ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ದೇಶದ ಹಿರಿಯ ನಾಗರಿಕರನ್ನು ದೇವರಿಗೆ ಸಮಾನವಾಗಿ ಕಾಣುವುದು ನಮ್ಮ ಸಂಸ್ಕøತಿಯಾಗಿದೆ. ವಯೋಸಹಜ ದೌರ್ಬಲ್ಯಗಳಿಂದ ಬಳಲುತ್ತಿರುವ ಹಿರಿಯರ ಬದುಕು ಸುಗಮ ಹಾಗೂ ಸ್ವಾಭಿಮಾನದಿಂದ ಕೂಡಿರುವಂತೆ ನೋಡಿಕೊಳ್ಳುವುದು ಮತ್ತು ಅವರಿಗೆ ನೆರವಾಗುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿದೆ ಎಂದು ಸಂಸದ ಗೋವಿಂದ ಎಂ. ಕಾರಜೋಳ ಹೇಳಿದರು.
ನಗರದ ಎಸ್ಎಸ್ಕೆಎಸ್ ಸಮುದಾಯ ಭವನದಲ್ಲಿ ಭಾನುವಾರ ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ, ಜಿಲ್ಲಾಡಳಿತ, ಅಲಿಮ್ಕೊ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ‘ರಾಷ್ಟ್ರೀಯ ವಯೋಶ್ರೀ ಯೋಜನೆ’ಯಡಿ ಹಿರಿಯ ನಾಗರಿಕರಿಗೆ ಉಚಿತ ಸಾಧನ ಸಲಕರಣೆಗಳ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಹಿರಿಯ ನಾಗರಿಕರ ಬಗ್ಗೆ ಅಪಾರವಾದ ವೈಯಕ್ತಿಕ ಕಾಳಜಿ ಮತ್ತು ಗೌರವ ಹೊಂದಿದ್ದಾರೆ. ಅವರ ಆಸಕ್ತಿಯ ಫಲವಾಗಿ ಹಿರಿಯ ನಾಗರಿಕರ ಕಲ್ಯಾಣ ಇಲಾಖೆಗೆ ಹೆಚ್ಚಿನ ಅನುದಾನ ಬಿಡುಗಡೆಯಾಗಿದೆ. ಹಿರಿಯರಿಗೆ ಅಗತ್ಯವಿರುವ ಸಾಧನ ಸಲಕರಣೆಗಳನ್ನು ಉಚಿತವಾಗಿ ನೀಡುವ ಮೂಲಕ ಅವರ ನೆರವಿಗೆ ನಿಲ್ಲಬೇಕು ಎಂಬ ಉದಾತ್ತ ಉದ್ದೇಶದಿಂದ ರಾಷ್ಟ್ರೀಯ ವಯೋಶ್ರೀ ಯೋಜನೆಯನ್ನು ದೇಶಾದ್ಯಂತ ಜಾರಿಗೆ ತರಲಾಗಿದೆ. ಸ್ವತಃ ಪ್ರಧಾನಿ ಅವರೇ ಹಲವೆಡೆ ಈ ಯೋಜನೆಗೆ ಚಾಲನೆ ನೀಡಿದ್ದಾರೆ ಎಂದು ತಿಳಿಸಿದರು.
