ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ‘ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್ಗಾರ್ ಅಂಡ್ ಆಜೀವಿಕ ಮಿಷನ್ (ಗ್ರಾಮೀಣ) (ವಿಬಿಜಿರಾಮ್ಜಿ) ಯೋಜನೆಯಡಿ ಅರ್ಹ ಗ್ರಾಮೀಣ ಅಕುಶಲ ಕುಟುಂಬಕ್ಕೆ ವರ್ಷಕ್ಕೆ ೧೨೫ ದಿನಗಳ ಕಡ್ಡಾಯ ಉದ್ಯೋಗಾವಕಾಶ ಕಲ್ಪಿಸಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಸಿಇಓ ಡಾ.ಎಸ್.ಆಕಾಶ್ ಹೇಳಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಜಿಲ್ಲೆಯ ಎಲ್ಲಾ ಅನುಷ್ಠಾನ ಅಧಿಕಾರಿಗಳು, ಪಿಡಿಒಗಳು ಹಾಗೂ ತಾಂತ್ರಿಕ ಸಿಬ್ಬಂದಿಗಳ ಒಂದು ದಿನದ ‘ವಿಬಿಜಿರಾಮ್ಜಿ’ ಯೋಜನೆ ಜಿಲ್ಲಾಮಟ್ಟದ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ವಿಬಿಜಿರಾಮ್ಜಿ ಯೋಜನೆ ಜುಲೈ ೧ ರಿಂದ ಜಿಲ್ಲೆಯಾದ್ಯಂತ ಅನುಷ್ಠಾನಗೊಳ್ಳಲಿದೆ. ಸ್ವಯಂಪ್ರೇರಿತವಾಗಿ ಅಕುಶಲ ಕೆಲಸಕ್ಕಾಗಿ ಬೇಡಿಕೆ ಸಲ್ಲಿಸುವ ಗ್ರಾಮೀಣ ವಯಸ್ಕ ಸದಸ್ಯರ ಕುಟುಂಬಕ್ಕೆ ಒಂದು ಆರ್ಥಿಕ ವರ್ಷದಲ್ಲಿ ೧೨೫ ದಿನಗಳ ಕಡ್ಡಾಯ ಉದ್ಯೋಗ ಖಾತ್ರಿಯನ್ನು ಈ ಯೋಜನೆಯಡಿ ನೀಡಲಾಗುವುದು. ಸಮಗ್ರ ಡಿಜಿಟಲ್ ವ್ಯವಸ್ಥೆ ಮೂಲಕ ಆಡಳಿತ ಹೊಣೆಗಾರಿಕೆ ಮತ್ತು ನಾಗರಿಕರ ಪಾಲ್ಗೊಳ್ಳುವಿಕೆಯನ್ನು ಆಧುನೀಕರಿಸುವುದು ಈ ಯೋಜನೆಯ ದೃಷ್ಟಿಕೋನವಾಗಿದೆ. ಕೃಷಿ ಕಾಲದಲ್ಲಿ ಕೃಷಿ ಕಾರ್ಮಿಕರ ಸಮರ್ಪಕ ಲಭ್ಯತೆಗೆ ಸುಗಮಗೊಳಿಸಲು ಯೋಜನೆಯಡಿ ೬೦ ದಿನಗಳ ಕಾಲ ವಿರಾಮ ನೀಡುವ ವಿಶೇಷ ವ್ಯವಸ್ಥೆ ಮಾಡಲಾಗಿದೆ ಎಂದರುಯ.
ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಎಂ.ಬಾಬು ಮಾತನಾಡಿ, ವಿಬಿಜಿರಾಮ್ಜಿ ಯೋಜನೆ ಯಶಸ್ವಿಯಾಗಿ ಅನುಷ್ಠಾನ ಮಾಡಲು ರೂಪುರೇಷೆ ಸಿದ್ಧಪಡಿಸಿಲಾಗಿದೆ. ಯೋಜನೆಯಡಿ ಅಧಿಕಾರಿಗಳು ಗ್ರಾಮೀಣ ಜನರಿಗೆ ಉದ್ಯೋಗ ಕಲ್ಪಿಸುವುದರ ಜೊತೆಗೆ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳನ್ನು ಪರಿಣಾಮಕಾರಿಯಾಗಿ ಕೈಗೆತ್ತಿಕೊಳ್ಳಬೇಕು ಎಂದು ಸೂಚಿಸಿದರು.
ಮೈಸೂರಿನ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಯಿಂದ ವಿಶೇಷ ತರಬೇತಿ ಪಡೆದ ಮಾಸ್ಟರ್ ತರಬೇತುದಾರರಾದ ಹೊಸದುರ್ಗ ತಾ.ಪಂ. ಸಹಾಯಕ ನಿರ್ದೇಶಕ ನಯಾಜ್ ಕಾಯ್ದೆಯ ಕುರಿತು ಮಾಹಿತಿ ನೀಡಿದರು.
ಚಿತ್ರದುರ್ಗ ತಾ.ಪಂ. ಅಭಿವೃದ್ಧಿ ಅಧಿಕಾರಿ ಚೈತ್ರ ಯೋಜನೆಯ ಉದ್ದೇಶ ಹಾಗೂ ಸಾಂಸ್ಥಿಕ ಚೌಕಟ್ಟು ಹಾಗೂ ಸಹಾಯಕ ನಿರ್ದೇಶಕ ಯರ್ರಿಸ್ವಾಮಿ ಯೋಜನಾ ಪ್ರಕ್ರಿಯೆಯ ಹಂತಗಳ ಕುರಿತು ತಿಳಿಸಿದರು.
ಹೊಳಲ್ಕೆರೆ ತಾ.ಪಂ. ಸಹಾಯಕ ನಿರ್ದೇಶಕ ನಟರಾಜ್ ಯೋಜನೆಯ ಹಣಕಾಸು ವ್ಯವಸ್ಥೆ ಮತ್ತು ಸಾಮಾಜಿಕ ಪರಿಶೋಧನೆ ಕುರಿತು ಹಾಗೂ ಹೊಸದುರ್ಗ ತಾ.ಪಂ. ತಾಂತ್ರಿಕ ಸಂಯೋಜಕ ಸಂತೋಷ್ ಯೋಜನೆಯ ತಂತ್ರಜ್ಞಾನದ ಪಾತ್ರ ಮತ್ತು ಅನುಮತಿಸಲಾದ ಕಾಮಗಾರಿಗಳು ಕುರಿತು ತರಬೇತಿ ನೀಡಿದರು.
ಕಾರ್ಯಾಗಾರದಲ್ಲಿ ೬ ತಾಲ್ಲೂಕು ಪಂಚಾಯಿತಿಗಳು ಅಧಿಕಾರಿಗಳು, ಪಿಡಿಒಗಳು, ಸಂಯೋಜಕರು ಸಿಬ್ಬಂದಿ ಉಪಸ್ಥಿತರಿದ್ದರು. ಜಿಲ್ಲಾ ಐಇಸಿ ಸಂಯೋಜಕ ಎಂ.ಎಸ್.ರವೀಂದ್ರನಾಥ್ ಕಾರ್ಯಕ್ರಮ ನಿರೂಪಿಸಿದರು.



