ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
"ಬಿಡದಿ ಸ್ಮಾರ್ಟ್ ಸಿಟಿ (ಟೌನ್ಶಿಪ್) ಯೋಜನೆಗೆ ಸಂಬಂಧಿಸಿದಂತೆ ರೈತರ ಸಮ್ಮುಖದಲ್ಲೇ ಬಂದು ಮುಖಾಮುಖಿ ಚರ್ಚೆ ನಡೆಸಲು ನಾನು ಈಗಲೂ ಸಿದ್ಧನಿದ್ದೇನೆ. ನನ್ನ ಹೋರಾಟ ವೈಯಕ್ತಿಕವಾಗಿ ಡಿ.ಕೆ. ಶಿವಕುಮಾರ್ ವಿರುದ್ಧ ಅಲ್ಲ, ಬದಲಿಗೆ ಆ ಭಾಗದ ರೈತರನ್ನು ಅವರು ತಂದಿಟ್ಟಿರುವ ದುಸ್ಥಿತಿಯ ವಿರುದ್ಧ" ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಗುಡುಗಿದ್ದಾರೆ.
ಬೆಂಗಳೂರಿನ ಜೆ.ಪಿ ಭವನದಲ್ಲಿ ಭಾನುವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಡದಿ ಭೂಸ್ವಾಧೀನ ಪ್ರಕ್ರಿಯೆ, ಬೆಂಗಳೂರಿನ ಸುರಂಗ ರಸ್ತೆ ಯೋಜನೆ ಮತ್ತು ಕಾಂಗ್ರೆಸ್ ನಾಯಕರ ಟೀಕೆಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
"ಸಾವಿರಾರು ಕೋಟಿ ಅಕ್ರಮಕ್ಕೆ ಬಾಗಿಲು ತೆರೆದಿದ್ದಾರೆ":
ಬಿಡದಿಯಲ್ಲಿ ಸರ್ಕಾರದ ಭೂಸ್ವಾಧೀನದ ವಿರುದ್ಧ ರೈತರು ಕಳೆದ 475 ದಿನಗಳಿಂದ ನಡೆಸುತ್ತಿರುವ ಹೋರಾಟವನ್ನು ಪ್ರಸ್ತಾಪಿಸಿದ ಹೆಚ್ಡಿಕೆ, "ಸರ್ಕಾರ ಅಲ್ಲಿನ ಜನರ ಭಾವನೆಗಳ ಜೊತೆ ಚೆಲ್ಲಾಟವಾಡುತ್ತಿದೆ. ಫಲವತ್ತಾದ ಭೂಮಿಯನ್ನು ಅಭಿವೃದ್ಧಿ ಹೆಸರಲ್ಲಿ ವಶಪಡಿಸಿಕೊಂಡು ರೈತರ ಬದುಕನ್ನು ನಾಶ ಮಾಡಬಾರದು. ಸರ್ಕಾರಿ ಭೂಮಿಗಳನ್ನು ಲಪಟಾಯಿಸಲು ಮಧ್ಯವರ್ತಿಗಳಿಗೆ ಸರ್ಕಾರವೇ ಬೆಂಬಲ ನೀಡುತ್ತಿದೆ. ಈ ಯೋಜನೆ ಸಾವಿರಾರು ಕೋಟಿ ರೂಪಾಯಿ ಅಕ್ರಮಕ್ಕೆ ದಾರಿ ಮಾಡಿಕೊಟ್ಟಿದೆ" ಎಂದು ಗಂಭೀರ ಆರೋಪ ಮಾಡಿದರು. ಈ ವಿಷಯದ ಕುರಿತು ಸಿಎಂಗೆ ಪತ್ರ ಬರೆದರೂ ಯಾವುದೇ ಉತ್ತರ ಬಂದಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಸುರಂಗ ರಸ್ತೆ ಯೋಜನೆ; "ಅವತ್ತು 20 ಕೋಟಿ, ಇವತ್ತು 1,100 ಕೋಟಿ!":