ಹಿರಿಯರು ಕೇವಲ ವಯಸ್ಸಿನಲ್ಲಿ ದೊಡ್ಡವರಲ್ಲ, ಬದಲಿಗೆ ಅವರು ನಮ್ಮ ಸಮಾಜದ ಜ್ಞಾನ ಮತ್ತು ಅನುಭವದ ಶ್ರೀಮಂತ ಭಂಡಾರವಾಗಿದ್ದಾರೆ. ತಂದೆ-ತಾಯಿ ಸಮಾನರಾದ ಹಿರಿಯರ ಪಾದ ಮುಟ್ಟಿ ನಮಸ್ಕರಿಸುವ ಸಂಸ್ಕøತಿ ನಮ್ಮ ದೇಶದ್ದಾಗಿದೆ. ಹಿರಿಯರ ಜ್ಞಾನ ಹಾಗೂ ಅನುಭವದ ಲಾಭ ಯುವ ಪೀಳಿಗೆಗೆ ಧಾರೆ ಎರೆಯುವ ಮೂಲಕ ದೇಶವನ್ನು ಮತ್ತಷ್ಟು ಪ್ರಗತಿಪಥದಲ್ಲಿ ಕೊಂಡೊಯ್ಯಲು ಮತ್ತು ದೇಶದ ಸಂಸ್ಕøತಿಯನ್ನು ಶ್ರೀಮಂತಗೊಳಿಸಲು ಸಾಧ್ಯವಿದೆ. ಈ ಹಿನ್ನೆಲೆಯಲ್ಲಿ ಹಿರಿಯರನ್ನು ಗೌರವಿಸುವ ದೇಶ ಖಂಡಿತವಾಗಿಯೂ ಪ್ರಗತಿ ಹೊಂದುತ್ತದೆ ಎಂಬುದು ಪ್ರಧಾನಿಯವರ ದೃಢ ನಂಬಿಕೆಯಾಗಿದೆ ಎಂದರು.
ವಯಸ್ಸಾಗುತ್ತಿದ್ದಂತೆ ಕಣ್ಣು, ಕಿವಿಗಳ ದೋಷ ಎದುರಾಗುವುದು, ನಡೆಯಲು ಕಷ್ಟವಾಗುವುದು ಸಹಜ. ಆದರೆ ಬಡತನದ ಕಾರಣದಿಂದಾಗಿ ಅನೇಕ ಹಿರಿಯರಿಗೆ ಕನ್ನಡಕ, ಶ್ರವಣ ಸಾಧನ ಹಾಗೂ ವಾಕಿಂಗ್ ಸ್ಟಿಕ್ಗಳಂತಹ ಮೂಲಭೂತ ಅಗತ್ಯ ಸಾಧನಗಳನ್ನು ಖರೀದಿಸಲು ಆರ್ಥಿಕ ಶಕ್ತಿ ಇರುವುದಿಲ್ಲ. ಅಂತಹ ಹಿರಿಯರು ಯಾರ ಮೇಲೆಯೂ ಅವಲಂಬಿತರಾಗದೆ, ಸ್ವಾಭಿಮಾನದಿಂದ ಗೌರವದ ಬದುಕು ನಡೆಸಬೇಕು ಎಂಬ ಉದ್ದೇಶದಿಂದ ಈ ಅತ್ಯಾಧುನಿಕ ಹಾಗೂ ಗುಣಮಟ್ಟದ ಉಪಕರಣಗಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ. ಈ ಉಪಕರಣಗಳು ಕೇವಲ ವಸ್ತುಗಳಲ್ಲ, ಇವು ಹಿರಿಯರ ಸ್ವಾವಲಂಬನೆ ಮತ್ತು ಸ್ವಾಭಿಮಾನದ ಸಂಕೇತಗಳಾಗಿವೆ ಎಂದರು.
ಕಳೆದ ವರ್ಷ ಜಿಲ್ಲೆಯಲ್ಲಿ ಸುಮಾರು ಒಂದು ಸಾವಿರಕ್ಕೂ ಹೆಚ್ಚು ವಿಕಲಚೇತನರಿಗೆ ಕೇಂದ್ರ ಸರ್ಕಾರದ ‘ಆಡಿಪ್’ ಯೋಜನೆಯಡಿ ವಿವಿಧ ಸೌಲಭ್ಯಗಳನ್ನು ವಿತರಿಸಲಾಗಿತ್ತು. ಈ ಬಾರಿ ಹಿರಿಯ ನಾಗರಿಕರ ಮೌಲ್ಯಮಾಪನ ನಡೆಸಿ ಸೌಲಭ್ಯ ಒದಗಿಸುವಂತೆ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರಾದ ವೀರೇಂದ್ರ ಕುಮಾರ್ ಅವರಿಗೆ ಪತ್ರ ಬರೆದು ವೈಯಕ್ತಿಕವಾಗಿ ಭೇಟಿಯಾಗಿ ಮನವಿ ಮಾಡಿಕೊಳ್ಳಲಾಗಿತ್ತು. ನನ್ನ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು, ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿದ್ದರು. ಅದರ ಫಲವಾಗಿ ಇಂದು ಚಿತ್ರದುರ್ಗ ಕ್ಷೇತ್ರದ ಸಾವಿರಾರು ಹಿರಿಯ ನಾಗರಿಕರಿಗೆ ದೈನಂದಿನ ಜೀವನಕ್ಕೆ ನೆರವಾಗುವ ಅತ್ಯಾಧುನಿಕ ಉಪಕರಣಗಳನ್ನು ವಿತರಿಸಲಾಗುತ್ತಿದೆ. ಕ್ಷೇತ್ರದ ನಿಮ್ಮ ಪ್ರತಿನಿಧಿಯಾಗಿ ಈ ಕರ್ತವ್ಯವನ್ನು ನಿಭಾಯಿಸುತ್ತಿರುವುದಕ್ಕೆ ನನಗೆ ಹೆಮ್ಮೆಯಿದೆ ಎಂದು ಸಂಸದರು ಹರ್ಷ ವ್ಯಕ್ತಪಡಿಸಿದರು.
