ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘದಲ್ಲಿ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ರವರ ೧೩೫ ನೇ ಜಯಂತಿಯನ್ನು ಮಂಗಳವಾರ ಆಚರಿಸಲಾಯಿತು.
ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಜಿಲ್ಲಾ ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ವೈ.ತಿಪ್ಪೇಸ್ವಾಮಿ ಶಿಕ್ಷಣ, ಸಂಘಟನೆ, ಹೋರಾಟಕ್ಕೆ ಡಾ.ಬಿ.ಆರ್.ಅಂಬೇಡ್ಕರ್ರವರು ಒತ್ತು ಕೊಟ್ಟಿದ್ದರು. ಪ್ರಜಾಪ್ರಭುತ್ವದಲ್ಲಿ ಸರ್ವರಿಗೂ ಸಮಾನತೆ ಸಿಗಬೇಕೆಂಬುದು ಅವರ ಆಶಯವಾಗಿತ್ತು. ಕೇವಲ ದಲಿತರಿಗಷ್ಟೆ ಅಲ್ಲ ಇಡಿ ವಿಶ್ವವೇ ಮೆಚ್ಚುವಂತ ಸಂವಿಧಾನವನ್ನು ದೇಶಕ್ಕೆ ಕೊಡುಗೆಯಾಗಿ ನೀಡಿದ್ದಾರೆಂದು ಹೇಳಿದರು.
ಬಾಲ್ಯದಲ್ಲಿಯೇ ಸಾಕಷ್ಟು ನೋವು, ಹಿಂಸೆ, ಅವಮಾನಗಳನ್ನು ಸಹಿಸಿಕೊಂಡು ಬೆಳೆದ ಡಾ.ಬಿ.ಆರ್.ಅಂಬೇಡ್ಕರ್ರವರು ಮುಂದೆ ನನ್ನ ಜನಾಂಗಕ್ಕೆ ಇಂತಹ ಕೆಟ್ಟ ಪರಿಸ್ಥಿತಿ ಬರಬಾರದು. ದೇಶದ ಪ್ರತಿಯೊಬ್ಬ ಪ್ರಜೆಯೂ ಆತ್ಮಾಭಿಮಾನ, ಗೌರವದಿಂದ ಬದುಕಬೇಕೆನ್ನುವ ಆಸೆಯಿಟ್ಟುಕೊಂಡು ಬಲಿಷ್ಟವಾದ ಸಂವಿಧಾನವನ್ನು ಕೊಡುಗೆಯಾಗಿ ನೀಡಿದ್ದಾರೆ. ಅವರ ಆಶಯದಂತೆ ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಡಬೇಕೆಂದರು.
ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಎ.ನಾಗರಾಜ್, ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಲಕ್ಷ್ಮಿದೇವಿ, ಸಂಘಟನಾ ಕಾರ್ಯದರ್ಶಿ ರಾಜು ಎಸ್, ತಾಲ್ಲೂಕು ಅಧ್ಯಕ್ಷ ಜಾವಿದ್ಭಾಷ, ಉಪಾಧ್ಯಕ್ಷ ಮನ್ಸೂರ್ಭಾಷ, ಕಾರ್ಯದರ್ಶಿ ಎಂ.ರಾಜು, ಖಜಾಂಚಿ ಟಿ.ಅಶೋಕ್, ಸಂಚಾಲಕ ವೀರೇಶ್ ಎ, ಕಾರ್ಯದರ್ಶಿ ಎಂ.ಸುರೇಶ್, ಬಿ.ಬಸವರಾಜ್, ಎಂ.ತಿಪ್ಪೇಸ್ವಾಮಿ ಇವರುಗಳು ಅಂಬೇಡ್ಕರ್ ಜಯಂತಿಯಲ್ಲಿ ಭಾಗವಹಿಸಿದ್ದರು.

