ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕೆಪಿಎಸ್ಸಿ ಅಕ್ರಮ ಹಾಗೂ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಮೇಲಿನ ಇಡಿ ದಾಳಿ ವರದಿ ಮಾಡುವ ನೆಪದಲ್ಲಿ ರಾಷ್ಟ್ರೀಯ ಮಾಧ್ಯಮಗಳಾದ 'ಇಂಡಿಯಾ ಟುಡೇ' ಹಾಗೂ 'ಸಿಎನ್ಎನ್-ನ್ಯೂಸ್ 18' ಕಾಂಗ್ರೆಸ್ ಸರ್ಕಾರ ಮತ್ತು ಮುಖ್ಯಮಂತ್ರಿಗಳ ಭಾವಚಿತ್ರ ಬಳಸಿ ಸುಳ್ಳು ಬಿಂಬಿಸುತ್ತಿವೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಕಟುವಾಗಿ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಎಕ್ಸ್ (ಟ್ವಿಟರ್) ಮೂಲಕ ಪ್ರತಿಕ್ರಿಯಿಸಿರುವ ಅವರು, ಮಾಧ್ಯಮಗಳ ಪಕ್ಷಪಾತದ ವರದಿಗಾರಿಕೆಯನ್ನು ತೀವ್ರವಾಗಿ ತಖ್ಖೆಗೊಳಿಸಿದ್ದಾರೆ.
ಬಿಜೆಪಿ ನೇಮಕಾತಿ ಮುಚ್ಚಿಟ್ಟ ಮಾಧ್ಯಮಗಳು: ಕೆಪಿಎಸ್ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಹಾಗೂ ಅವರ ಸಮಿತಿಯ ಸದಸ್ಯರನ್ನು ನೇಮಕ ಮಾಡಿದ್ದೇ ಹಿಂದಿನ ಬಿಜೆಪಿ ಸರ್ಕಾರ. ಆದರೆ ವರದಿ ಮಾಡುವಾಗ ಈ ಸತ್ಯವನ್ನು ಮಾಧ್ಯಮಗಳು ಜಾಣತನದಿಂದ ಮರೆಮಾಚಿವೆ ಎಂದು ಖರ್ಗೆ ದೂರಿದ್ದಾರೆ.
ದಿವಂಗತರ ಚಿತ್ರ ಬಳಸಿ ಬೇಜವಾಬ್ದಾರಿ: 'ಸಿಎನ್ಎನ್-ನ್ಯೂಸ್ 18' ವಾಹಿನಿಯು ಕೆಪಿಎಸ್ಸಿ ಸಾಹುಕಾರ್ ಅವರ ಬದಲಿಗೆ ದಿವಂಗತ ಶಾಮನೂರು ಶಿವಶಂಕರಪ್ಪ ಅವರ ಭಾವಚಿತ್ರವನ್ನು ಪ್ರಸಾರ ಮಾಡಿದೆ. ಗೂಗಲ್ನಲ್ಲಿ ಕನಿಷ್ಠ ಹುಡುಕಾಟ ನಡೆಸುವ ಸೌಜನ್ಯವೂ ಇಲ್ಲದೆ ಈ ರೀತಿ ಮಾಡಿರುವುದು ಅತ್ಯಂತ ಅವಮಾನಕರ ಎಂದು ಖಂಡಿಸಿದ್ದಾರೆ.
ಅಸಲಿ ಪತ್ರಕರ್ತ ಧರ್ಮವಲ್ಲ: ಇದು ನೈಜ ಪತ್ರಕರ್ತಧರ್ಮವಲ್ಲ; ಬದಲಿಗೆ ಆಯ್ದ ಸತ್ಯಗಳು ಹಾಗೂ ದಾರಿ ತಪ್ಪಿಸುವ ದೃಶ್ಯಾವಳಿಗಳ ಮೂಲಕ ಸೃಷ್ಟಿಸಲಾದ ರಾಜಕೀಯ ಪ್ರೇರಿತ ನಿರೂಪಣೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಪೂರ್ಣ ಸತ್ಯಗಳ ಮೂಲಕ ಸರ್ಕಾರದ ವರ್ಚಸ್ಸಿಗೆ ಧಕ್ಕೆ ತರಲು ಯತ್ನಿಸುತ್ತಿರುವ ಮಾಧ್ಯಮಗಳ ನಡೆಗೆ ಸಚಿವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.



