ಚಂದ್ರವಳ್ಳಿ ನ್ಯೂಸ್, ನವದೆಹಲಿ:
ಕೇಂದ್ರ ಭಾರಿ ಕೈಗಾರಿಕೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಸರ್ಕಾರಿ ಸ್ವಾಮ್ಯದ 'ಆಂಡ್ರ್ಯೂ ಯೂಲ್ ಆಂಡ್ ಕಂಪನಿ ಲಿಮಿಟೆಡ್' ಸಂಸ್ಥೆಯ ಚಹಾ ತೋಟದ ವ್ಯವಹಾರ ಹಾಗೂ ಕಾರ್ಮಿಕರ ಕಲ್ಯಾಣಕ್ಕೆ ಸಂಬಂಧಿಸಿದಂತೆ ದೆಹಲಿಯಲ್ಲಿ ಮಹತ್ವದ ಪರಿಶೀಲನಾ ಸಭೆ ನಡೆಸಿದರು.
ಸಭೆಯಲ್ಲಿ ಚಹಾ ತೋಟದ ವಲಯ ಎದುರಿಸುತ್ತಿರುವ ವಿವಿಧ ನೀತಿ-ನಿಯಮಗಳ ಸವಾಲುಗಳು, ಸಂಸ್ಥೆಯ ಸುಸ್ಥಿರತೆ ಮತ್ತು ಕಾರ್ಮಿಕರ ಹಿತರಕ್ಷಣೆ ಕುರಿತು ಸುದೀರ್ಘ ಚರ್ಚೆ ನಡೆಸಲಾಯಿತು.
ಕಾರ್ಮಿಕರ ಕಲ್ಯಾಣವೇ ಮೊದಲ ಆದ್ಯತೆ:
ಸಭೆಯ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ತೋಟದ ಕಾರ್ಮಿಕರ ಹಿತ ಕಾಯಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದ್ದಾರೆ.
"ಆಂಡ್ರ್ಯೂ ಯೂಲ್ ಕಂಪನಿಯ ಚಹಾ ತೋಟಗಳ ಕಾರ್ಯನಿರ್ವಹಣೆಯನ್ನು ಬಲಪಡಿಸುವುದು, ಕಾರ್ಯಾಚರಣೆಯ ಸುಸ್ಥಿರತೆಯನ್ನು ಸುಧಾರಿಸುವುದು ಮತ್ತು ಚಹಾ ತೋಟದ ವಲಯದ ಮೇಲಾಗುತ್ತಿರುವ ನೀತಿ ವಿಷಯಗಳ ಪರಿಹಾರದ ಕುರಿತು ಸಭೆಯಲ್ಲಿ ಪ್ರಮುಖವಾಗಿ ಚರ್ಚಿಸಲಾಯಿತು.
ಸರ್ಕಾರದ ವಿವಿಧ ಕಲ್ಯಾಣ ಯೋಜನೆಗಳ ಜೊತೆ ಪರಿಣಾಮಕಾರಿಯಾಗಿ ಸಂಯೋಜನೆಗೊಳ್ಳುವ ಮೂಲಕ, ತೋಟದ ಕಾರ್ಮಿಕರ ಹಿತಾಸಕ್ತಿಗಳನ್ನು ರಕ್ಷಿಸುವುದರ ಜೊತೆಗೆ ಸಂಸ್ಥೆಯ ದೀರ್ಘಾವಧಿಯ ಯಶಸ್ಸನ್ನು ಖಾತ್ರಿಪಡಿಸಿಕೊಳ್ಳುವ ಕ್ರಮಗಳ ಬಗ್ಗೆಯೂ ಪರಿಶೀಲಿಸಲಾಯಿತು."
ಕೇಂದ್ರ ಭಾರಿ ಕೈಗಾರಿಕಾ ಸಚಿವಾಲಯದ ಹಿರಿಯ ಅಧಿಕಾರಿಗಳು ಹಾಗೂ ಆಂಡ್ರ್ಯೂ ಯೂಲ್ ಆಂಡ್ ಕಂಪನಿ ಲಿಮಿಟೆಡ್ನ ಉನ್ನತ ಅಧಿಕಾರಿಗಳು ಈ ಪ್ರಮುಖ ಸಭೆಯಲ್ಲಿ ಉಪಸ್ಥಿತರಿದ್ದು, ಚಹಾ ಉದ್ಯಮದ ಸದ್ಯದ ಪರಿಸ್ಥಿತಿ ಮತ್ತು ಮುಂದಿನ ನಡೆಗಳ ಕುರಿತು ಸಚಿವರಿಗೆ ಸಮಗ್ರ ಮಾಹಿತಿ ನೀಡಿದರು.



