ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅಪಾರ್ಟ್ಮೆಂಟ್ ಮಾಲೀಕರ ಹಕ್ಕುಗಳು, ಸಾಮಾನ್ಯ ಪ್ರದೇಶಗಳ (ಕಾಮನ್ ಏರಿಯಾ) ನಿರ್ವಹಣೆ ಹಾಗೂ ವಿವಾದಗಳ ಇತ್ಯರ್ಥಕ್ಕೆ ಸ್ಪಷ್ಟ ಕಾನೂನು ಚೌಕಟ್ಟು ಒದಗಿಸುವ ಮಹತ್ವದ ‘ಕರ್ನಾಟಕ ಅಪಾರ್ಟ್ಮೆಂಟ್ (ಮಾಲೀಕತ್ವ ಮತ್ತು ನಿರ್ವಹಣೆ) ಮಸೂದೆ-2026’ ಸೇರಿದಂತೆ ಮೂರು ವಿಧೇಯಕಗಳನ್ನು ಕರ್ನಾಟಕ ವಿಧಾನಸಭೆ ಅಂಗೀಕರಿಸಿದೆ.
ಸದನದಲ್ಲಿ ವಿರೋಧ ಪಕ್ಷಗಳ ಪ್ರತಿಭಟನೆಯ ನಡುವೆಯೇ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಈ ಮಸೂದೆಯನ್ನು ಮಂಡಿಸಿದರು. ವೇಗವಾಗಿ ಬೆಳೆಯುತ್ತಿರುವ ನಗರೀಕರಣ ಹಾಗೂ ಅಪಾರ್ಟ್ಮೆಂಟ್ ಸಂಸ್ಕೃತಿಯಿಂದ ಉಂಟಾಗುತ್ತಿರುವ ನಾನಾ ಸಮಸ್ಯೆಗಳಿಗೆ ಶಾಸನಬದ್ಧ ಪರಿಹಾರ ಕಲ್ಪಿಸಲು ಈ ಹೊಸ ಕಾನೂನು ಜಾರಿಗೆ ತರಲಾಗುತ್ತಿದೆ ಎಂದು ಸಚಿವರು ವಿವರಿಸಿದರು.
ಒಂದೇ ಕಾಯ್ದೆಯಡಿ ನಿವಾಸಿಗಳ ಸಂಘ: ಅಪಾರ್ಟ್ಮೆಂಟ್ ಮಾಲೀಕರ ಕಲ್ಯಾಣ ಸಂಘಗಳನ್ನು (RWA) ಇನ್ನು ಮುಂದೆ ಈ ಹೊಸ ಕಾನೂನಿನ ಅಡಿಯಲ್ಲೇ ಕಡ್ಡಾಯವಾಗಿ ನೋಂದಾಯಿಸಬೇಕು. ಬೇರೆ ಬೇರೆ ಕಾಯ್ದೆಗಳಡಿ ಸಂಘಗಳನ್ನು ರಚಿಸಿ ಗೊಂದಲ ಸೃಷ್ಟಿಸುವುದಕ್ಕೆ ಅವಕಾಶವಿರುವುದಿಲ್ಲ.
ಕಾಮನ್ ಏರಿಯಾ ಮತ್ತು ಹಸ್ತಾಂತರ: ರಸ್ತೆಗಳು, ಕ್ಲಬ್ಹೌಸ್ ಹಾಗೂ ತೆರೆದ ಜಾಗಗಳ ಮಾಲೀಕತ್ವದ ಗೊಂದಲಕ್ಕೆ ತೆರೆ ಎಳೆಯಲಾಗಿದ್ದು, ಬಿಲ್ಡರ್ಗಳಿಂದ ಸಂಘಕ್ಕೆ ಇವುಗಳನ್ನು ಹಸ್ತಾಂತರಿಸುವ ಪ್ರಕ್ರಿಯೆಗೆ ಸ್ಪಷ್ಟ ಮಾರ್ಗಸೂಚಿ ರೂಪಿಸಲಾಗಿದೆ.
