ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಕರ್ನಾಟಕ ಸರ್ಕಾರದ ಕೃಷಿ ಇಲಾಖೆ ಹಾಗೂ ಚಿತ್ರದುರ್ಗ ಜಿಲ್ಲಾ ಪಂಚಾಯತ್ ವತಿಯಿಂದ ಹಿರಿಯೂರು ತಾಲ್ಲೂಕಿನಲ್ಲಿ 2026-27ನೇ ಸಾಲಿನ ಮುಂಗಾರು ಹಂಗಾಮಿಗೆ ‘ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ’ (ಬೆಳೆ ವಿಮೆ) ಯೋಜನೆಯನ್ನು ಜಾರಿಗೊಳಿಸಿ ಅಧಿಸೂಚನೆ ಹೊರಡಿಸಲಾಗಿದೆ. ಅರ್ಹ ಹಾಗೂ ಆಸಕ್ತ ರೈತರು ನಿಗದಿತ ಅವಧಿಯೊಳಗೆ ತಮ್ಮ ಬೆಳೆಗಳಿಗೆ ವಿಮೆ ನೋಂದಣಿ ಮಾಡಿಕೊಳ್ಳುವಂತೆ ಹಿರಿಯೂರು ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕ ಜೆ. ಅಶೋಕ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಳೆಗಳು ಮತ್ತು ವಿಮೆ ನೋಂದಣಿಗೆ ಕೊನೆಯ ದಿನಾಂಕಗಳು:
ಜುಲೈ 31, 2026: ಮುಸುಕಿನ ಜೋಳ (ನೀರಾವರಿ ಮತ್ತು ಮಳೆ ಆಶ್ರಿತ), ಜೋಳ (ನೀರಾವರಿ ಮತ್ತು ಮಳೆ ಆಶ್ರಿತ), ಸಜ್ಜೆ (ಮಳೆ ಆಶ್ರಿತ), ಸಾವೆ (ಮಳೆ ಆಶ್ರಿತ), ತೊಗರಿ (ಮಳೆ ಆಶ್ರಿತ), ಹುರುಳಿ (ಮಳೆ ಆಶ್ರಿತ), ಸೂರ್ಯಕಾಂತಿ (ನೀರಾವರಿ ಮತ್ತು ಮಳೆ ಆಶ್ರಿತ), ಎಳ್ಳು (ಮಳೆ ಆಶ್ರಿತ), ನೆಲಗಡಲೆ/ಶೇಂಗಾ (ನೀರಾವರಿ ಮತ್ತು ಮಳೆ ಆಶ್ರಿತ) ಹಾಗೂ ಹತ್ತಿ (ನೀರಾವರಿ ಮತ್ತು ಮಳೆ ಆಶ್ರಿತ) ಬೆಳೆಗಳ ನೋಂದಣಿಗೆ ಜುಲೈ 31 ಕಡೆಯ ದಿನವಾಗಿದೆ.
ಆಗಸ್ಟ್ 14, 2026: ಭತ್ತ (ನೀರಾವರಿ), ರಾಗಿ (ನೀರಾವರಿ ಮತ್ತು ಮಳೆ ಆಶ್ರಿತ) ಹಾಗೂ ನವಣೆ (ಮಳೆ ಆಶ್ರಿತ) ಬೆಳೆಗಳ ವಿಮೆ ನೋಂದಣಿಗೆ ಆಗಸ್ಟ್ 14 ಕೊನೆಯ ದಿನಾಂಕವಾಗಿರುತ್ತದೆ.
ಪ್ರಮುಖ ನಿಬಂಧನೆಗಳು ಮತ್ತು ಸೂಚನೆಗಳು:
ಬೆಳೆ ಸಾಲ ಪಡೆದ ರೈತರಿಗೆ ಕಡ್ಡಾಯ: ಬ್ಯಾಂಕುಗಳಲ್ಲಿ ಬೆಳೆ ಸಾಲ ಮಂಜೂರಾದ ಎಲ್ಲಾ ರೈತರನ್ನು ಕಡ್ಡಾಯವಾಗಿ ಈ ಯೋಜನೆಯಡಿ ಒಳಪಡಿಸಲಾಗುವುದು. ಒಂದು ವೇಳೆ ಸಾಲ ಪಡೆದ ರೈತರು ಈ ಯೋಜನೆಯಲ್ಲಿ ಭಾಗವಹಿಸಲು ಇಚ್ಛಿಸದಿದ್ದರೆ, ವಿಮೆ ನೋಂದಣಿಯ ಅಂತಿಮ ದಿನಾಂಕಕ್ಕಿಂತ 7 ದಿನ ಮುಂಚಿತವಾಗಿ ಬ್ಯಾಂಕ್ ವ್ಯವಸ್ಥಾಪಕರಿಗೆ ಲಿಖಿತವಾಗಿ ಮುಚ್ಚಳಿಕೆ ಪತ್ರ ನೀಡಬೇಕು. ಅಂತಹ ರೈತರನ್ನು ಯೋಜನೆಯಿಂದ ಕೈಬಿಡಲಾಗುವುದು.
