ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ವಿದ್ಯುತ್ ಖಾಸಗೀಕರಣದ ವಿರುದ್ಧ ಮಹಾಲಿಂಗಪುರ ತಾಲ್ಲೂಕು ಹೋರಾಟ ಸಮಿತಿಯ ಅಡಿಯಲ್ಲಿ ರೈತರು, ನೇಕಾರರು, ಕಾರ್ಮಿಕರು ಹೋರಾಟ ನಡೆಸುತ್ತಿದ್ದ ಮುಖಂಡರ ಮೇಲೆ ಶಾಸಕರಾದ ಸಿದ್ದು ಸವದಿ ಮತ್ತು ಅವರ ಹಿಂಬಾಲಕರು ಹಲ್ಲೆ ಮಾಡಿ ನಿಂದಿಸಿದ್ದಾರೆ. ಅವರ ವಿರುದ್ಧ ಈ ಕೂಡಲೇ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ನೇಕಾರರ ಹಿತರಕ್ಷಣಾ ಸಮಿತಿ ಅಧ್ಯಕ್ಷ ವೆಂಕಟೇಶ್ ತಿಳಿಸಿದರು.
ನಗರದ ಪ್ರವಾಸಿಮಂದಿರದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಜೂನ್ 17ರಂದು ವಿದ್ಯುತ್ ಖಾಸಗೀಕರಣದ ವಿರುದ್ಧ ಮಹಾಲಿಂಗಪುರ ತಾಲ್ಲೂಕು ಹೋರಾಟ ಸಮಿತಿಯ ಅಡಿಯಲ್ಲಿ ರೈತರು, ನೇಕಾರರು, ಕಾರ್ಮಿಕರು ಸೇರಿ ಹೆಸ್ಕಾಂ ಕಚೇರಿ ಮುಂದೆ ಹೋರಾಟ ನಡೆಸುತ್ತಿದ್ದ ಸಂದರ್ಭದಲ್ಲಿ, ಶಾಸಕರಾದ ಸಿದ್ದು ಸವದಿ ಮತ್ತು ಅವರ ಹಿಂಬಾಲಕರು ಕೇಂದ್ರ ಸರ್ಕಾರದ ವಿರುದ್ಧ ಪ್ರಸ್ತಾಪ ಮಾಡಬಾರದು ಎಂದು ಹೇಳಿ ನೇಕಾರ ಮುಖಂಡರಾದ ಶಿವಲಿಂಗ ಟರ್ಕಿ ಅವರ ಮೇಲೆ ದೈಹಿಕ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ತುಂಬಾ ಕೆಟ್ಟದಾಗಿ ನಡೆದುಕೊಂಡಿದ್ದಾರೆ. ನೇಕಾರ ಹೋರಾಟಗಾರರ ಮೇಲಿನ ಹಲ್ಲೆಯನ್ನು ನಾವು ಖಂಡಿಸುತ್ತೇವೆ. ತಕ್ಷಣ ಶಾಸಕರು ಈ ಬಗ್ಗೆ ಕ್ಷಮೆ ಕೇಳಬೇಕು. ಮತ್ತು ನೇಕಾರ ಮುಖಂಡರಿಗೆ ಸೂಕ್ತ ನ್ಯಾಯ ದೊರಕಿಸಿಕೊಡಬೇಕು ಎಂದು ಕರ್ನಾಟಕ ರಾಜ್ಯ ನೇಕಾರರ ಹಿತರಕ್ಷಣ ಸಮಿತಿ ಮತ್ತು ದೊಡ್ಡಬಳ್ಳಾಪುರ ಟೆಕ್ಸ್ ಟೈಲ್ ವೀವರ್ಸ್ ಅಸೋಸಿಯೇಷನ್ ಒತ್ತಾಯಿಸುತ್ತದೆ ಎಂದರು.
ನಮ್ಮ ಹೋರಾಟದ ಪಲವಾಗಿ ನೇಕಾರ ಮಳಿಗೆಗೆ ಶಾಸಕರು ಶಾಂಕುಸ್ಥಾಪನೆ ಮಾಡಿದ್ದು ಈ ಕಾಮಗಾರಿ ಶೀಘ್ರಗತಿಯಲ್ಲಿ ಮಾಡಿ ನೇಕಾರರ ಸೇವೆಗೆ ನೀಡಬೇಕು ಎಂದರು.