ಇಂದು ಶಂಕುಸ್ಥಾಪನೆಗೊಂಡ ಹೆಬ್ಬಾಳ ಸುರಂಗ ರಸ್ತೆ ಯೋಜನೆ ಕುರಿತು ಮಾತನಾಡಿದ ಕುಮಾರಸ್ವಾಮಿ, "1,119 ಕೋಟಿ ರೂಪಾಯಿ ವೆಚ್ಚದ ಈ ಸುರಂಗ ಮಾರ್ಗ ಅವರದ್ದೇನೋ ದೊಡ್ಡ ಕನಸಂತೆ! ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲೇ ಕಂಪನಿಯೊಂದರ ಮೂಲಕ ಈ ಯೋಜನೆಗೆ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದೆ. ಆದರೆ ಅಷ್ಟರಲ್ಲೇ ನನ್ನ ಸರ್ಕಾರ ಹೋಯಿತು. ಅವತ್ತು ನಾನು ಕೇವಲ 20 ಕೋಟಿ ರೂಪಾಯಿಗೆ ಮಾಡಬೇಕಿದ್ದ ಯೋಜನೆ, ಸರಿಯಾದ ಸಮಯಕ್ಕೆ ತೀರ್ಮಾನ ತೆಗೆದುಕೊಳ್ಳದ ಕಾರಣ ಇಂದು 1,100 ಕೋಟಿಗೂ ಅಧಿಕ ವೆಚ್ಚಕ್ಕೆ ಬಂದು ನಿಂತಿದೆ. ಈ ಲೂಟಿಗೆ ಯಾರು ಜವಾಬ್ದಾರರು? ಇದು ಬೆಂಗಳೂರಿನ ಜನರ ತೆರಿಗೆ ಹಣ" ಎಂದು ಆಕ್ರೋಶ ಹೊರಹಾಕಿದರು. "ಸುರಂಗ ಮಾರ್ಗದಲ್ಲಿ ಅಸಲಿಗೆ ಏನಿದೆ ಎಂಬುದನ್ನು ಮುಂದಿನ ದಿನಗಳಲ್ಲಿ ಬಿಚ್ಚಿಡುತ್ತೇನೆ" ಎಂದು ಮಾರ್ಮಿಕವಾಗಿ ನುಡಿದರು.
ಡಿಕೆಶಿಯ 'ಅಕ್ಬರ್-ಬೀರ್ ಬಲ್' ಕಥೆಗೆ ತಿರುಗೇಟು:
ಡಿ.ಕೆ. ಶಿವಕುಮಾರ್ ಅವರ ಕಥೆಗಳ ಕುರಿತು ವ್ಯಂಗ್ಯವಾಡಿದ ಕುಮಾರಸ್ವಾಮಿ, "ನನಗೆ ನಿಮ್ಮ ಅಕ್ಬರ್-ಬೀರ್ ಬಲ್ ಕಥೆಗಳು ಬೇಕಾಗಿಲ್ಲ. ಮೊದಲು ರಾಜ್ಯದ ಜನತೆಯ ಕಷ್ಟದ ಕಥೆ ಹೇಳಿ, ಅದನ್ನು ಒಪ್ಪಿಕೊಳ್ಳುತ್ತೇನೆ. ಅಧಿಕಾರವೇನೂ ಯಾರಿಗೂ ಶಾಶ್ವತವಲ್ಲ, ಇದೆಲ್ಲವನ್ನೂ ನಾನು ನೋಡಿ ಬಿಟ್ಟಿದ್ದೇನೆ. ಎರಡು ಬಾರಿ ಸಿಎಂ ಕುರ್ಚಿಯ ಮೇಲೆ ಕುಳಿತು ಅನುಭವಿಸಿದ್ದೇನೆ. ಆದರೆ ನಿಮ್ಮಂತೆ ಉದ್ಧಟತನ ತೋರಿಲ್ಲ. ಒಳ್ಳೆಯ ಕೆಲಸ ಮಾಡಿದರೆ ಖಂಡಿತಾ ಅಭಿನಂದಿಸುತ್ತೇವೆ" ಎಂದರು.
