ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬಿಜೆಪಿ ನಾಯಕ ಡಿ.ಎನ್. ಜೀವರಾಜ್ ಅವರಿಗೆ ನ್ಯಾಯಾಲಯದ ಆದೇಶದಂತೆ ಮರು ಎಣಿಕೆಯಲ್ಲಿ ಜಯ ಲಭಿಸಿರುವುದನ್ನು ಉಲ್ಲೇಖಿಸಿರುವ ವಿಜಯೇಂದ್ರ, ಈ ಪ್ರಕರಣವು ಕಾಂಗ್ರೆಸ್ನ "ಬ್ಯಾಲೆಟ್ ಪೇಪರ್" ಹಠದ ಹಿಂದಿನ ಅಸಲಿ ಉದ್ದೇಶವನ್ನು ಬಯಲು ಮಾಡಿದೆ ಎಂದು ಟೀಕಿಸಿದ್ದಾರೆ.
ಚುನಾವಣಾ ಅಕ್ರಮದ ಬಯಲು: ಅಂಚೆ ಮತಗಳ (Postal Ballots) ಎಣಿಕೆಯಲ್ಲಿ ನಡೆದ ಲೋಪ ಹಾಗೂ ಕಾಂಗ್ರೆಸ್ಸಿಗರ ಕೈವಾಡದಿಂದಾಗಿ ಜೀವರಾಜ್ ಅವರು ಶಾಸಕತ್ವದಿಂದ ವಂಚಿತರಾಗಿದ್ದರು. ನ್ಯಾಯಾಲಯದ ಹಸ್ತಕ್ಷೇಪವಿಲ್ಲದಿದ್ದರೆ ಈ ಕಪ್ಪುಮಾರ್ಗದ ಅಕ್ರಮ ಬಯಲಿಗೆ ಬರುತ್ತಿರಲಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಪ್ರಜಾಪ್ರಭುತ್ವದ ದುರಂತ: ಜನಾದೇಶದಂತೆ ಡಿ.ಎನ್. ಜೀವರಾಜ್ ಅವರಿಗೆ ಸಿಗಬೇಕಿದ್ದ ಮೂರು ವರ್ಷಗಳ ಶಾಸಕತ್ವದ ಅವಧಿ ನಷ್ಟವಾಗಿದೆ. ಇದು ಕೇವಲ ವೈಯಕ್ತಿಕ ನಷ್ಟವಲ್ಲ, ಬದಲಿಗೆ ಶೃಂಗೇರಿ ಕ್ಷೇತ್ರದ ಮತದಾರರಿಗೆ ಮಾಡಿದ ಅವಮಾನ ಎಂದು ವಿಜಯೇಂದ್ರ ಬಣ್ಣಿಸಿದ್ದಾರೆ.
ಸರ್ಕಾರಿ ಯಂತ್ರದ ದುರ್ಬಳಕೆ: ಮರು ಎಣಿಕೆಯ ನಂತರವೂ ಜೀವರಾಜ್ ಅವರು ವಿಧಾನಸಭೆ ಪ್ರವೇಶಿಸದಂತೆ ತಡೆಯಲು ರಾಜ್ಯ ಸರ್ಕಾರವು ಈಗಲೂ ಹುನ್ನಾರ ನಡೆಸುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಪೀಕರ್ ಅವರಿಗೆ ಮನವಿ: ವಿಧಾನಸಭಾಧ್ಯಕ್ಷರಾದ ಯು.ಟಿ. ಖಾದರ್ ಅವರು ಯಾವುದೇ ಪಕ್ಷ ರಾಜಕಾರಣದ ಒತ್ತಡಕ್ಕೆ ಮಣಿಯಬಾರದು. ಸಾಂವಿಧಾನಿಕ ಪೀಠದ ಘನತೆಯನ್ನು ಎತ್ತಿ ಹಿಡಿಯಲು ಕೂಡಲೇ ಡಿ.ಎನ್. ಜೀವರಾಜ್ ಅವರಿಗೆ ಪ್ರಮಾಣ ವಚನ ಬೋಧಿಸಬೇಕು ಎಂದು ಒತ್ತಾಯಿಸಿದ್ದಾರೆ.
"ಜಟ್ಟಿ ಕೆಳಗೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ":
ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳ ನಿಲುವನ್ನು ಟೀಕಿಸಿರುವ ವಿಜಯೇಂದ್ರ, "ಮತಗಳನ್ನು ತಿದ್ದಲಾಗಿದೆ ಎಂಬ ಕಾಂಗ್ರೆಸ್ ನಾಯಕರ ವಾದವು ಸೋಲನ್ನು ಒಪ್ಪಿಕೊಳ್ಳದ ಭಂಡತನವಾಗಿದೆ. ಮರು ಎಣಿಕೆಗೂ ಮುನ್ನ ಇವರು ಏಕೆ ಆಕ್ಷೇಪ ಎತ್ತಲಿಲ್ಲ?" ಎಂದು ಪ್ರಶ್ನಿಸಿದ್ದಾರೆ.