ರಾಷ್ಟ್ರೀಯ ವಯೋಶ್ರೀ ಯೋಜನೆಯಡಿ ಹಿರಿಯ ನಾಗರಿಕರಿಗೆ ದಿನನಿತ್ಯದ ಬಳಕೆಯ ವಿವಿಧ ಸಾಧನ ಸಲಕರಣೆಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ಹಿರಿಯರ ನೆರವಿಗಾಗಿ ‘ಎಲ್ಡರ್ ಲೈನ್’ (ಸಹಾಯವಾಣಿ ಸಂಖ್ಯೆ: 14567) ಸ್ಥಾಪಿಸಲಾಗಿದ್ದು, ಈ ಮೂಲಕ ಆರೋಗ್ಯ ಸೇವೆಗಳ ಆಪ್ತ ಸಮಾಲೋಚನೆ, ಕಾನೂನು ಸಲಹೆ ಹಾಗೂ ವೃದ್ಧಾಶ್ರಮಗಳ ಮಾಹಿತಿ ಪಡೆಯಬಹುದಾಗಿದೆ ಎಂದು ಅವರು ತಿಳಿಸಿದರು.
ಚಿತ್ರದುರ್ಗ ಜಿಲ್ಲೆಯಲ್ಲಿ ಸುಮಾರು 1.70 ಲಕ್ಷ ಹಿರಿಯ ನಾಗರಿಕರಿದ್ದು, ರಾಷ್ಟ್ರೀಯ ವಯೋಶ್ರೀ ಯೋಜನೆಯಡಿ ಚಿತ್ರದುರ್ಗ, ಹಿರಿಯೂರು, ಚಳ್ಳಕೆರೆ ಮತ್ತು ಹೊಳಲ್ಕೆರೆ ತಾಲ್ಲೂಕುಗಳ ಸುಮಾರು 986 ಫಲಾನುಭವಿಗಳಿಗೆ ಒಟ್ಟು ₹84.84 ಲಕ್ಷ ವೆಚ್ಚದಲ್ಲಿ 4,471 ಸಾಧನ ಸಲಕರಣೆಗಳನ್ನು ಹಂಚಲಾಗುತ್ತಿದೆ. ಉಳಿದ ಮೊಳಕಾಲ್ಮೂರು ಮತ್ತು ಹೊಸದುರ್ಗ ತಾಲ್ಲೂಕುಗಳಲ್ಲೂ ಶೀಘ್ರದಲ್ಲೇ ಫಲಾನುಭವಿಗಳಿಗೆ ಆಯಾ ತಾಲ್ಲೂಕು ಕೇಂದ್ರಗಳಲ್ಲೇ ಉಪಕರಣಗಳನ್ನು ವಿತರಿಸಲಾಗುವುದು ಎಂದು ಭರವಸೆ ನೀಡಿದರು.
