ಅವಾಂತರ ಸೃಷ್ಠಿಸಿದ ಅಶ್ವಿನಿ ಮಳೆ : ಮರ, ವಿದ್ಯುತ್ ಕಂಬ ಧರೆಗೆ
ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಪ್ರಸ್ತುತ ವರ್ಷದ ಅಶ್ವಿನಿ ಮಳೆ ಆರಂಭದಲ್ಲೇ ರಭಸಗಾಳಿ ಹಾಗೂ ಮಳೆಯಿಂದ ಜನರಲ್ಲಿ ಗಾಬರಿಹುಟ್ಟಿಸಿದೆ. ಗುರುವಾರ ಸಂಜೆ ಬೀಸಿದ ಗಾಳಿಗೆ ನಗರಂಗೆರೆ ಗ್ರಾಮದ ಬೋವಿಕಾಲೋನಿಯಲ್ಲಿರುವ ತಿಪ್ಪೇಸ್ವಾಮಿ ಎಂಬುವವರ ಮನೆ ಮುಂದೆ ಎರಡು ಮರಗಳು ನೆಲಕ್ಕುರುಳಿವೆ. ಮರಬಿದ್ದ ಹಿನ್ನೆಲೆಯಲ್ಲಿ ಮಳೆಯ ನೀರು ಮನೆಯ ಮುಂದೆ ನಿಂತು ಓಡಾಡಲು ತೊಂದರೆ ಉಂಟಾಗಿದ್ದು ಚರಂಡಿ ನಿರ್ಮಿಸುವಂತೆ ಅವರು ಆಗ್ರಹಿಸಿದ್ದಾರೆ.
ಕೆಂಚವೀರನಹಳ್ಳಿ ಗ್ರಾಮದಲ್ಲೂ ಗಾಳಿಗೆ ಅಲ್ಲಲ್ಲಿ ಕೆಲವು ಮರಗಳು ನೆಲಕ್ಕುರುಳಿವೆ, ವಿದ್ಯುತ್ ವೈರ್ಗಳ ಮೇಲೆ ಮರಬಿದ್ದ ಹಿನ್ನೆಲೆಯಲ್ಲಿ ವೈರ್ಗಳು ತುಂಡಾಗಿ ರಾತ್ರಿ ವಿದ್ಯುತ್ ಇಲ್ಲದೆ ಜನರು ಕಾಲಕಳೆಯಬೇಕಾಯಿತು.
ಮನೆ, ರಸ್ತೆಗಳ ಮೇಲೆ ಬಿದ್ದ ಮರಗಳನ್ನು ಗ್ರಾಮಸ್ಥರೇ ತೆರವು ಮಾಡುವ ಕಾರ್ಯದಲ್ಲಿ ತೊಡಗಿದ್ದರು. ಅಲ್ಪ ಮಳೆಬಂದರೂ ಬೀಸಿದ ರಭಸಗಾಳಿಗೆ ವಿದ್ಯುತ್ ಕಂಬಗಳು ಕೆಲವು ಅರ್ಥಕ್ಕೆ ಮುರಿದರೆ ಇನ್ನೂ ಕೆಲವು ವಾಲಿ ಜನರಿಗೆ ಭಯವನ್ನುಂಟು ಮಾಡಿದವು.

