ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಶಾಸಕ ಧೀರಜ್ ಮುನಿರಾಜ್ ರವರು ವರಮಹಾಲಕ್ಷ್ಮೀ ಹಬ್ಬ ಹಾಗೂ ಗೌರಿಹಬ್ಬದ ಪ್ರಯುಕ್ತ ಬೇರೆ ರಾಜ್ಯಗಳಿಂದ ಸೀರೆ ತರಿಸಿ ಇಲ್ಲಿನ ಮಹಿಳೆಯರಿಗೆ ಬಾಗೀನ ನೀಡುತ್ತಿದ್ದಾರೆ. ಅವರು ಇದನ್ನು ಕೊಡುವ ಉದ್ದೇಶ ಸ್ವಾಗತಾರ್ಹ. ಆದರೆ ಹೊರ ರಾಜ್ಯದ ಸೀರೆಯ ಬದಲಾಗಿ ಬಡ, ಮಧ್ಯಮ ವರ್ಗದ ನೇಕಾರರ ಸೀರೆಗಳನ್ನು ಖರೀದಿಸಿ ನೀಡುವುದರಿಂದ ಈ ಭಾಗದ ನೇಕಾರರಿಗೂ ಅನುಕೂಲವಾಗುತ್ತದೆ ಎಂದು ಕನ್ನಡ ಪಕ್ಷದ ರಾಜ್ಯ ಕಾರ್ಯದರ್ಶಿ ಡಿ.ಪಿ ಆಂಜನೇಯ ಆಗ್ರಹಿಸಿದರು.
ನಗರದ ಪ್ರವಾಸಿಮಂದಿರದಲ್ಲಿ ಕನ್ನಡ ಪಕ್ಷದ ವತಿಯಿಂದ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ ತಾಲೂಕಿನಲ್ಲಿ ಫೆಬ್ರವರಿ ತಿಂಗಳಲ್ಲಿ ಕೊಂಗಾಡಿಯಪ್ಪ ಅವರ ಹುಟ್ಟುಹಬ್ಬದ ಅಂಗವಾಗಿ ದೊಡ್ಡಬಳ್ಳಾಪುರ ಶಾಸಕರು ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ೩ ದಿನಗಳ ಸೀರೆ ಸಂತೆ ಕಾರ್ಯಕ್ರಮ ಆಯೋಜನೆ ಮಾಡಿದ್ದರು. ಈ ವೇಳೆ ನೇಕಾರರ ಸಮಸ್ಯೆಗಳ ಪರಿಹರಿಸಲು ಸದಾ ಜತೆಯಾಗಿರುವ ಬಗ್ಗೆ ಹೇಳಿದ್ದರು. ಆದರೆ ಈಗ ಶಾಸಕರು ತಾಲೂಕಿನಲ್ಲಿ ಸುಮಾರು 75 ಸಾವಿರದಷ್ಟು ಹೊರರಾಜ್ಯದ ಸೀರೆಗಳನ್ನು ಖರೀದಿಸಿ ದೊಡ್ಡಬಳ್ಳಾಪುರ ಕ್ಷೇತ್ರದ ಮಹಿಳೆಯರಿಗೆ ಬಾಗೀನ ನೀಡುತ್ತಿದ್ದಾರೆ. ಆದರೆ ಇಲ್ಲಿನ ನೇಕಾರರ ಸೀರೆಗಳನ್ನು ಖರೀದಿ ಮಾಡಿ ಬಾಗೀನ ನೀಡಿದ್ದರೆ ಸಂಕಷ್ಟದಲ್ಲಿರುವ ನೇಕಾರರಿಗೆ ಸಾಕಷ್ಟು ಅನುಕೂಲವಾಗುತ್ತದೆ. ಈಗಾಗಲೇ ರೇಪಿಯರ್ ಮಗ್ಗಗಳು ಹಾಗೂ ಸೂರತ್ ಸೀರೆಗಳ ಮಾರ್ಕೆಟಿಂಗ್ ದಾಳಿಯಿಂದಾಗಿ ಸ್ಥಳೀಯ ಸ್ಥಳೀಯ ನೇಕಾರರ ಬದುಕು ಬೀದಿಗೆ ಬೀಳುವಂತಾಗಿದೆ. ಇಂತಾ ಸಂದರ್ಭದಲ್ಲಿ ನಮ್ಮನ್ನಾಳುವ ಸರ್ಕಾರಗಳು, ಜನಪ್ರತಿನಿದಿನಗಳು ನೇಕಾರರ ಬೆಂಬಲಕ್ಕೆ ನಿಲ್ಲಬೇಕಿದೆ. ಪ್ರತಿ ವರ್ಷ ಹಬ್ಬಗಳಿಗೆ ಕ್ಷೇತ್ರದ ಮಹಿಳೆಯರಿಗೆ ಸೀರೆ ವಿತರಿಸುವ ಶಾಸಕರ ಜನಪರ ಕಾರ್ಯದ ಬಗ್ಗೆ ಎರಡು ಮಾತಿಲ್ಲ. ಆದರೆ ನೇಕಾರರ ಅದರಲ್ಲೂ ನಾಲ್ಕೈದು ಮಗ್ಗಗಲಿರುವ ತುಂಡು ಬಂಡವಾಳ ಹೊಂದಿರುವ ಸಣ್ಣ ನೇಕಾರರಿಂದ ಸೀರೆ ಖರೀದಿ ಮಾಡಿದ್ದರೆ ನೇಕಾರರಿಗೆ ಹಾಗೂ ನೇಯ್ಗೆ ಕೂಲಿ ಕಾರ್ಮಿಕರಿಗೆ ಸ್ವಲ್ಪ ಮಟ್ಟಿನ ಅನುಕೂಲ ಆಗುತ್ತಿತ್ತು. ಈ ನಿಟ್ಟಿನಲ್ಲಿ ಶಾಸಕರು ಬಡ ನೇಕಾರರ ಬಗ್ಗೆ ಗಮನ ಹರಿಸದಿರುವುದು ಬೇಸರದ ಸಂಗತಿಯಾಗಿದೆ ಎಂದು ಹೇಳಿದರು.