"2018ರಲ್ಲಿ ಕಾಲು ಹಿಡಿದುಕೊಂಡು ಬಂದಿದ್ದು ನೀವೇ ಅಲ್ಲವೇ?":
"ಜೆಡಿಎಸ್ ಅಸ್ತಿತ್ವಕ್ಕಾಗಿ ಡ್ರಾಮಾ ಮಾಡುತ್ತಿದೆ" ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ ಹಳೇ ಇತಿಹಾಸ ನೆನಪಿಸಿದ ಹೆಚ್ಡಿಕೆ, "2018ರ ಚುನಾವಣೆಯ ನಂತರ ಯಾರ ಮನೆ ಬಾಗಿಲಿಗೆ ಯಾರು ಬಂದಿದ್ದರು? ಪ್ರಿಯಾಂಕ್ ಖರ್ಗೆ, ಎಂ.ಬಿ. ಪಾಟೀಲ್ ಅವರೇ... ನೀವೇ ತಾನೇ ನಮ್ಮ ಕಾಲು ಹಿಡಿದುಕೊಂಡು ಕೂತಿದ್ದಿರಿ? ನಿಮ್ಮ ಅಸ್ತಿತ್ವ ಉಳಿಸಿಕೊಳ್ಳಲು ನೀವೇ ಬಂದಿದ್ದಿರ ಹೊರತು ನಾವಲ್ಲ. ಕಾಂಗ್ರೆಸ್ನವರಿಗೆ ಅಧಿಕಾರ ಬೇಕಾದಾಗ ಯಾರ ಕಾಲನ್ನಾದರೂ ಹಿಡಿಯುತ್ತಾರೆ. ಈಗ ತಮಿಳುನಾಡಿನಲ್ಲಿ ಡಿಎಂಕೆ ಜೊತೆ ಸೇರಿದ್ದಾರೆ, ಅಲ್ಲಿ ಟಿವಿಕೆ (ವಿಜಯ್ ಪಕ್ಷ) ಅಧಿಕಾರಕ್ಕೆ ಬರುತ್ತದೆ ಎನ್ನುತ್ತಿದ್ದಂತೆ ಅವರ ಜೊತೆಗೂ ಹೋಗುತ್ತಿದ್ದಾರೆ. ನಿಮ್ಮ ಯೋಗ್ಯತೆ ಇದು, ನಮ್ಮ ಪಕ್ಷದ ಬಗ್ಗೆ ಚರ್ಚೆ ಮಾಡುವುದನ್ನು ನಿಲ್ಲಿಸಿ" ಎಂದು ತಿರುಗೇಟು ನೀಡಿದರು.
ಅಡ್ಡಮತದಾನ: ಮೈತ್ರಿ ನಾಯಕರ ಅಡ್ಡಮತದಾನದ ಕುರಿತು ಬಿಜೆಪಿಯಿಂದ ವರದಿ ಸಲ್ಲಿಕೆಯಾಗಿರುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, "ಈ ವಿಷಯವನ್ನು ಇಲ್ಲಿಗೇ ಬಿಟ್ಟುಬಿಡಿ, ಇದಕ್ಕೆ ಹೆಚ್ಚಿನ ಮಹತ್ವ ಕೊಡುವುದು ಬೇಡ" ಎಂದು ನುಣುಚಿಕೊಂಡರು.
ಕಾರ್ಯಕರ್ತರಿಗೆ ಶಾಂತಿಯ ಕರೆ: ಚಿಕ್ಕಬಳ್ಳಾಪುರದ ಗಲಾಟೆ ಮತ್ತು ಚಪ್ಪಲಿ ಎಸೆತದ ಘಟನೆಗೆ ಮರುಪ್ರತಿಕ್ರಿಯೆ ನೀಡಿದ ಅವರು, "ನಮ್ಮ ಕಾರ್ಯಕರ್ತರು ಯಾವುದೇ ಕಾರಣಕ್ಕೂ ಉದ್ವೇಗಕ್ಕೆ ಒಳಗಾಗಬಾರದು. ಚಪ್ಪಲಿ ಎಸೆಯುವುದು, ಅಶಾಂತಿ ಮೂಡಿಸುವುದು ನಮ್ಮ ಸಂಸ್ಕೃತಿಯಲ್ಲ. ಸದಾ ಶಾಂತಚಿತ್ತರಾಗಿರಿ" ಎಂದು ಮತ್ತೊಮ್ಮೆ ಮನವಿ ಮಾಡಿದರು.



