ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷ ಬಿಜೆಪಿ ನಡೆಸುತ್ತಿರುವ ಪ್ರತಿಭಟನೆಯ ನಡುವೆಯೇ, ಅಬಕಾರಿ ಸಚಿವ ಶಿವಲಿಂಗೇಗೌಡ ಅವರು ನೀಡಿದ ಹೇಳಿಕೆಯೊಂದು ಆಡಳಿತರೂಢ ಕಾಂಗ್ರೆಸ್ ಸರ್ಕಾರಕ್ಕೆ ತೀವ್ರ ಮುಜುಗರ ಉಂಟುಮಾಡಿದೆ.
ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಬಿಜೆಪಿ ವಿರುದ್ಧ ಕಾಂಗ್ರೆಸ್ ನಡೆಸುತ್ತಿದ್ದ ಪ್ರತಿಭಟನೆ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಮಾಜಿ ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆ ವಿಚಾರದಲ್ಲಿ ನೀಡಿದ ಹೇಳಿಕೆಯಿಂದ ಸ್ವತಃ ಪೇಚಿಗೆ ಸಿಲುಕಿದರು.
ಘಟನೆಯ ವಿವರ:ವಾಲ್ಮೀಕಿ ಹಗರಣದ ಆರೋಪ ಎದುರಿಸುತ್ತಿರುವ ನಾಗೇಂದ್ರ ಅವರ ರಾಜೀನಾಮೆಯನ್ನು ಸಿದ್ದರಾಮಯ್ಯ ಸರ್ಕಾರ ಏಕೆ ಪಡೆಯಿತು ಎಂಬ ಮಾಧ್ಯಮ ಪ್ರತಿನಿಧಿಯ ಪ್ರಶ್ನೆಗೆ ಉತ್ತರಿಸಿದ ಶಿವಲಿಂಗೇಗೌಡ, "ನಾಗೇಂದ್ರ ವಿರುದ್ಧ ಆಪಾದನೆ ಬಂದಾಗ ಸದನದಲ್ಲಿ ಚರ್ಚೆಯಾಗಿತ್ತು, ಆದರೆ ಸತ್ಯಾಸತ್ಯತೆಗಳು ತಿಳಿದಿರಲಿಲ್ಲ" ಎಂದರು.
ಇದಕ್ಕೆ ಮರುಪ್ರಶ್ನೆ ಹಾಕಿದ ವರದಿಗಾರ, "ಸತ್ಯ ತಿಳಿಯದೆ ನಾಗೇಂದ್ರ ಅವರನ್ನು ಬಲಿಪಶು ಮಾಡಲಾಯಿತೇ?" ಎಂದು ಕೇಳಿದಾಗ, "ನಾಗೇಂದ್ರ ಮೇಲ್ನೋಟಕ್ಕೆ ಅಪರಾಧಿ ಎಂಬ ಶಂಕೆ ಇದ್ದಿದ್ದರಿಂದ ಅವರ ರಾಜೀನಾಮೆ ಪಡೆಯಲಾಯಿತು" ಎಂದು ಸಚಿವರು ನಾಲಗೆ ಹಾರಿಸಿದರು.
ತಪ್ಪು ತಿದ್ದುಕೊಂಡ ಸಚಿವರು: ಮಾಜಿ ಸಚಿವ ನಾಗೇಂದ್ರ ಅವರನ್ನು 'ಅಪರಾಧಿ' ಎಂದು ಕರೆದ ಹೇಳಿಕೆ ತಕ್ಷಣವೇ ಚರ್ಚೆಗೆ ಗ್ರಾಸವಾಯಿತು. ಸಚಿವರ ಪಕ್ಕದಲ್ಲಿದ್ದ ಶಾಸಕರು ತಕ್ಷಣವೇ ಈ ತಪ್ಪನ್ನು ಗಮನಕ್ಕೆ ತಂದ ಬಳಿಕ ಎಚ್ಚೆತ್ತುಕೊಂಡ ಶಿವಲಿಂಗೇಗೌಡರು, "ನಾಗೇಂದ್ರ ಆರೋಪಿ ಇರಬಹುದೆಂಬ ಶಂಕೆಯಿಂದ ರಾಜೀನಾಮೆ ಪಡೆಯಲಾಗಿತ್ತು" ಎಂದು ತಮ್ಮ ಹೇಳಿಕೆಯನ್ನು ತಿದ್ದುಕೊಂಡರು. ಪ್ರಸ್ತುತ ಈ ವಿಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪ್ರತಿಪಕ್ಷಗಳಿಗೆ ಮತ್ತೆ ಹೊಸ ಆಸ್ತ್ರ ಸಿಕ್ಕಂತಾಗಿದೆ.



