ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತಾಲೊಕಿನ ಮಧುರನಹೊಸಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ 2025-26ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆ ಸಂಘದ ಆವರಣದಲ್ಲಿ ನಡೆಯಿತು.
ಸಭೆಯಲ್ಲಿ ವಿಸ್ತರಣಾಧಿಕಾರಿ ಕೆ. ಕುಸುಮ ಅವರು ಸಂಘದ ಆಡಳಿತಾತ್ಮಕ ಖರ್ಚು-ವೆಚ್ಚ, ಖರೀದಿ-ವ್ಯಾಪಾರ ಹಾಗೂ ಆರ್ಥಿಕ ಸ್ಥಿತಿಗತಿ ಕುರಿತು ವರದಿ ಮಂಡಿಸಿದರು. ಖರೀದಿ-ವ್ಯಾಪಾರದಿಂದ ₹3,57,198 ಹಾಗೂ ಇತರೆ ಮೂಲಗಳಿಂದ ₹18,177 ಲಾಭ ಗಳಿಸಿದ್ದು, ಒಟ್ಟಾರೆ ಸಂಘವು 2025-26ನೇ ಸಾಲಿನಲ್ಲಿ ₹3,75,385 ನಿವ್ವಳ ಲಾಭ ದಾಖಲಿಸಿದೆ ಎಂದು ತಿಳಿಸಿದರು. ಅಲ್ಲದೆ 2026-27ನೇ ಸಾಲಿನ ಅಂದಾಜು ಬಜೆಟ್ನ್ನು ಸಭೆಯ ಮುಂದೆ ಮಂಡಿಸಲಾಯಿತು.
ಬೆಂಗಳೂರು ಹಾಲು ಒಕ್ಕೂಟದ ದೊಡ್ಡಬಳ್ಳಾಪುರ ಶಿಬಿರದ ಉಪ ವ್ಯವಸ್ಥಾಪಕ ಡಾ. ಎಲ್. ಬಿ. ನಾಗರಾಜು ಮಾತನಾಡಿ, ರೈತರು ಉತ್ತಮ ಗುಣಮಟ್ಟದ ಹಾಲು ಉತ್ಪಾದನೆಗೆ ಆದ್ಯತೆ ನೀಡಬೇಕು. ಹಸುಗಳಿಗೆ ಸಮರ್ಪಕ ಪೋಷಕಾಂಶಯುಕ್ತ ಆಹಾರ, ಆರೋಗ್ಯ ನಿರ್ವಹಣೆ ಹಾಗೂ ಹಾಲು ಉತ್ಪಾದನೆಯಲ್ಲಿ ಎದುರಾಗುವ ಸಮಸ್ಯೆಗಳ ಪರಿಹಾರದ ಕುರಿತು ಸಮಗ್ರ ಮಾಹಿತಿ ನೀಡಿದರು.
2025-26ನೇ ಸಾಲಿನಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಹಾಲು ಸರಬರಾಜು ಮಾಡಿದ ಉತ್ಪಾದಕರಿಗೆ ಬಹುಮಾನ ವಿತರಿಸಲಾಯಿತು. ಮಂಜುಳ ಸುರೇಶ್ ಪ್ರಥಮ ಹಾಗೂ ರಾಮಚಂದ್ರಯ್ಯ ದ್ವಿತೀಯ ಬಹುಮಾನ ಪಡೆದರು. ಉತ್ತಮ ಗುಣಮಟ್ಟದ ಹಾಲು ಸರಬರಾಜು ಮಾಡಿದ ವಿಭಾಗದಲ್ಲಿ ರಾಮಕೃಷ್ಣಯ್ಯ ಪ್ರಥಮ ಹಾಗೂ ಡಿ. ನಾಗರಾಜು ದ್ವಿತೀಯ ಬಹುಮಾನ ಪಡೆದರು.
ಸಭೆಯಲ್ಲಿ ಸಂಘದ ಅಧ್ಯಕ್ಷ ಡಿ. ನಾಗರಾಜು, ಉಪಾಧ್ಯಕ್ಷ ಪಿ. ತ್ಯಾಗರಾಜು, ನಿರ್ದೇಶಕರಾದ ಗೋವಿoದಪ್ಪ, ಡಿ. ಮುನಿಯಪ್ಪ, ಎಂ.ಆರ್. ಕುಮಾರ್, ಡಿ. ಶ್ರೀನಿವಾಸ್, ಕಮಲಮ್ಮ, ಜಯರಾಮಯ್ಯ, ಮುಖ್ಯ ಕಾರ್ಯನಿರ್ವಾಹಕ ಎಂ. ಉಮೇಶ್, ಹಾಲು ಪರೀಕ್ಷಕ ಬಿ. ಚಂದ್ರೇಗೌಡ, ಗ್ರಾಮಸ್ಥರಾದ ಗಂಗಮುತ್ತಯ್ಯ, ಕೆಂಪೇಗೌಡ, ಗಂಗನರಸಯ್ಯ ಹಾಗೂ ರೈತ ಮಹಿಳೆಯರು, ಯುವಕರು ಸೇರಿದಂತೆ ಹಲವರು ಉಪಸ್ಥಿತರಿದ್ದರು.