ವಿವಾದ ಪರಿಹಾರಕ್ಕೆ ಸಕ್ಷಮ ಪ್ರಾಧಿಕಾರ: ನಿವಾಸಿಗಳು ಹಾಗೂ ಸಂಘಗಳ ನಡುವಿನ ವ್ಯಾಜ್ಯಗಳ ಇತ್ಯರ್ಥಕ್ಕೆ ಗ್ರಾಮ ಪಂಚಾಯಿತಿ, ಪುರಸಭೆ ಮತ್ತು ಮಹಾನಗರ ಪಾಲಿಕೆ ಮಟ್ಟದಲ್ಲಿ ಸಕ್ಷಮ ಪ್ರಾಧಿಕಾರಗಳನ್ನು ನೇಮಿಸಲಾಗುತ್ತದೆ. ಇದರ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಕೆಗೂ ಅವಕಾಶವಿದೆ.
ಶೇ. 75 ಮಾಲೀಕರ ಒಪ್ಪಿಗೆಯಿದ್ದರೆ ಪುನರ್ನಿರ್ಮಾಣ: ಹಳೆಯ ಅಪಾರ್ಟ್ಮೆಂಟ್ಗಳ ಮರುನಿರ್ಮಾಣಕ್ಕೆ ಶೇ. 75ರಷ್ಟು ಮಾಲೀಕರು ಸಮ್ಮತಿಸಿದರೆ ಅವಕಾಶ ನೀಡಲಾಗುವುದು. ಒಪ್ಪದ ಮಾಲೀಕರಿಗೆ ಆಸ್ತಿ ಮೌಲ್ಯದ ದುಪ್ಪಟ್ಟು ಪರಿಹಾರ ನೀಡಿ ಸ್ವಾಧೀನಪಡಿಸಿಕೊಳ್ಳುವ ವ್ಯವಸ್ಥೆ ಮಾಡಲಾಗಿದೆ.
ಖಾಸಗಿ ರಸ್ತೆಗಳು ಇನ್ನು ಸಾರ್ವಜನಿಕ ರಸ್ತೆ – ಎ-ಖಾತಾ ಪಡೆಯಲು ಅನುಕೂಲ ಇದರೊಂದಿಗೆ 'ಕರ್ನಾಟಕ ಮುನ್ಸಿಪಲ್ ಕಾರ್ಪೊರೇಷನ್ಗಳ (ತಿದ್ದುಪಡಿ) ಮಸೂದೆ' ಹಾಗೂ 'ಕರ್ನಾಟಕ ಮುನ್ಸಿಪಾಲಿಟಿಗಳ (ತಿದ್ದುಪಡಿ) ಮಸೂದೆ'ಗಳನ್ನು ಸಹ ಅಂಗೀಕರಿಸಲಾಗಿದೆ.
ಅನಧಿಕೃತ ಬಡಾವಣೆಗಳಲ್ಲಿ ಮೂಲ ಭೂಮಾಲೀಕರ ಹೆಸರಿನಲ್ಲೇ ಉಳಿದು ಶಿಥಿಲಗೊಂಡಿರುವ ಖಾಸಗಿ ರಸ್ತೆ ಮತ್ತು ಚರಂಡಿಗಳನ್ನು ಅಧಿಕಾರಿಗಳು ಇನ್ನು ಮುಂದೆ 'ಸಾರ್ವಜನಿಕ ರಸ್ತೆ' ಎಂದು ಘೋಷಿಸಬಹುದು. ರಸ್ತೆಗಳು ಅಧಿಕೃತವಾಗಿ ಪಾಲಿಕೆ/ಪುರಸಭೆಯ ಸ್ವತ್ತಾಗಿ ದಾಖಲಾದ ಬಳಿಕ, ನಿಯಮಗಳಿಗನುಸಾರ ಆ ಬಡಾವಣೆಗಳಲ್ಲಿನ ಮನೆ ಮತ್ತು ನಿವೇಶನಗಳಿಗೆ ಅಧಿಕೃತ ‘ಎ-ಖಾತಾ’ ಪಡೆಯಲು ಹಾದಿ ಸುಗಮವಾಗಲಿದೆ.



