ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ವಿದ್ಯಾರ್ಥಿಗಳ ಹಾಗೂ ಉಪನ್ಯಾಸಕರ ನಡುವೆ ಆತ್ಮೀಯವಾದ ಬಾಂಧವ್ಯವಿರಲಿ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಡಾ.ಎಸ್.ಎಂ.ಜಯಕರ ಹೇಳಿದರು.
ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿನ ಬಿಎ ಸ್ನಾತಕ ಪದವಿ ವಿಭಾಗದಿಂದ ಆಯೋಜಿಸಿದ್ದ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಮತ್ತು "ಸ್ನಾತಕ ಸಾರ್ಥಕತೆ" ಪುಸ್ತಕ ಬಿಡುಗಡೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳ ಮುಖದಲ್ಲಿನ ಸಂತೋಷ ಮತ್ತು ಉಪನ್ಯಾಸಕರ ಮುಖದಲ್ಲಿನ ಮಂದಹಾಸವು ಕೇವಲ ಒಂದು ಕಾರ್ಯಕ್ರಮದ ಸಂಭ್ರಮವಲ್ಲ, ಹಲವು ವರ್ಷಗಳ ಶಿಕ್ಷಣ, ಮಾರ್ಗದರ್ಶನ ಮತ್ತು ಪರಸ್ಪರ ಗೌರವದ ಪ್ರತೀಕವಾಗಿದೆ ಎಂದರು.
ವಿದ್ಯಾರ್ಥಿಗಳ ಯಶಸ್ಸು ಹಾಗೂ ಸಾಧನೆಗಳು ಉಪನ್ಯಾಸಕರಿಗೆ ಹೆಮ್ಮೆಯ ವಿಷಯವಾಗಿದ್ದು, ಅವರ ಸಂತೋಷವೇ ಶಿಕ್ಷಕರಿಗೆ ನಿಜವಾದ ಬಹುಮಾನವಾಗಿದೆ. ಅದೇ ರೀತಿ ಉಪನ್ಯಾಸಕರ ಪ್ರೀತಿ, ಕಾಳಜಿ ಮತ್ತು ಮಾರ್ಗದರ್ಶನ ವಿದ್ಯಾರ್ಥಿಗಳ ಜೀವನದಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಈ ಕಾರಣದಿಂದಾಗಿ ಈ ಸಮಾರಂಭವು ಕೇವಲ ವಿದಾಯ ಹೇಳುವ ಸಂದರ್ಭವಲ್ಲ, ಅದು ವಿದ್ಯಾರ್ಥಿ-ಶಿಕ್ಷಕರ ನಡುವಿನ ಅಮೂಲ್ಯ ಸಂಬಂಧವನ್ನು ನೆನಪಿಸಿಕೊಳ್ಳುವ ಭಾವನಾತ್ಮಕ ಕ್ಷಣ ಎಂದು ಹೇಳಿದರು.
ಡಾ.ಆರ್.ಎಸ್ ದೇಶಪಾಂಡೆ ಮಾತನಾಡಿ ವಿದ್ಯಾರ್ಥಿಗಳು ಜೀವನದ ಹೊಸ ಹಾದಿಯಲ್ಲಿ ಮುನ್ನಡೆಯುವಾಗ ತಮ್ಮ ಶಿಕ್ಷಕರಿಂದ ಪಡೆದ ಮೌಲ್ಯಗಳು, ಜ್ಞಾನ ಮತ್ತು ಸಂಸ್ಕಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಈ ಸಂಬಂಧವು ಶಿಕ್ಷಣ ಸಂಸ್ಥೆಯ ನಿಜವಾದ ಶಕ್ತಿಯಾಗಿದ್ದು, ಸಮಾಜ ನಿರ್ಮಾಣದಲ್ಲಿಯೂ ಮಹತ್ವದ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು.
