ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ನಗರದಲ್ಲಿ ರಾಷ್ಟ್ರೀಯ ಕಾರ್ಯಕ್ರಮವಾದ ಮತದಾರರ ವಿಶೇಷ ಸಮಗ್ರ ಪರಿಶೀಲನೆಗೆ ಚಾಲನೆ ನೀಡಲಾಗಿದ್ದು, 18 ವರ್ಷ ಮೇಲ್ಪಟ್ಟ ಎಲ್ಲಾ ಅರ್ಹ ಮತದಾರರು ಕಡ್ಡಾಯವಾಗಿ 2026ರ ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ನಗರಸಭೆ ಪೌರಾಯುಕ್ತರಾದ ಎ. ವಾಸೀಂ ಮನವಿ ಮಾಡಿದ್ದಾರೆ.
ನಗರದ ಮತಗಟ್ಟೆ ಸಂಖ್ಯೆ 170 ರಲ್ಲಿ ನಿವೃತ್ತ ಪ್ರಾಂಶುಪಾಲರು ಹಾಗೂ ಹಿರಿಯೂರು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಜಿ. ರಂಗಸ್ವಾಮಿ ಅವರ ಹೆಸರು ನೋಂದಾಯಿಸುವ ಮೂಲಕ ಈ ಮಹತ್ವದ ಕಾರ್ಯಕ್ರಮಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಯಿತು.
ಬಿಎಲ್ಒಗಳಿಗೆ ಮಾಹಿತಿ ನೀಡಿ: ಮನೆ ಮನೆಗೆ ಭೇಟಿ ನೀಡುವ ಬಿಎಲ್ಒ (BLO) ಗಳಿಗೆ ಸಾರ್ವಜನಿಕರು ತಪ್ಪದೇ ನಿಗದಿತ ಮಾಹಿತಿ ನೀಡಬೇಕು.
ಅರ್ಜಿ ನಮೂನೆಗಳ ಸಲ್ಲಿಕೆ: ಬಿಎಲ್ಒಗಳು ನೀಡುವ ಎರಡು ನಿಗದಿತ ಅರ್ಜಿ ನಮೂನೆಗಳನ್ನು ಸೂಕ್ತ ಮಾಹಿತಿಯೊಂದಿಗೆ ಭರ್ತಿ ಮಾಡಬೇಕು. ಇದರಲ್ಲಿ ಒಂದು ಅರ್ಜಿಯನ್ನು ತಮ್ಮ ಬಳಿ ಇಟ್ಟುಕೊಂಡು, ಮತ್ತೊಂದನ್ನು ಬಿಎಲ್ಒಗೆ ಹಸ್ತಾಂತರಿಸಬೇಕು.
ಯಾರೂ ಹೊರಗುಳಿಯಬಾರದು: ಯಾವುದೇ ಅರ್ಹ ಮತದಾರರು ಅಥವಾ ಕುಟುಂಬದ ಸದಸ್ಯರು ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ನೋಡಿಕೊಳ್ಳಲು ಸಾರ್ವಜನಿಕರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಕಾರ್ಯಕರ್ತರು ಈ ರಾಷ್ಟ್ರೀಯ ಕಾರ್ಯಕ್ಕೆ ನೆರವಾಗಬೇಕು ಎಂದು ಪೌರಾಯುಕ್ತರು ಕೋರಿದ್ದಾರೆ.
"ಅರ್ಜಿ ನಮೂನೆಗಳಲ್ಲಿ ಅತ್ಯಂತ ಸರಳ ಮಾಹಿತಿಯನ್ನು ಕೇಳಲಾಗಿರುತ್ತದೆ. ಈಗಾಗಲೇ ಮತದಾರರ ಬಳಿ ಇರುವ ವೋಟರ್ ಐಡಿ ಸಂಖ್ಯೆ, ಆಧಾರ್ ಸಂಖ್ಯೆ, ಪ್ರಸ್ತುತ ವಾಸವಿರುವ ಸರಿಯಾದ ವಿಳಾಸ, ಪೋಷಕರ ಹೆಸರು, ಮತಗಟ್ಟೆ ಸಂಖ್ಯೆ ಹಾಗೂ ಭಾಗದ ಸಂಖ್ಯೆಯನ್ನು ನೀಡುವ ಮೂಲಕ ಮತದಾರ ಬಾಂಧವರು ಈ ರಾಷ್ಟ್ರೀಯ ಕಾರ್ಯಕ್ರಮದ ಯಶಸ್ಸಿಗೆ ಕೈಜೋಡಿಸಬೇಕು." ಎಂ.ಜಿ ರಂಗಸ್ವಾಮಿ, ನಿವೃತ್ತ ಪ್ರಾಂಶುಪಾಲರು ಹಾಗೂ ಸಾಹಿತಿಗಳು.
ಈ ಸಂದರ್ಭದಲ್ಲಿ ನಗರಸಭೆ ಸಿಬ್ಬಂದಿ ಹಾಗೂ ಕಂದಾಯ ನಿರೀಕ್ಷಕರಾದ ಜುನೇದ್ ಸಿರಾಜ್, ಮೊಹಮ್ಮದ್ ಹಸ್ರತುಲ್ಲ, ತಾಲ್ಲೂಕು ಕಚೇರಿ ಚುನಾವಣಾ ಶಾಖೆಯ ಸಿಬ್ಬಂದಿ ಮಧು ಸೇರಿದಂತೆ ಇತರ ಪ್ರಮುಖರು ಉಪಸ್ಥಿತರಿದ್ದರು.