ಕಳೆದ ವರ್ಷ ಆಡಿಪ್ ಯೋಜನೆಯಡಿ ಜಿಲ್ಲೆಯ 1,017 ವಿಕಲಚೇತನರಿಗೆ ಒಟ್ಟು ₹1.13 ಕೋಟಿ ವೆಚ್ಚದಲ್ಲಿ 2,293 ಸಾಧನಗಳನ್ನು ವಿತರಿಸಲಾಗಿದೆ. ಒಟ್ಟಾರೆಯಾಗಿ 2022 ರಿಂದ 2026ರ ಅವಧಿಯಲ್ಲಿ ಕೇಂದ್ರ ಸರ್ಕಾರವು ಜಿಲ್ಲೆಯಲ್ಲಿ ಸುಮಾರು ₹3.60 ಕೋಟಿ ವೆಚ್ಚದಲ್ಲಿ 3,868 ಫಲಾನುಭವಿಗಳಿಗೆ 10,959 ಸಾಧನ ಸಲಕರಣೆಗಳನ್ನು ವಿತರಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಆರ್.ಶಿವಣ್ಣ ಮಾತನಾಡಿ, ಬಡವರು, ಹಿರಿಯ ನಾಗರಿಕರು ಹಾಗೂ ವಿಶೇಷ ಚೇತನರಿಗೆ ಆಸರೆಯಾಗುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನಪರ ಆಡಳಿತ ನಡೆಸುತ್ತಿವೆ. ಯಾರಿಗೂ ಅಂಗವೈಕಲ್ಯ ಎಂಬುದು ತಾನಾಗಿಯೇ ಬರುವುದಿಲ್ಲ. ಅದು ವಯೋಸಹಜವಾಗಿ ಅಥವಾ ಅಪಘಾತ, ಅನಾರೋಗ್ಯದಂತಹ ಹತ್ತು ಹಲವು ಕಾರಣಗಳಿಂದ ಎದುರಾಗುತ್ತದೆ. ಕಣ್ಣು ಕಾಣಿಸದಿರುವುದು, ಕಿವಿ ಕೇಳಿಸದಿರುವುದು ಮತ್ತು ನಡೆದಾಡಲು ಶಕ್ತಿ ಇಲ್ಲದೆ ಪರದಾಡುವಂತಹ ಸಂದರ್ಭಗಳಲ್ಲಿ ಇಂತಹ ಉಚಿತ ಉಪಕರಣಗಳ ವಿತರಣಾ ಯೋಜನೆಗಳು ಬಡವರಿಗೆ ವರದಾನವಾಗಲಿವೆ. ಈ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜಂಟಿ ಸಹಭಾಗಿತ್ವದಲ್ಲಿ ಜನಪರ ಆಡಳಿತದ ದೃಢ ಹೆಜ್ಜೆಯಾಗಿ ಈ ಯೋಜನೆ ಅನುಷ್ಠಾನಗೊಂಡಿರುವುದು ಅತ್ಯಂತ ಶ್ಲಾಘನೀಯ ಎಂದರು.
ಇತ್ತೀಚಿನ ದಿನಗಳಲ್ಲಿ ಉದ್ಯೋಗ ಅರಸಿ ಯುವಕರು ವಿದೇಶಗಳಿಗೆ ಅಥವಾ ಮಹಾನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ತಂದೆ-ತಾಯಿಯರನ್ನು ಒಂಟಿಯಾಗಿ ಬಿಟ್ಟು ಹೋಗುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಇದು ಅತ್ಯಂತ ವಿಷಾದನೀಯ. ಮನೆಯಲ್ಲಿ ಹಿರಿಯರನ್ನು ಗೌರವದಿಂದ ಕಾಣುವ ಕುಟುಂಬಗಳು ನೆಮ್ಮದಿಯಿಂದ ಇರುತ್ತವೆ. ಪ್ರತಿಯೊಬ್ಬರೂ ತಮ್ಮ ಮಕ್ಕಳೊಂದಿಗೆ ಪ್ರೀತಿ-ವಿಶ್ವಾಸದಿಂದ ಸಹಜೀವನ ನಡೆಸುವ ವಾತಾವರಣ ಸೃಷ್ಟಿಸಿಕೊಳ್ಳಬೇಕು," ಎಂದು ಕರೆ ನೀಡಿದರು.
