ಚಂದ್ರವಳ್ಳಿ ನ್ಯೂಸ್, ಹರಿಹರ :
ನಗರದ ಸಹಾಯಕ ಭೂದಾಖಲೆಗಳ ನಿರ್ದೇಶಕರ ಕಚೇರಿಯಲ್ಲಿ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ನೆ ನಡೆಸಿದ ಕಾರ್ಯಾಚರಣೆಯಲ್ಲಿ 5 ಸಾವಿರ ರೂ,ಲಂಚ ಪಡೆಯುವ ಕೃತ್ಯ ಎಸಗುವಾಗ ಸರ್ವೆ ಮೇಲ್ವಿಚಾರಕ ಹಾಗೂ ಸರ್ಕಾರಿ ಪರವಾನಿಗೆ ಭೂಮಾಪಕ ಬಲೆಗೆ ಬಿದ್ದು ಪ್ರಕರಣ ದಾಖಲಿಸಲಾಗಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದರು.
ತಾಲೂಕು ಸಹಾಯಕ ಭೂದಾಖಲೆಗಳ ನಿರ್ದೇಶಕ ಕಚೇರಿ ಯಲ್ಲಿ ಭೂ ಅಳತೆ ಮಾಡಿ ಕೊಡುವ ಸಂಬಂಧ ರೈತನಿಂದ 5 ಸಾವಿರ ರೂ, ಲಂಚ ಸ್ವೀಕರಿಸುತ್ತಿದ್ದ ವೇಳೆ ಬಲೆ ಬೀಸಿ ಇಬ್ಬರು ಅಧಿಕಾರಿಗಳಾದ ಸರ್ವೆ ಸೂಪರ್ವೈಸರ್ ರಾಮಪ್ಪ ಅಡಿವೆಪ್ಪ ದಾಸರ್ ಮತ್ತು ಸರ್ಕಾರಿ ಪರವಾನಗಿ ಭೂಮಾಪಕ ಆನಂದಪ್ಪ ನಾಯಕ್ ರೆಡ್ಹ್ಯಾಂಡ್ ಆಗಿ ಹಣದ ಸಮೇತ ಬಂಧಿಸಿದ್ದಾರೆ.
ಪ್ರಕರಣದ ಹಿನ್ನೆಲೆ : ತಾಲೂಕಿನ ಸ್ಥಳೀಯ ರೈತ ರುದ್ರೇಶ್ 11ಇ ಅಡಿ ಸ್ಕೆಚ್ ತಯಾರಿಸಿ ತಮ್ಮ ಜಮೀನಿನ ಅಳತೆ ಮಾಡಿಕೊಡು ವಂತೆ ಹಲವು ದಿನ ಗಳಿಂದ ಕಚೇರಿಗೆ ಅಲೆದಾಡುತ್ತಿದ್ದರು. ಆದರೆ ಕೆಲಸ ಪೂರ್ಣ ಗೊಳಿಸಲು ಸರ್ವೆ ಸೂಪರ್ವೈಸರ್ ರಾಮಪ್ಪ ದಾಸರ್ ಹಾಗೂ ಪರವಾನಗಿ ಭೂಮಾಪಕ ಆನಂದಪ್ಪ ನಾಯಕ್ ಅವರು 5 ಸಾವಿರ ರೂ, ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿದೆ.
ರೈತ ರುದ್ರೇಶ್ ಲಂಚ ನೀಡಲು ನಿರಾಕರಿಸಿ ಲೋಕಾಯುಕ್ತ ಪೊಲೀಸರಿಗೆ ದೂರು ಸಲ್ಲಿಸಿದ್ದರು. ದೂರಿನ ಆಧಾರದ ಮೇಲೆ ಅಧಿಕಾರಿಗಳು ಕಾರ್ಯಾಚರಣೆಗೆ ಯೋಜನೆ ರೂಪಿಸಿ ರೆಡ್ಹ್ಯಾಂಡ್ ಆಗಿ ಯೋಜನೆಯಂತೆ ಶನಿವಾರ ರೈತ ರುದ್ರೇಶ್ ಆರೋಪಿಗಳಿಗೆ 5 ಸಾವಿರ ರೂ, ಲಂಚದ ಹಣ ನೀಡುತ್ತಿದ್ದ ವೇಳೆ,ಹೊಂಚು ಹಾಕಿ ಕಾಯುತ್ತಿದ್ದ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಇಬ್ಬರನ್ನೂ ಕೃತ್ಯ ಎಸೆಗುವ ವೇಳೆ ಬಂಧಿಸಿದ್ದಾರೆ.
ಲೋಕಾಯುಕ್ತ ಎಸ್ಪಿ ಎಂ.ಎಸ್. ಕೌಲಾಪುರೆ ನೇತೃತ್ವದಲ್ಲಿ ನಡೆಸಿದ ದಾಳಿ ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಅಧಿಕಾರಿಗಳ ವಿಶೇಷ ತಂಡ ಭಾಗವಹಿಸಿ ಪ್ರಕರಣ ದಾಖಲಿಸಿ ಕೊಂಡಿರುವ ಲೋಕಾಯುಕ್ತ ಪೊಲೀಸರು ಆರೋಪಿಗಳ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದು, ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.



