ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಸಮಾಜದಲ್ಲಿ ಅಸ್ಪೃಶ್ಯತೆ ಆಚರಣೆಯು ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಕಾನೂನುಬಾಹಿರ ಅಪರಾಧವಾಗಿದೆ. ಈ ಸಾಮಾಜಿಕ ಪಿಡುಗು ಸಂಪೂರ್ಣವಾಗಿ ತೊಲಗಲಿ ಎಂದು ಸಮಾಜ ಕಲ್ಯಾಣ ಇಲಾಖೆ ಸಿ ಎನ್ ಶೇಷಾದ್ರಿ ಹೇಳಿದರು.
ಸಮಾಜ ಕಲ್ಯಾಣ ಇಲಾಖೆ ಹಾಗೂ ಇಂಚರ ಸಾಂಸ್ಕೃತಿಕ ಕಲಾ ಸಂಘ ದೊಡ್ಡಬಳ್ಳಾಪುರ ಇವರ ಸಹಯೋಗದೊಂದಿಗೆ ಕೊನಘಟ್ಟ, ಬಾಶೆಟ್ಟಿಹಳ್ಳಿ, ದೊಡ್ಡಬಳ್ಳಾಪುರ ನಗರದ ತೇರ ಬೀದಿ, ಅರಳು ಮಲ್ಲಿಗೆ, ಚಿಕ್ಕಮಧುರೆ ಗ್ರಾಮಗಳಲ್ಲಿ ಅಸ್ಪೃಶ್ಯತೆ ಆಚರಣೆ ಕುರಿತಾಗಿ ಜನಜಾಗೃತಿ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ಅಸ್ಪೃಶ್ಯತೆ ಎನ್ನುವುದು ಸಮಾಜದಲ್ಲಿ ಕೆಲವು ಜನರನ್ನು 'ಅಶುದ್ಧ' ಅಥವಾ 'ಕೀಳು' ಎಂದು ಪರಿಗಣಿಸಿ ಅವರನ್ನು ದೂರವಿಡುವ ಹಳೆಯ ಮತ್ತು ಕೆಟ್ಟ ಸಾಮಾಜಿಕ ಪದ್ಧತಿಯಾಗಿದೆ. ಇದು ಮೂಲತಃ ಜಾತಿ ವ್ಯವಸ್ಥೆಯಲ್ಲಿ ಹಲವಾರು ವರ್ಷಗಳಿಂದ ವಿಷ ವೃಕ್ಷದಂತೆ ಅರಳಿ ಕೊಂಡಿರುವಂತಹ ಸಾಮಾಜಿಕ ಪಿಡುಗಾಗಿದೆ. ಸಮಾಜದಲ್ಲಿ ಅಸಮಾನತೆಯನ್ನು ಉಂಟು ಮಾಡಿದ ಅಸ್ಪೃಶ್ಯತೆಯನ್ನು ಬೇರು ಸಮೇತ ಕೀಳಲು ಶಿಕ್ಷಣ ಹೋರಾಟ ಹಾಗು ಜಾಗೃತಿ ಬಹಳ ಮುಖ್ಯ. ಆದ್ದರಿಂದ ನಮ್ಮ ಗ್ರಾಮಾಂತರ ಪ್ರದೇಶಗಳಲ್ಲಿ ಇಂತಹ ಪಿಡುಗನ್ನು ಹೋಗಲಾಡಿಸಲು ಬೀದಿ ನಾಟಕ ಹಾಗು ಜಾಗೃತಿ ಗೀತೆ ಗಳು ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ ಅಸ್ಪೃಶ್ಯತೆ ಯನ್ನು ಹೋಗಲಾಡಿಸಿ ಸಮಾನತೆಯನ್ನು ಕಾಪಾಡಲು ಸಾಧ್ಯವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಇಲಾಖೆಯ ವ್ಯವಸ್ಥಾಪಕರಾದ ನರಸಿಂಹಮೂರ್ತಿ, ಸಿಬ್ಬಂದಿಗಳಾದ ನವೀನ್, ಸಂದೀಪ್ ಹಾಗೂ ಇಂಚರ ಸಾಂಸ್ಕೃತಿಕ ಕಲಾ ಸಂಘದ ಅಧ್ಯಕ್ಷರಾದ ಶಿವಶಂಕರ್, ನಿರ್ದೇಶಕರಾದ ಬಚ್ಚಹಳ್ಳಿ ನಾಗರಾಜು, ಗೌತಮ್ ವಿ.ಎಮ್. ಮತ್ತು ಸಂಘದ ಕಲಾವಿದರು ಉಪಸ್ಥಿತರಿದ್ದರು.
“ಅಸ್ಪೃಶ್ಯತೆ ಎಂದರೆ ಸಮಾಜದಲ್ಲಿ ಕೆಲವು ಜನರನ್ನು ಜಾತಿಯ ಆಧಾರದ ಮೇಲೆ ಕೀಳು ಎಂದು ಪರಿಗಣಿಸಿ ಅವರನ್ನು ಮುಖ್ಯವಾಹಿನಿಯಿಂದ ದೂರವಿಡುವ ಮತ್ತು ಬಹಿಷ್ಕರಿಸುವ ಒಂದು ಅಮಾನತೆ ಸಾಮಾಜಿಕ ಪಿಡುಗು. ಇದು ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಸಮಾಜದ ಶಾಂತಿ ಹಾಗೂ ಸಮಾನತೆಗೆ ದೊಡ್ಡ ಕಳಂಕವಾಗಿದೆ”.
ಶಿವಶಂಕರ್ ಅಧ್ಯಕ್ಷರು, ಇಂಚರ ಸಾಂಸ್ಕೃತಿಕ ಕಲಾ ಸಂಘ.