ಕನ್ನಡ ಪಕ್ಷದ ರಾಜ್ಯ ಉಪಾಧ್ಯಕ್ಷ ಸಂಜೀವ್ ನಾಯಕ್ ಮಾತನಾಡಿ, ನಾನಾ ಸಂದರ್ಭದಲ್ಲಿ ಶಾಸಕರು, ಮಾಜಿ ಶಾಸಕರು, ಮುಖಂಡರು ಮಹಿಳೆಯರಿಗೆ ಸೀರೆಗಳನ್ನು ಬಾಗಿನ ರೂಪದಲ್ಲಿ ನೀಡುತ್ತಾರೆ. ಇಂತಹ ಸಂದರ್ಭದಲ್ಲಿ ಇಲ್ಲಿನ ಸ್ಥಳೀಯ ನೇಕಾರರ ಸೀರೆಗಳನ್ನು ಖರೀದಿಸಿ ನೀಡಿದರೆ, ಸೀರೆಗಳು ಉತ್ತಮ ಗುಣಮಟ್ಟದಲ್ಲಿ ಇರುವ ಜತೆಗೆ ನೇಕಾರರಿಗೂ ಆರ್ಥಿಕವಾಗಿ ನೆರವಾಗುತ್ತದೆ. ಈಗಾಗಲೇ ಹೊರರಾಜ್ಯಗಳ ಸೀರೆಗಳ ಪೈಪೋಟಿ, ಕಚ್ಚಾವಸ್ತುಗಳ ಬೆಲೆ ಏರಿಕೆಯಿಂದ ನೇಕಾರರು ಸಂಕಷ್ಟದಲ್ಲಿದ್ದಾರೆ.ಇದರ ಪ್ರಭಾವ ನೇಯ್ಗೆ ಕೂಲಿ ಕಾರ್ಮಿಕರ ಮೇಲೂ ಬೀಳುತ್ತಿದೆ. ಶಾಸಕರು ಸ್ಥಳೀಯ ನೇಕಾರರಿಂದ ಸೀರೆ ಖರೀದಿಸಿ ಕ್ಷೇತ್ರದ ತಾಯಂದಿರಿಗೆ ಹೆಣ್ಣು ಮಕ್ಕಳಿಗೆ ವಿತರಿಸಿದ್ದರೆ ನಮ್ಮ ನೇಕಾರರೇ ನೆಯ್ದಿರುವ ಉತ್ತಮ ಗುಣ ಮಟ್ಟದ ಸೀರೆಗಳು ಕ್ಷೇತ್ರದ ಎಲ್ಲೆಡೆ ತಲುಪಿದಂತಾಗುತ್ತಿತ್ತು. ಇದರಿಂದ ಶಾಸಕರ ವರ್ಚಸ್ಸು ಇನ್ನಷ್ಟು ಹೆಚ್ಚುತ್ತಿತ್ತು. ಇದು ಬರೀ ಶಾಸಕರಿಗೆ ಮಾತ್ರವಲ್ಲ ಮಹಿಳೆಯರಿಗೆ ಸೀರೆ ವಿತರಿಸುವ ಕಾರ್ಯ ಮಾಡುವ ಎಲ್ಲರಿಗೂ ಅನ್ವಯವಾಗುತ್ತದೆ. ಈಗಲಾದರೂ ಜನಪ್ರತಿನಿಧಿಗಳು, ಸರ್ಕಾರ ನೇಕಾರರ ಪರ ನಿಂತು ಅವರ ಸೀರೆಗಳನ್ನು ಖರೀದಿಸುವ ಕೆಲಸ ಮಾಡಬೇಕು ಎಂದರು.
ಕನ್ನಡಪಕ್ಷ ಜಿಲ್ಲಾ ಕಾರ್ಯದರ್ಶಿ ಮುನಿ ಪಾಪಯ್ಯ, ತಾಲೂಕು ಕನ್ನಡ ಪಕ್ಷದ ಗೌರವಾಧ್ಯಕ್ಷ ರಂಗನಾಥ್, ತಾಲೂಕು ಅಧ್ಯಕ್ಷ ವೆಂಕಟೇಶ್, ಪ್ರದಾನ ಕಾರ್ಯದರ್ಶಿ ಬೋರೇಗೌಡ, ಸಂಘಟನಾ ಕಾರ್ಯದರ್ಶಿ ಪರಮೇಶ್,ಖಜಾಂಚಿ ಕೆ. ಎನ್. ಕುಮಾರ್,ಮುಖಂಡರಾದ ಮುನಿರಾಜು, ಮಹೇಶ್, ಮೂರ್ತಿ ನಾಯಕ್, ಕರಾಟೆ ಶ್ರೀನಿವಾಸ್, ಜೆ. ಪಿ. ರಾಜಣ್ಣ,ಸುಬ್ಬಣ್ಣ, ನಾಗರಾಜ್,ಮಂಜುನಾಥ್, ಮುನಿಸ್ವಾಮಿ, ಮಂಜಣ್ಣ ಮುರುಗ ಸೇರಿದಂತೆ ಕನ್ನಡಪಕ್ಷದ ಕಾರ್ಯಕರ್ತರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.



