ಚಂದ್ರವಳ್ಳಿ ನ್ಯೂಸ್, ಹರಿಹರ :
ನಗರದ ಸಾರ್ವಜನಿಕ ವಿನಾಯಕ ಸಂಘದ ವತಿಯಿಂದ ಆಯೋಜಿಸಲಾಗಿರುವ 64ನೇ ವರ್ಷದ ಗಣೇಶೋತ್ಸವದ ಅಂಗವಾಗಿ ಭಾನುವಾರ ಗಾಂಧಿ ಮೈದಾನ ದಲ್ಲಿ ಹಂದರಗಂಭ (ಧ್ವಜ ಸ್ಥoಭ) ಪೂಜಾ ಕಾರ್ಯಕ್ರಮವನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಲಾಯಿತು.
ಶಾಸಕ ಬಿ.ಪಿ.ಹರೀಶ್ ಅವರು ಹಂದರಗಂಭ ಪೂಜೆಯನ್ನು ನೆರವೇರಿಸುವ ಮೂಲಕ ಗಣೇಶೋತ್ಸವದ ಸಿದ್ಧತೆಗಳಿಗೆ ಚಾಲನೆ ನೀಡಿ, ಅರ್ಥಪೂರ್ಣ ಶ್ರದ್ದಾ-ಭಕ್ತಿಯಿಂದ ಎಲ್ಲರೂ ಸೇರಿ ಯಾವುದೇ ನ್ಯೂನತೆಗೆ ಎಡೆ ಮಾಡಿಕೊಡದೆ ಆಚರಿಸೋಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಮಿತಿಯ ಗೌರವಾಧ್ಯಕ್ಷ ನಂದಿಗಾವಿ ಶ್ರೀನಿವಾಸ್ ಮಾತನಾಡಿ , ಈ ಬಾರಿ ಗಣೇಶೋತ್ಸವವನ್ನು ವಿಶೇಷವಾಗಿ, ಅರ್ಥಪೂರ್ಣವಾಗಿ ಹಾಗೂ ಶ್ರದ್ಧಾಭಕ್ತಿಯಿಂದ ಆಚರಿಸಲು ನಿರ್ಧರಿಸಲಾಗಿದೆ. ಕೇದಾರನಾಥ ದೇವಾಲಯದ ವಿಶೇಷ ಮಾದರಿ ಪ್ರದರ್ಶನವನ್ನು ನಿರ್ಮಿಸಲಾಗುವುದು. ಉತ್ಸವವು ಶಿಸ್ತುಬದ್ಧವಾಗಿ ನಡೆಯಲು ಸಾರ್ವಜನಿಕರು ಅಗತ್ಯ ಸಹಕಾರ ಹಾಗೂ ಪ್ರೋತ್ಸಾಹ ನೀಡಬೇಕು ಎಂದು ಮನವಿ ಮಾಡಿದರು.
ಸಮಿತಿಯ ಅಧ್ಯಕ್ಷ ವಿಜಯ್ ಕುಮಾರ್ ಮಾತನಾಡಿ, ಸಾರ್ವಜನಿಕ ವಿನಾಯಕ ಸಂಘದ ವತಿಯಿಂದ ಕಳೆದ 63 ವರ್ಷಗಳಿಂದ ಗಣೇಶೋತ್ಸವವನ್ನು ಅದ್ದೂರಿಯಾಗಿ ಆಚರಿಸಿ ಕೊಂಡು ಬರಲಾಗುತ್ತಿದೆ. 64ನೇ ವರ್ಷದ ಉತ್ಸವವನ್ನು ಇನ್ನಷ್ಟು ವಿಶೇಷವಾಗಿ ಆಚರಿಸಲು ತೀರ್ಮಾನಿಸಲಾಗಿದೆ. ಎಲ್ಲಾ ವರ್ಗದ ಜನರು ಸಹಕಾರ ಮತ್ತು ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.
ಈ ಸಮಯದಲ್ಲಿ ಮರಾಠ ಸಮುದಾಯದ ನಿಗಮದ ಅಧ್ಯಕ್ಷ ಜಿ. ಎಚ್.ಮರಿಯೋಜಿರಾವ್, ಕೆಪಿಸಿಸಿ ವಕ್ತಾರ ಬಿ.ರೇವಣ ಸಿದ್ದಪ್ಪ, ಬಿಜೆಪಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಚಂದ್ರಶೇಖರ್ ಪೂಜಾರ್, ನಿಕಟಪೂರ್ವ ಅಧ್ಯಕ್ಷ ಎಂ.ಬಿ. ಅಣ್ಣಪ್ಪ, ನಗರಸಭೆ ಮಾಜಿ ಸದಸ್ಯರಾದ ಶಂಕರ್ ಕಟಾವ್ಕರ್,ಎನ್.ರಜನಿಕಾಂತ್, ಎಸ್.ಎಂ.ವಸಂತ್ ಕುಮಾರ್, ಯೂತ್ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ನಿಖಿಲ್ ಕೊಂಡಜ್ಜಿ, ಆಮ್ ಆದ್ಮಿ ಪಕ್ಷದ ಗಣೇಶ್ ದುರ್ಗದ್, ಬಸವರಾಜ್ ಹಲಸುಬಾಳು, ಮುಖಂಡರಾದ ಭಾನುವಳ್ಳಿ ದಾದಾಪೀರ್, ಉಮರ್, ಅಲ್ತಾಫ್, ನಜೀರ್ ಖುರೇಶಿ, ಸಯ್ಯದ್ ಯೂಸುಫ್, ರೋಹಿತ್, ರಮೇಶ್ ಮಾನೆ, ಪ್ರೀತಮ್ ಬಾಬು, ಸಿದ್ದಪ್ಪ, ಮಂಜುನಾಥ್, ಸಂತೋಷ್ ನೋಟದವರ್ ಸೇರಿದಂತೆ ವಿವಿಧ ಸಮುದಾಯಗಳ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.



