ಚಂದ್ರವಳ್ಳಿ ನ್ಯೂಸ್, ನವದೆಹಲಿ:
ಲಕ್ಷಾಂತರ ವೈದ್ಯಕೀಯ ಸೀಟು ಆಕಾಂಕ್ಷಿಗಳ ತೀವ್ರ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ. ಅಕ್ರಮಗಳ ಆರೋಪದ ಹಿನ್ನೆಲೆಯಲ್ಲಿ ರದ್ದಾಗಿದ್ದ ನೀಟ್-ಯುಜಿ ಪರೀಕ್ಷೆಯನ್ನು ಜೂನ್ ೨೧, ೨೦೨೬ (ಭಾನುವಾರ) ರಂದು ಮರು ನಡೆಸಲಾಗುವುದು ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಓಖಿಂ) ಅಧಿಕೃತವಾಗಿ ಪ್ರಕಟಿಸಿದೆ.
ಭಾರತ ಸರ್ಕಾರದ ಸಮ್ಮತಿಯೊಂದಿಗೆ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದ್ದು, ಎನ್ಟಿಎ ತನ್ನ ಅಧಿಕೃತ ’ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಈ ವಿಷಯವನ್ನು ಹಂಚಿಕೊಂಡಿದೆ.
ವದಂತಿಗಳನ್ನು ನಂಬಬೇಡಿ:
ಪರೀಕ್ಷೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಯಾವುದೇ ವದಂತಿಗಳಿಗೆ ಕಿವಿಗೊಡಬಾರದು ಎಂದು ಎನ್ಟಿಎ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಸ್ಪಷ್ಟಪಡಿಸಿದೆ. ಪರೀಕ್ಷೆಯ ನವೀಕರಣಗಳಿಗಾಗಿ ಕೇವಲ ಅಧಿಕೃತ ಸಂವಹನ ಮಾರ್ಗಗಳನ್ನು ಮಾತ್ರ ಅವಲಂಬಿಸುವಂತೆ ಸೂಚಿಸಿದೆ. ಯಾವುದೇ ಗೊಂದಲ ಅಥವಾ ಪ್ರಶ್ನೆಗಳಿದ್ದಲ್ಲಿ ಅಭ್ಯರ್ಥಿಗಳು ಎನ್ಟಿಎ ಅಧಿಕೃತ ಇಮೇಲ್ ಐಡಿ ಹಾಗೂ ಸಹಾಯವಾಣಿ ಸಂಖ್ಯೆಗಳ ಮೂಲಕ ನೇರವಾಗಿ ಸಂಪರ್ಕಿಸಬಹುದಾಗಿದೆ.
ಶಿಕ್ಷಣ ಸಚಿವರ ನಿವಾಸದಲ್ಲಿ ನಡೆದಿದ್ದ ಹೈ-ಲೆವೆಲ್ ಮೀಟಿಂಗ್!:
ಮರು ಪರೀಕ್ಷೆಯ ದಿನಾಂಕ ಪ್ರಕಟವಾಗುವ ಕೇವಲ ಒಂದು ದಿನ ಮುಂಚಿತವಾಗಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ನಿವಾಸದಲ್ಲಿ ಹೈ-ವೋಲ್ಟೇಜ್ ಸಭೆಯೊಂದು ನಡೆದಿತ್ತು.
ಸಭೆಯಲ್ಲಿದ್ದ ಪ್ರಮುಖರು: ಉನ್ನತ ಶಿಕ್ಷಣ ಕಾರ್ಯದರ್ಶಿ ವಿನೀತ್ ಜೋಶಿ, ಶಾಲಾ ಶಿಕ್ಷಣ ಕಾರ್ಯದರ್ಶಿ ಸಂಜಯ್ ಕುಮಾರ್, ಎನ್ಟಿಎ ಮಹಾನಿರ್ದೇಶಕ ಅಭಿಷೇಕ್ ಸಿಂಗ್, ಸಿಬಿಎಸ್ಇ ಅಧ್ಯಕ್ಷ ರಾಹುಲ್ ಸಿಂಗ್ ಸೇರಿದಂತೆ ಕೇಂದ್ರೀಯ ಹಾಗೂ ನವೋದಯ ವಿದ್ಯಾಲಯದ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ಚರ್ಚೆಯ ವಿಷಯ: ವೈದ್ಯಕೀಯ ಪ್ರವೇಶ ಪರೀಕ್ಷೆಯನ್ನು ಯಾವುದೇ ಲೋಪದೋಷಗಳಿಲ್ಲದೆ ಅತ್ಯಂತ ಪಾರದರ್ಶಕವಾಗಿ ಮತ್ತು ಸುರಕ್ಷಿತವಾಗಿ ಹೊಸದಾಗಿ ನಡೆಸುವ ಕುರಿತು ಈ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆದಿತ್ತು.
೨೨ ಲಕ್ಷ ವಿದ್ಯಾರ್ಥಿಗಳಿಗೆ ಬಿಗ್ ರಿಲೀಫ್:
ಮೇ ೩ ರಂದು ನಡೆದಿದ್ದ ನೀಟ್ ಪರೀಕ್ಷೆಯಲ್ಲಿ ಭಾರೀ ಅಕ್ರಮಗಳು ನಡೆದಿವೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ, ಎನ್ಟಿಎ ಮಂಗಳವಾರದಂದು ಪರೀಕ್ಷೆಯನ್ನು ರದ್ದುಗೊಳಿಸಿ ಆದೇಶ ಹೊರಡಿಸಿತ್ತು. ಇದರಿಂದಾಗಿ ದೇಶದಾದ್ಯಂತ ೨೨ ಲಕ್ಷಕ್ಕೂ ಹೆಚ್ಚು ವೈದ್ಯಕೀಯ ಆಕಾಂಕ್ಷಿಗಳು ತೀವ್ರ ಆತಂಕ ಮತ್ತು ಅನಿಶ್ಚಿತತೆಗೆ ಒಳಗಾಗಿದ್ದರು. ಇದೀಗ ಹೊಸ ದಿನಾಂಕ ಪ್ರಕಟವಾಗಿರುವುದರಿಂದ ವಿದ್ಯಾರ್ಥಿಗಳಿಗೆ ನಿರಾಳತೆಯಾಗಿದೆ.
ತನಿಖೆ ಚುರುಕುಗೊಳಿಸಿದ ಸಿಬಿಐ:
ಇನ್ನೊಂದೆಡೆ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದ ತನಿಖೆಯನ್ನು ಸಿಬಿಐ ತೀವ್ರಗೊಳಿಸಿದೆ. ಈಗಾಗಲೇ ಬಂಧಿತರಾಗಿರುವ ಐದು ಜನರನ್ನು ಸಿಬಿಐ ತನ್ನ ಕಸ್ಟಡಿಗೆ ಪಡೆದಿದ್ದು, ಹೊಸದಾಗಿ ಇಬ್ಬರು ಶಂಕಿತರನ್ನು ಬಂಧಿಸಿದೆ. ಈ ಇಡೀ ಅಕ್ರಮ ಜಾಲದಲ್ಲಿ ಸ್ವತಃ ಎನ್ಟಿಎ ಒಳಗಿನ ಅಧಿಕಾರಿಗಳ ಹಸ್ತಕ್ಷೇಪವೇನಾದರೂ ಇದೆಯೇ ಎಂಬ ನಿಟ್ಟಿನಲ್ಲೂ ಸಿಬಿಐ ತನಿಖೆ ನಡೆಸುತ್ತಿದೆ.