ಉಪವಿಭಾಗಾಧಿಕಾರಿ ಡಾ.ಕೆ.ಜೆ.ಕಾಂತರಾಜ್ ಮಾತನಾಡಿ, ‘ಹಿರಿಯ ನಾಗರಿಕರ ಅನುಭವದ ಸಮ್ಮಿಶ್ರಣವು ಮುಂದಿನ ಯುವ ಪೀಳಿಗೆಗೆ ಮಾರ್ಗದರ್ಶನವಾಗಬೇಕು. ಹಿರಿಯರನ್ನು ಗೌರವಿಸಿ, ಸಮಾಜದಲ್ಲಿ ಅವರಿಗೆ ಪ್ರಾತಿನಿಧ್ಯ ನೀಡಿದಾಗ ಮಾತ್ರ ಸಮಾಜದ ಘನತೆ ಹೆಚ್ಚುತ್ತದೆ ಎಂದು ಹೇಳಿದರು..
ಹಿರಿಯ ನಾಗರಿಕರಿಗೆ ಶ್ರವಣ ಸಾಧನಗಳು, ವಾಕಿಂಗ್ ಸ್ಟಿಕ್,ವೀಲ್ ಚೇರ್ ಹಾಗೂ ಕಮೋಡ್ ಸೇರಿದಂತೆ ವಿವಿಧ ಅವಶ್ಯಕ ಸಾಧನಗಳನ್ನು ವಿತರಿಸುವ ಮೂಲಕ ಅವರ ಜೀವನಕ್ಕೆ ಆಧಾರ ಸ್ತಂಭವಾಗಿ ನಿಲ್ಲುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.
ಹಲವು ಬಾರಿ ಹಿರಿಯ ನಾಗರಿಕರು ತಮ್ಮ ಕೊನೆಗಾಲದಲ್ಲಿ ಮಕ್ಕಳ ಹೆಸರಿಗೆ ಜಮೀನು ಅಥವಾ ಆಸ್ತಿಯನ್ನು ದಾನವಾಗಿ ಬರೆದುಕೊಟ್ಟ ನಂತರ, ಮಕ್ಕಳು ಅವರನ್ನು ನಿರ್ಲಕ್ಷಿಸುವ ಅಥವಾ ಸರಿಯಾಗಿ ನೋಡಿಕೊಳ್ಳದ ಘಟನೆಗಳು ನಡೆಯುತ್ತಿವೆ. ಇಂತಹ ಸಂದರ್ಭಗಳಲ್ಲಿ ಹಿರಿಯ ನಾಗರಿಕರ ರಕ್ಷಣೆಗಾಗಿ ‘ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಹಾಗೂ ಕಲ್ಯಾಣ ಕಾಯ್ದೆ 2007' ನೆರವಾಗುತ್ತದೆ. ತಮಗೆ ಅನ್ಯಾಯವಾದಲ್ಲಿ ಹಿರಿಯರು ಉಪವಿಭಾಗಾಧಿಕಾರಿಗಳ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಬಹುದು. ಅಂತಹ ಪ್ರಕರಣಗಳನ್ನು ವಿಚಾರಣೆ ನಡೆಸಿ ಹಿರಿಯರಿಗೆ ನ್ಯಾಯ ಒದಗಿಸಲು ಹಾಗೂ ಜೀವನ ಭತ್ಯೆ ಕೊಡಿಸಲು ಕಾನೂನಿನಡಿ ಕ್ರಮ ವಹಿಸಲಾಗುವುದು ಎಂದು ಕಾಂತರಾಜ್ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ತಾಜ್ಪೀರ್, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜೆ.ವೈಶಾಲಿ, ಅಲಿಮ್ಕೊ ನೋಡಲ್ ಅಧಿಕಾರಿ ಎಲ್.ಸರ್ಕಾರ್, ಕಂಪನಿಯ ಅಭಿಷೇಕ್, ಮುಖಂಡ ಮುರಳಿ ಸೇರಿದಂತೆ ಮತ್ತಿತರರು ಇದ್ದರು.