ಫ್ರೂಟ್ಸ್ ಐಡಿ ಕಡ್ಡಾಯ: ಬೆಳೆ ವಿಮೆ ನೋಂದಣಿಗಾಗಿ ರೈತರು ಕಡ್ಡಾಯವಾಗಿ ಫ್ರೂಟ್ಸ್ ಐಡಿ ಹೊಂದಿರಬೇಕು.
ಅನುಷ್ಠಾನ ಸಂಸ್ಥೆ: ಚಿತ್ರದುರ್ಗ ಜಿಲ್ಲೆಗೆ IFFCO-TOKIO General Insurance Company ಅಧಿಕೃತ ವಿಮಾ ಅನುಷ್ಠಾನ ಸಂಸ್ಥೆಯಾಗಿದೆ.
ನೋಂದಣಿ ಸ್ಥಳ: ರೈತರು ತಮ್ಮ ವ್ಯಾಪ್ತಿಯ ಬ್ಯಾಂಕುಗಳಲ್ಲಿ ಅಥವಾ ಅನುಮೋದಿತ ಸಾರ್ವಜನಿಕ ಸೇವಾ ಕೇಂದ್ರಗಳಲ್ಲಿ ವಿಮೆ ನೋಂದಣಿ ಮಾಡಿಕೊಳ್ಳಬಹುದು.
ಸಂಸ್ಥೆಗಳ ಜವಾಬ್ದಾರಿ: ಆರ್ಥಿಕ ಸಂಸ್ಥೆಗಳು ಮತ್ತು ಸಾರ್ವಜನಿಕ ಸೇವಾ ಕೇಂದ್ರಗಳು ರೈತರ ಬೆಳೆ ವಿಮೆ ಪ್ರಸ್ತಾವನೆ ಹಾಗೂ ಕಂತನ್ನು ನಿಗದಿತ ಸಮಯದೊಳಗೆ ವಿಮಾ ಸಂಸ್ಥೆಗೆ ವರ್ಗಾಯಿಸಬೇಕು. ನೋಂದಣಿ ಪ್ರಕ್ರಿಯೆಯಲ್ಲಿ ಸಂಸ್ಥೆಗಳ ನಿರ್ಲಕ್ಷ್ಯದಿಂದ ಯಾವುದೇ ಲೋಪದೋಷ ಉಂಟಾಗಿ ವಿಮೆ ಪರಿಹಾರಕ್ಕೆ ತೊಂದರೆಯಾದರೆ, ಅದಕ್ಕೆ ಆಯಾ ಸಂಸ್ಥೆಗಳೇ ನೇರ ಹೊಣೆಯಾಗುತ್ತವೆ.
ಸಹಾಯಕ ಕೃಷಿ ನಿರ್ದೇಶಕರ ಮನವಿ:
"ಕೊನೆಯ ಕ್ಷಣದಲ್ಲಿ ನೋಂದಣಿ ಮಾಡಲು ಮುಂದಾದಲ್ಲಿ ಜನದಟ್ಟಣೆಯಿಂದಾಗಿ ತಾಂತ್ರಿಕ ದೋಷಗಳು ಅಥವಾ ತಪ್ಪುಗಳು ನಡೆಯುವ ಸಾಧ್ಯತೆ ಇರುತ್ತದೆ. ಆದ್ದರಿಂದ ರೈತ ಬಾಂಧವರು ಕೊನೆಯ ದಿನದವರೆಗೆ ಕಾಯದೆ ಸಕಾಲದಲ್ಲಿ ವಿಮೆ ನೋಂದಣಿ ಮಾಡಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ತಮ್ಮ ಹೋಬಳಿ ಮಟ್ಟದ ಕೃಷಿ ಅಧಿಕಾರಿಗಳು, ರೈತ ಸಂಪರ್ಕ ಕೇಂದ್ರ ಅಥವಾ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರನ್ನು ಸಂಪರ್ಕಿಸಬಹುದು."



