ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದ ಹೆಸರಿನಲ್ಲಿ ನಡೆಯುತ್ತಿರುವ ವಿವಾದ ಇದೀಗ ಆಣೆ-ಪ್ರಮಾಣದ ಹಂತಕ್ಕೆ ತಲುಪಿದೆ. ದೇವಸ್ಥಾನಕ್ಕೆ ಕಳಂಕ ತರಲು ತಾವು ಹಣಕಾಸಿನ ನೆರವು ನೀಡಿದ್ದೇವೆ ಎಂಬ ಆರೋಪವನ್ನು ತಳ್ಳಿಹಾಕಿರುವ ಚಿತ್ರದುರ್ಗದ ಸಾಮಾಜಿಕ ಕಾರ್ಯಕರ್ತೆ ಎನ್. ರಮಾ ನಾಗರಾಜ್, ಈ ಕುರಿತು ಧರ್ಮಸ್ಥಳದ ಸನ್ನಿಧಿಯಲ್ಲೇ ಆಣೆ-ಪ್ರಮಾಣ ಮಾಡಲು ತಾವು ಆಗಮಿಸುತ್ತಿರುವುದಾಗಿ ಪ್ರಕಟಿಸಿದ್ದಾರೆ.
ಈ ಕುರಿತು ಜೂನ್ 21ರಂದು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ತಮ್ಮ ಮೇಲಿನ ಆರೋಪಗಳಿಗೆ ನೇರ ಸವಾಲುಗಳನ್ನು ಹಾಕಿದ್ದಾರೆ.
ಆರೋಪ ಮುಖಾಮುಖಿಗೆ ಸವಾಲು: "ದೇವಸ್ಥಾನಕ್ಕೆ ಕಳಂಕ ತರಲು ನಾನು ಹಣಕಾಸಿನ ಸಹಾಯ ಮಾಡಿದ್ದೇನೆ" ಎಂದು ಚಿನ್ನಯ್ಯ ಎಂಬುವವರು ಮಾಡಿರುವ ಆರೋಪ ಸಂಪೂರ್ಣ ಸುಳ್ಳು. ಅವರ ಆರೋಪದಲ್ಲಿ ಎಳ್ಳಷ್ಟಾದರೂ ಸತ್ಯವಿದ್ದರೆ ಶ್ರೀ ಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲೇ ಎಲ್ಲರೆದುರು ಪ್ರಮಾಣ ಮಾಡಿ ಹೇಳಲಿ ಎಂದು ರಮಾ ನಾಗರಾಜ್ ಸವಾಲು ಹಾಕಿದ್ದಾರೆ.
ಕಾನೂನು ಹೋರಾಟ ಮತ್ತು ಹೈಕೋರ್ಟ್ ಮೊರೆ:
ಧರ್ಮಸ್ಥಳ ಸಂಸ್ಥೆಯು ಎಸ್ಕೆಡಿಆರ್ಡಿಪಿ ಹೆಸರಿನಲ್ಲಿ ನಡೆಸುತ್ತಿದೆ ಎನ್ನಲಾದ ಬಡ್ಡಿ ದಂಧೆಗೆ ಕಡಿವಾಣ ಹಾಕಲು ತಾವು ಕಾನೂನು ಮತ್ತು ಸಾಮಾಜಿಕ ಹೋರಾಟ ನಡೆಸುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಇದೇ ದ್ವೇಷಕ್ಕೆ ಚಿನ್ನಯ್ಯ ತಮ್ಮ ವಿರುದ್ಧ ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದು, ಸದರಿ ಅರ್ಜಿಯಲ್ಲಿ ಪ್ರತಿವಾದಿಯಾಗಿ ಸೇರ್ಪಡೆಗೊಳ್ಳಲು ತಾವು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುತ್ತಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಜಿಲ್ಲಾ ನ್ಯಾಯಾಲಯಗಳಿಂದ ಲಭ್ಯವಾಗಿರುವ ದಾಖಲೆಗಳು ದಿಗ್ಭ್ರಮೆ ಮೂಡಿಸುವಂತಿವೆ ಎಂದೂ ಅವರು ಹೇಳಿದ್ದಾರೆ.
ಬಿಜೆಪಿ ನಾಯಕರಿಗೆ ಮನವಿ: ಚಿನ್ನಯ್ಯನ ಆರೋಪಗಳನ್ನು ಪುನರುಚ್ಚರಿಸಿ, ಬೇರೆ ಕಾರಣಗಳಿಗಾಗಿ ಧರ್ಮಸ್ಥಳಕ್ಕೆ ಆಣೆ-ಪ್ರಮಾಣ ಮಾಡಲು ಬರುತ್ತಿರುವ ಬಿಜೆಪಿ ಶಾಸಕರು ಮತ್ತು ನಾಯಕರು, ಚಿನ್ನಯ್ಯನನ್ನು ತಮ್ಮೊಂದಿಗೆ ಕರೆತಂದು ಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ ನಿಲ್ಲಿಸುವ ಔದಾರ್ಯ ತೋರಬೇಕು ಎಂದು ವಿನಂತಿಸಿದ್ದಾರೆ.
ವೀರೇಂದ್ರ ಹೆಗ್ಗಡೆಯವರಿಗೆ ನೇರ ಸವಾಲು: "ನನ್ನ ವಿರುದ್ಧ ಚಿನ್ನಯ್ಯನ ಮುಖಾಂತರ ಸುಳ್ಳು ರಿಟ್ ಅರ್ಜಿ ಸಲ್ಲಿಕೆಗೆ ತಾವು ಕಾರಣಕರ್ತರಲ್ಲ" ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆ ಹಾಗೂ ಶ್ರೀ ಹರ್ಷೇಂದ್ರ ಕುಮಾರ್ ಅವರು ಶ್ರೀ ಮಂಜುನಾಥ ಸ್ವಾಮಿಯ ಮೇಲೆ ಪ್ರಮಾಣ ಮಾಡಿ ಹೇಳಲಿ ಎಂದು ರಮಾ ನಾಗರಾಜ್ ಮುಕ್ತ ಸವಾಲು ಒಡ್ಡಿದ್ದಾರೆ.
"ಶ್ರೀ ಮಂಜುನಾಥ ಸ್ವಾಮಿಯ ಆಶೀರ್ವಾದದಿಂದ ಚಿನ್ನಯ್ಯನ ಬೃಹತ್ ನಾಟಕ ಹಾಗೂ ಅದರ ಹಿಂದಿರುವವರನ್ನು ಬಯಲಿಗೆಳೆಯುವ ಸಂಪೂರ್ಣ ನಂಬಿಕೆ ನನಗಿದೆ. ಹೈಕೋರ್ಟ್ ಮೇಲೆ ನನಗೆ ಅಚಲ ವಿಶ್ವಾಸವಿದೆ" ಎಂದು ರಮಾ ನಾಗರಾಜ್ ತಮ್ಮ ಪ್ರಕಟಣೆಯಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.