“ವಿದ್ಯಾರ್ಥಿಗಳ ಮುಂದಿನ ಜೀವನವು ಉನ್ನತ ಸಾಧನೆಗಳನ್ನು ಮಾಡುವುದರ ಮೂಲಕ ವಿದ್ಯಾಭ್ಯಾಸದ ಪಯಣವನ್ನು ಸ್ಮರಣೀಯವಾಗಿಸುವುದರ ಜೊತೆಗೆ ವಿಶ್ವವಿದ್ಯಾಲಯಕ್ಕೆ, ಸಮಾಜಕ್ಕೆ ತಮ್ಮ ಭವಿಷ್ಯದ ಬದುಕಿಗೆ ಹೊಸ ಉತ್ಸಾಹದಿಂದ ಕೂಡಿರಲಿ”.
ಪ್ರೊ. ಎಸ್.ಆರ್. ಕೇಶವ, ಬಿಎ ಸ್ನಾತಕ ಪದವಿ ವಿಭಾಗದ ಸಂಯೋಜಕರು.
“ಬಿಎ ಸ್ನಾತಕ ಪದವಿ ವಿಭಾಗದಿಂದ ನಿಯತಕಾಲಿಕೆ ಶೈಕ್ಷಣಿಕ, ಸಾಂಸ್ಕೃತಿಕ, ಕೌಶಲ್ಯಾಭಿವೃದ್ಧಿ ಹಾಗೂ ಸಾಮಾಜಿಕ ಸೇವಾ ಚಟುವಟಿಕೆಗಳ ಸಮಗ್ರ ಬೆಳವಣಿಗೆ ಯುವೋತ್ಸವ, ಅರ್ಥೋತ್ಸವ, ಕಾರ್ಯಾಗಾರಗಳು, ಎನ್ಎಸ್ಎಸ್ ಶಿಬಿರ, ವಿಶೇಷ ಉಪನ್ಯಾಸಗಳು, ವಿದ್ಯಾರ್ಥಿಗಳ ಸಾಹಿತ್ಯ ಸೃಜನಶೀಲತೆ ಹಾಗೂ ಅಧ್ಯಾಪಕರ ಶೈಕ್ಷಣಿಕ ಸಾಧನೆಗಳನ್ನು ಒಳಗೊಂಡ ವಿಭಾಗವು ಸರ್ವತೋಮುಖ ಬೆಳವಣಿಗೆಯ ಕಂಡು ಬರುತ್ತದೆ”.
ಪ್ರೊ. ಎಸ್.ವೈ. ಸುರೇಂದ್ರ ಕುಮಾರ್, ಬಿಎ ಸ್ನಾತಕ ಪದವಿ ವಿಭಾಗದ ಉಪಸಂಯೋಜಕರು.
ಇದೇ ವೇಳೆಯಲ್ಲಿ ಬೆಂಗಳೂರು ವಿವಿಯ ಕುಲಪತಿ ಪ್ರೊ. ಡಾ. ಎಸ್.ಎಂ. ಜಯಕರ, ವಿಭಾಗದ ಸಂಯೋಜಕ ಪ್ರೊ. ಎಸ್.ಆರ್. ಕೇಶವ, ಉಪಸಂಯೋಜಕ ಪ್ರೊ. ಎಸ್.ವೈ. ಸುರೇಂದ್ರ ಕುಮಾರ್, ಅತಿಥಿ ಉಪನ್ಯಾಸಕರಾದ ಡಾ. ಕರಿಯಣ್ಣ ಈ, ಡಾ. ಸಿದ್ದಪ್ಪಾಜಿ ಡಿ, ಡಾ. ರಾಜಣ್ಣ ಕೆ, ಡಾ. ಶಶಿಕುಮಾರ್ ವಿ, ಡಾ ಚಂದನ, ಹರೀಶ ಆರ್ ಜೋಗಿನ್, ಡಾ. ಹನುಮಂತರಯಪ್ಪ, ಡಾ. ಸಾರ ನಕ್ವಿ ಮತ್ತು ಬೋಧಕೇತರ ಸಿಬ್ಬಂದಿ, ಕಚೇರಿ ಸಹಾಯಕರಾದ ಶೋಭಾ ಮತ್ತು ಅಂಜಪ್ಪ, ವಿದ್ಯಾರ್ಥಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.



