ಚಂದ್ರವಳ್ಳಿ ನ್ಯೂಸ್, ಹೊಳಲ್ಕೆರೆ :
ಸಾಕ್ಷರತೆ ಎಂದರೆ ಕೇವಲ ಅಕ್ಷರಗಳನ್ನು ಓದಲು ಮತ್ತು ಬರೆಯಲು ಕಲಿಯುವುದಷ್ಟೇ ಅಲ್ಲ. ಅದು ಮಗುವಿನ ಚಿಂತನೆಗೆ ರೆಕ್ಕೆ ನೀಡುವ ಶಕ್ತಿ. ಓದು-ಬರಹದ ಮೂಲಕ ಜ್ಞಾನವನ್ನು ಪಡೆದು, ತನ್ನ ಹಕ್ಕು-ಕರ್ತವ್ಯಗಳನ್ನು ಅರಿತು, ಆತ್ಮವಿಶ್ವಾಸದಿಂದ ಬದುಕುವ ಸಾಮರ್ಥ್ಯವನ್ನು ಸಾಕ್ಷರತೆ ನೀಡುತ್ತದೆ ಎಂದು ಮುಖ್ಯೋಪಾಧ್ಯಾಯ ಟಿ.ಪಿ. ಉಮೇಶ್ ಹೇಳಿದರು.
ಹೊಳಲ್ಕೆರೆ ತಾಲ್ಲೂಕು ಅಮೃತಾಪುರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 60 ನೇ ವರ್ಷದ ಅಂತರಾಷ್ಟ್ರೀಯ ಸಾಕ್ಷರತೆ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಒಂದು ಮಗು ಅಕ್ಷರ ಕಲಿತಾಗ ಅದರ ಬದುಕಿನ ಹೊಸ ಬಾಗಿಲೊಂದು ತೆರೆದುಕೊಳ್ಳುತ್ತದೆ.
ಪುಸ್ತಕಗಳು ಮಕ್ಕಳಿಗೆ ಜ್ಞಾನದ ಗೆಳೆಯರಾಗಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯೂ ಪ್ರತಿದಿನವೂ ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಶಾಲೆಯಲ್ಲಿ ಕಲಿತ ಅಕ್ಷರಜ್ಞಾನವನ್ನು ಜೀವನದಲ್ಲಿ ಬಳಸಿಕೊಳ್ಳುವ ಮೂಲಕ ಕುಟುಂಬ ಮತ್ತು ಸಮಾಜದ ಪ್ರಗತಿಗೂ ಕೈಜೋಡಿಸಬೇಕು ಎಂದು ಅವರು ಕರೆ ನೀಡಿದರು.
ವಿದ್ಯಾರ್ಥಿಗಳಲ್ಲಿ ಓದುವಿಕೆ, ಬರವಣಿಗೆ ಮತ್ತು ಜ್ಞಾನಾಭಿರುಚಿ ಬೆಳೆಸುವ ಉದ್ದೇಶದಿಂದ ವಿವಿಧ ಸಾಕ್ಷರತಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಯಿತು. ವಿದ್ಯಾರ್ಥಿಗಳು ಸಾಕ್ಷರತೆಯ ಮಹತ್ವ ಸಾರುವ ಘೋಷಣೆಗಳು, ಮಾತುಗಳು ಹಾಗೂ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಅಕ್ಷರ ಕಲಿಯೋಣ, ಜ್ಞಾನ ಬೆಳೆಸೋಣ, ಓದುವ ಹವ್ಯಾಸ ಬೆಳೆಸಿ, ಉತ್ತಮ ಸಮಾಜ ನಿರ್ಮಿಸೋಣ ಎಂಬ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಸಹಶಿಕ್ಷಕಿ ಜಿ.ಎನ್.ರೇಷ್ಮಾ ಅಕ್ಷರ ದಾಸೋಹ ಕಾರ್ಯಕರ್ತರಾದ ತಿಮ್ಮಕ್ಕ, ಶಾರದಮ್ಮ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.




