ ಪುರಾಣ ಪುಣ್ಯ ಪುರುಷರ ಕಥೆಗಳ ಮೂಲಕ ಮಕ್ಕಳಲ್ಲಿ ಧನಾತ್ಮಕ ಕಲಿಕೆ ಅಭಿವೃದ್ಧಿ ಮಾಡಬೇಕು. ಒಂದನೇ ತರಗತಿಗೆ ದಾಖಲಾದ ಮಕ್ಕಳು ಶಾಲೆಯಲ್ಲಿ ಶಿಕ್ಷಕರ ಹಾಡು ಕಥೆ ಚಟುವಟಿಕೆಗಳ ಮೂಲಕ ಕಲಿಯುವರು. ಮನೆಯಲ್ಲಿ ಪೋಷಕರು ಶಾಲೆಯಲ್ಲಿ ಕಲಿತ ಕಲಿಕೆಯನ್ನು ಪುನರಾವರ್ತಿಸಲು ಸಹಾಯ ಮಾಡಬೇಕು. ಹಾಗಾದರೆ ಮಾತ್ರ ಕಲಿಕೆ ದೃಢವಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಶಾರದ ದೇವಿಗೆ ಪೂಜೆ ಸಲ್ಲಿಸಿ ತಾಯಂದಿರ ಮೂಲಕ ಅಕ್ಷರಾಭ್ಯಾಸ ಪ್ರಾರಂಭಿಸಲಾಯಿತು. ಶಿಕ್ಷಕಿ ಜಿ.ಎನ್.ರೇಷ್ಮಾರವರು ತಾಯಂದಿರಿಗೆ ಕುಂಕುಮ ನೀಡಿ ಸ್ವಾಗತಿಸಿದರು. ವಿದ್ಯಾರ್ಥಿಗಳಿಗೆ ಹೂವುಗಳ ಮೂಲಕ ಆಶೀರ್ವಾದ ಅರ್ಪಿಸಲಾಯಿತು. ತಾಯಂದಿರಾದ ಪ್ರೇಮ, ಈರಮ್ಮ, ಚೈತ್ರಾ, ದೀಪ, ಪ್ರೇಮಮ್ಮ, ವಿದ್ಯಾ, ಸುಚಿತ್ರ, ತಿಮ್ಮಮ್ಮ, ಶಾರದಮ್ಮ ಹಾಗು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.