ಟಾಟಾ ಪವರ್ ಎಂಬ ಸಂಸ್ಥೆ ವಿದ್ಯುತ್ ಕ್ಷೇತ್ರವನ್ನು ತನ್ನ ವಶಕ್ಕೆ ಪಡೆಯಲು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ ಅರ್ಜಿ ಸಲ್ಲಿಸಿದೆ. ಸಾರ್ವಜನಿಕ ಸ್ವಾಮ್ಯದ ವಿದ್ಯುತ್ ವಿತರಣಾ ನಿಗಮಗಳ ಹಣಕಾಸು ಸ್ಥಿರತೆ, ಗ್ರಾಹಕರ ಹಿತಾಸಕ್ತಿ ರಕ್ಷಣೆ ಹಾಗೂ ಸಾರ್ವಜನಿಕ ವಿದ್ಯುತ್ ಮೂಲಸೌಕರ್ಯಗಳನ್ನು ರಕ್ಷಿಸಿಕೊಳ್ಳಲು ರಾಜ್ಯ ಸರ್ಕಾರಗಳಿಗೆ ಅವಕಾಶ ಕಲ್ಪಿಸಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಇಂಧನ ಇಲಾಖೆಯ ಜೊತೆ ಸಮಾಲೋಚಿಸದೇ, ವಿದ್ಯುತ್ ವಿತರಣೆ ಮಾಡುತ್ತಿರುವ ಸಾರ್ವಜನಿಕ ಸ್ವಾಮ್ಯದ ಕಂಪನಿಗಳ ಅಭಿಪ್ರಾಯ ಕೇಳದೇ ಖಾಸಗಿ ವಿದ್ಯುತ್ ವಿತರಣಾ ಕಂಪನಿ ನೇರವಾಗಿ ಲೈಸೆನ್ಸ್ ಗೆ ಅರ್ಜಿ ಸಲ್ಲಿಸಿರುವುದು ವಿದ್ಯುತ್ ಕಾಯ್ದೆ 2003 ರ ಗಂಭೀರ ಉಲ್ಲಂಘನೆ ಆಗಿದೆ. ಸಾರ್ವಜನಿಕ ವಿದ್ಯುತ್ ಶಕ್ತಿ ಮೂಲಸೌಕರ್ಯಗಳ ರಕ್ಷಣೆಗೆ, ಕೋಟ್ಯಂತರ ಬಡ ಗ್ರಾಹಕರ ಹಿತರಕ್ಷಣೆಗೆ, ಸಾರ್ವಜನಿಕ ವಿದ್ಯುತ್ ವಿತರಣಾ ನಿಗಮಗಳ ಹಣಕಾಸು ಸ್ಥಿರತೆ ರಕ್ಷಣೆಗೆ ಧಕ್ಕೆ ಉಂಟು ಮಾಡುವುದಲ್ಲದೇ ಗ್ರಾಮೀಣ ವಿದ್ಯುದೀಕರಣ ಹಾಗೂ ಸಾರ್ವತ್ರಿಕ ವಿದ್ಯುತ್ ಬಳಕೆಗೆ ಉತ್ತೇಜನ ದಂತಹ ಮಹತ್ವದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆಗಳ ಉದ್ದೇಶಕ್ಕೆ ವಿರುದ್ಧವಾಗಿದೆ. ಹಾಗಾಗಿ ಟಾಟಾ ಪವರ್ ಕಂಪನಿಯ ಅರ್ಜಿಯನ್ನು ಈ ಕೂಡಲೇ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವು ತಿರಸ್ಕರಿಸಬೇಕೆಂದು ಈ ಮೂಲಕ ಒತ್ತಾಯಿಸುತ್ತೇವೆ ಎಂದರು.
ಟೆಕ್ಸ್ ಟೈಲ್ ವೀವರ್ಸ್ ಅಸೋಸಿಯೇಷನ್ ಅಧ್ಯಕ್ಷ ವಿ ನರಸಿಂಹ ಮೂರ್ತಿ ಮಾತನಾಡಿ ವಿದ್ಯುತ್ ಕ್ಷೇತ್ರ ಖಾಸಗಿಕರಣವಾದರೆ ನೇಕಾರರಿಗೆ ಸಾಕಷ್ಟು ತೊಂದರೆಯಾಗಲಿದೆ. ಈಗಿರುವ ಉಚಿತ ವಿದ್ಯುತ್ ಯೋಜನೆಯಿಂದ ಸಂಕಷ್ಟದಲ್ಲಿರುವ ನೇಕಾರರಿಗೆ ಸ್ವಲ್ಪ ಮಟ್ಟಿನ ಉತ್ತೇಜನ ಸಿಕ್ಕಂತಾಗಿದೆ. ಒಂದು ವೇಳೆ ವಿದ್ಯುತ್ ಖಾಸಗಿಕರಣವಾದರೆ ನೇಕಾರಿಕೆ ಉದ್ಯಮ ಬಂದ್ ಆಗುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಹಾಗಾಗಿ ರಾಜ್ಯದ ನೇಕಾರ ಸಂಘಗಳು ಖಾಸಗಿಕಾರಣವನ್ನು ವಿರೋದಿಸುತ್ತದೆ. ಇದು ಬರೀ ನೇಕಾರರಿಗೆ ಮಾತ್ರವಲ್ಲ ರೈತರಿಗೆ ಸಾರ್ವಜನಿಕರಿಗೆ ಅನಾನುಕೂಲವಾಗಲಿದೆ. ಒಂದು ವೇಳೆ ವಿದ್ಯುತ್ ಖಾಸಗಿಕಾರಣಕ್ಕೆ ಸರ್ಕಾರಗಳು ಕೈ ಹಾಕಿದರೆ ರಾಜ್ಯದ ಎಲ್ಲಾ ನೇಕಾರ ಸಂಘಟನೆಗಳು ಉಗ್ರ ಹೋರಾಟ ಮಾಡಲಿವೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಆರ್. ಎಸ್. ಶ್ರೀನಿವಾಸ್, ಸಹ ಕಾರ್ಯದರ್ಶಿ ಎಂ ಮುನಿರಾಜು, ಮುಖಂಡರಾದ ರಾಮು, ಮುಖಂಡರಾದ ಬಾಬು, ಮಂಜುನಾಥ್, ಚೌಡಯ್ಯ ಸೇರಿದಂತೆ ನೇಕಾರ ಸಂಘಟನೆಗಳ ಮುಖಂಡರು ಹಾಜರಿದ್ದರು.



